ಕಣ್ಣುಗಳು ಮಾತಾಡ್ತಾವ ?

 

ಬಹಳಷ್ಟು ಸಿನಿಮಾಗಳಲ್ಲಿ ಒಂದು common  ಸೀನು  …
“ನೋಡು ಇಲ್ನೋಡು, ನನ್ನ ಕಣ್ಣಲ್ಲಿ ಕಣ್ಣಿಟ್ಟು  ಉತ್ತರ ಕೊಡು …”
– ತಾಯಿಯೋ ಪ್ರೆಯಸಿಯೋ ಹುಡುಗನ ಭುಜವಿಡಿದು ಅಲುಗಾಡಿಸುತ್ತಿರುತ್ತಾಳೇ  ..
ನೋಡಿಬಿಟ್ಟರೆ ಎಲ್ಲಿ ಸತ್ಯ  leak ಆಗಿಬಿಡುತ್ತೋ ಅನ್ನುವಂತೆ ವಿಲವಿಲ ಒದ್ದಾಡುತ್ತಾ ಅವನು ಕಣ್ತಪ್ಪಿಸುತ್ತಿರುತ್ತಾನೆ  …
ಆವಾಗೆಲ್ಲ ನನ್ನ ಮನಸಲ್ಲಿ ಮೂಡೋ ಪ್ರಶ್ನೆ  ಕಣ್ಣಲ್ಲಿ  ಸತ್ಯ ಮತ್ತು ಮಾತು ಕೇಳಿಸುತ್ತದ ??..
ಹಿಂದೆಯೇ ಒಂದು ಪುಟ್ಟ ಜೋಕು .
ಪೋಲಿಸೊಬ್ಬ ಕಳ್ಳನನ್ನು ಹಿಡಿದು  -“ನೋಡು ಇಲ್ನೋಡು ನನ್ನ ಕಣ್ಣಲ್ಲಿ ಕಣ್ಣಿಟ್ಟು ಹೇಳು, ನೀನು ಕಳ್ಳತನ ಮಾಡಿದೆಯ ?” ಎನ್ನುವುದು
ಅತವ
“your honour ನೋಡಿ ಇವನ ಕಣ್ಣಲ್ಲಿ ಕಣ್ಣಿಟ್ಟು ನೋಡಿ ಸತ್ಯ ಕಾಣಿಸುತ್ತಿದೆ  ” ಎನ್ನುವುದು .
ಆಪ್ತ ಸಂಬಂಧವೆ ಬೇರೆ. ಹೌದು …. ಆದರೆ  Mask ಧರಿಸಿಕೊಂಡು ವ್ಯವಹಾರಕ್ಕಿಳಿಯುವ ಬಹುತೇಕರ ಕಣ್ಣಲ್ಲೂ ವಂಚನೆ

ಕಣ್ಣುಗಳು ಮತ್ತು ತುಟಿಗಳೇ ಇರಬೇಕು  ಕವಿಗಳನ್ನು ಇನ್ನಿಲ್ಲದಂತೆ ಪ್ರಚೋದಿಸಿ ಕಾಡಿಸಿರುವುದು …ಕವನ, ಹಾಡುಗಳಲ್ಲೆಲ್ಲ ಬರಿ ಅವುಗಳ ವರ್ಣನೆ, ಹೊಗಳಿಕೆಯೇ . ತುಟಿ ವಿಷಯಕ್ಕೆ ಬಂದರೆ  ಚೂರು ಕಸಿವಿಸಿ ನನಗೆ , ಅಶ್ಲೀಲತೆ ಮೆತ್ತಿಕೊಂಡು ಬಿಡುತ್ತದೆಯೇನೋ ಎನ್ನುವಂತೆ  .
ಆದರೆ ಕಣ್ಣುಗಳು ನನ್ನ ಪಾಲಿಗೆ ಪ್ರೀತಿ , ಮಮಕಾರದ ಸಾಗರ  .

ಕಣ್ಣುಗಳು ಮಿಂಚುವ ನಕ್ಷತ್ರಗಳು, ಜೋಡಿ ಕವನಗಳು, ಮಧ್ಯದ ಬಟ್ಟಲುಗಳು, ಹಾರೋ ಚಿಟ್ಟೆಗಳು  ಅಂತೆಲ್ಲ ಮೊದಲು ಓದುವಾಗ ಹೌದ ಎನ್ನುತ್ತಾ  ಕಾಲೆಳೆದುಕೊಂಡು ಕುರ್ಚಿಮೇಲೆ ಕೂತುಕೊಳ್ಳುತ್ತಿದ್ದೆ .
ಅದು ವಸಂತಕಾಲ…  ಯಾವ ಕಣ್ಣುಗಳು  ಪುಸ್ತಕದಲ್ಲಿನ ಹೋಲಿಕೆಗಳಿಗೆ  ಸೂಕ್ತ ಅಂತ relate ಮಾಡಿಕೊಂಡು ಹುಡುಗಿಯರನ್ನು observe ಮಾಡುತಿದ್ದೆ  . ಮೀನಿನಂತ ಕಣ್ಣುಗಳು  ಸಕ್ಕತ್ತು ರೋಮ್ಯಾಂಟಿಕ್ ಆಗಿ ಕಂಡವು…ಕಡುಗಪ್ಪು  ,ನೀಲಿ , ಹಸಿರು ಬಣ್ಣದ ಕಣ್ಣುಗಳು  ವಿಶೇಷ ಎನಿಸುತ್ತಿದ್ದವು  .
ನನ್ನನ್ನು ನಾನು ಪ್ರೀತಿಸಿಕೊಳ್ಳಬೇಕಿದ್ದ ಕಾಲ ಅದು .ಯಾವ ಹೋಲಿಕೆಗೂ ಒದಗದ ನಾರ್ಮಲ್ ಕಣ್ಣು ನನ್ನದು ಅನಿಸುತ್ತಿರುವಾಗಲೇ ಅದಕ್ಕೊಂದಿಷ್ಟು ಕಾಡಿಗೆ ತೀಡಿ  , eyeliner  ಹಚ್ಚಿ, mascara ಮೆತ್ತಿ ನೋಡಿಕೊಳ್ಳುವಾಸೆ.. ಅದ್ಯಾಕೋ ಕೆಲವೊಂದು ವಸ್ತುಗಳೇ ಹಾಗೆ ಸುಮ್ಮನೆ ಮೋಹ ಹುಟ್ಟಿಸಿಬಿಡುತ್ತವೆ.
ನೀಲಿ ನನ್ನ ಪಾಲಿನ ಅಗಾದ ಸೆಳೆತ .. ನೀಲಿ ಹೂವು, ನೀಲಿ ಕಡಲು, ನೀಲಿ ಆಕಾಶ , ನೀಲಿ eyeliner …

ನಮ್ಮ ಮನೆಯ ಗಂಡಸರಿಗೆ ಮನೆಯಹೆಣ್ಮಕ್ಕಳು ಗಾಡವಾಗಿ ಕಣ್ಕಪ್ಪು ಹಚ್ಚುವುದು  ಒಂದುರೀತಿ ವರ್ಜೆ !!!
ಅಪ್ಪಿತಪ್ಪಿ ಬಳಿದುಕೊಂಡು ಹೊರಗೆ ಬಂದು ನಿಂತರೆ ದುರದುರ ನೋಡಿ , ಸಿಡಿಮಿಡಿಗುಟ್ಟುಬಿಡುತ್ತಿದ್ದರು.
“ಅದೇನು ಹಾಗೆ ಬಳ್ಕೊಂಡಿದ್ದೀಯ ,ದೆವ್ವದ ತರಹ! ಮೊದಲು ಹೋಗಿ ತೆಗಿ  “
ಅಳು ಬಂದುಬಿಡುತ್ತಿತ್ತು ಅಂತ ತಪ್ಪು ಏನು ಮಾಡಿದೆ ಅಂತ
ಅರ್ಥಾಗುತಿತ್ತು ಅಪ್ರಾಪ್ತ ಪದಪ್ರಯೋಗವಷ್ಟೇ ,ಅದು ದೆವ್ವದ ತರಹ ಅಲ್ಲ …
ಕರೆವೆಣ್ಣಿನ  ತರಹ…
ಆದರು ನನಗೆ ತೀರದ ಮೋಹ…ಅಪ್ಪ ಮನೆಯಲ್ಲಿ ಇಲ್ಲದಾಗ ಹಚ್ಚಿಕೊಂಡು ಕನ್ನಡಿ ಎದುರು ನಿಲ್ಲೋದು, ಫೋಟೋ ತೆಗೆಸಿಕೊಳ್ಳೋದು.

ಅದು ಅಕ್ಕನ ಮದುವೆ.ಅಪ್ಪನ ಎಲ್ಲ ಹದ್ದುಬಸ್ತನ್ನು ಮೀರಿ ಇನ್ನಿಲ್ಲದಂತೆ ಸಿಂಗರಿಸಿಕೊಂಡು ಬಿಟ್ಟಿದ್ದೆ.ಕೆಂಪು ಸೀರೆ, ಅಲೆಗಳಂತೆ ತಿರುಪಿ ಇಳೆ ಬಿಟ್ಟುಕೊಂಡಕೂದಲು, ಕೆಂಪು ಲಿಪ್ಸ್ಟಿಕ್ , ಕಪ್ಪು ಕಾಡಿಗೆ, ರೋಸಿ ಬ್ಲಶ್!!
ಮೊತ್ತಮೊದಲ ಬಾರಿಗೆ ಹಿಂದಿಯ ರೇಖಾಳಂತೆ   ಬೋಲ್ಡ್    ಆಗಿ decorate ಆಗಿದ್ದೆ .ತಂತಾನೇ  ಅಡರಿಕೊಂಡ ವಿಪರೀತ ದರ್ಪ, ಜಂಭದ ಸೊಕ್ಕು ..
ರೂಮಿನಿಂದ ಹೊರಟು  ಸ್ಟೇಜ್ ಮೇಲೆ ನಡೆದು ಬರುತ್ತಿದ್ದರೆ ಸುಂದರಿಯ ಗತ್ತು …
ಗೊತ್ತು ನನಗೆ ಚೆನ್ನಾಗಿ ಗೊತ್ತು .ಅಪ್ಪ ಮಿಸುಕಾಡದೆ ಇರುವುದಿಲ್ಲ .
ಆದರು ಧೈರ್ಯವಾಗಿ ಎದುರುಹೋಗಿ ಹಲ್ಲು ಗಿಂಜುತ್ತ  ನಿಂತವಳ  ಮೇಲೆ ಸೆರಗು ಜಾರಿಹೋಗಿದೆಯೇನೋ ಎನ್ನುವಷ್ಟು ಕುಪಿತರಾದರು ಅಪ್ಪ    .ಮೊದಲು ಹೋಗಿ ಲಿಪ್ಸ್ಟಿಕ್ ಕಮ್ಮಿ  ಮಾಡಿಕೊಂಡು ಬಾ, ಸಕ್ಕತ್ತು ಓವರ್ ಆಯಿತು ಅಂತ ಉಗಿದರು  .
ಅವತ್ತು ಯಾವುದನ್ನು ಕಡಿಮೆ ಮಾಡೋ ಮೂಡಲ್ಲಿ  ಇರಲೇ ಇಲ್ಲ  ನಾನು.ನನ್ನನ್ನು ಆ ಅವತಾರದಲ್ಲಿ ಎಂದಿಗೂ ನೋಡದವರು ‘ಹೇಯ್ ಸಕ್ಕತಾಗಿ ಕಾಣ್ತಿದ್ಯ   ಎಂದ್ದಿದ್ದರು .ನಮ್ಮೂರಿನ ಕೆಲಸದಾಳು heroin ನ ಕಂಡು ಸಂಭ್ರಮಿಸುವಂತೆ  ಕೈ ಎತ್ತಿ ಬೀಸಿ wish  ಮಾಡಿದ್ದ ..

ಆದರು ಅಪ್ಪನ ಅಂಕುಶವನ್ನು ಮೀರುವ ಹುಚ್ಚು ಧೈರ್ಯವಿರಲಿಲ್ಲ .ಯಾಕಿಂಗೆ ಆಡ್ತಾರೋ, ಎಲ್ಲ normal ಆಗೇ ಇದ್ದರು ಅಂತ ಬಡಬಡಿಸಿಕೊಂಡೆ  ಒಂದೆರಡು ಕೋಟ್ ಕಮ್ಮಿ ಇಳಿಸಿದೆ .
ಊರೆಲ್ಲ ಹೊಗಳಿದ್ದರು  ಹೆಚ್ಚು ಕಮ್ಮಿ ಒಂದು ವರ್ಷದವರೆಗೂ ಆಲ್ಬಮ್ ಮೊಗಚಿಹಾಕುವಾಗಲೆಲ್ಲ ಅಪ್ಪ, ಚಿಕ್ಕಪ್ಪ ಏನೇ  ಆದರು ಅವತ್ತು ನಿಂದು ಮೇಕ್ಅಪ್ ಜಾಸ್ತಿ  ಆಗಿತ್ತು ಅಂತ ಉರಿಯುತ್ತಿದ್ದರು.

ಶಾಲೆಯಲ್ಲಿದ್ದಾಗ ಪಕ್ಕದವರ ಮೇಲೆ ಕೋಪಮಾಡಿಕೊಂಡು ಕಣ್ಣಗಲಿಸಿ ಗದರುತ್ತಿದ್ದರೆ , ದೆವ್ವ ನೋಡಿ ಬೆಚ್ಚಿದಂತೆ , ಅಮ್ಮ ನೀನು ಬೇಕಾದ್ರೆ ಒಡೆದುಬಿಡು ಆದರೆ ಹೀಗೆಲ್ಲ ಕಣ್ಣುಬಿಡಬೇಡ, ಭಯ ಆಗುತ್ತೆ  ಅಂತ ಅಂದುಬಿಡುತ್ತಿದ್ದರು.
ಬೆಕ್ಕಿನ ಕಣ್ಣು ಅಂದವರು ಇದ್ದರು, ಹತ್ತಿರದಿಂದ ನೋಡಿದರೆ retina structure ಸ್ಪಷ್ಟವಾಗಿ ಸ್ಟಡಿ ಮಾಡಬಹುದಿತ್ತು .

ಕ್ಯಾಂಪಸ್ recruitment  ಟೈಮ್ನಲ್ಲಿ ಮತ್ತು ಕೆಲ್ಸಕ್ಕೆ ಸೇರಿದ ತರುವಾಯ ,   softskills training ಅಂತ ಒಂದು ನಡೆಯುತ್ತದೆ .ನಮ್ಮ ಗಾಂಪತನಕ್ಕೆ professional ಮೇಕ್ ಓವರ್ ನೀಡುವ ಪ್ರಯತ್ನ .
ಮೊತ್ತಮೊದಲ ಪಾಠ ಕಣ್ಣಲ್ಲಿ ಕಣ್ಣಿಟ್ಟು ಮಾತಾಡಬೇಕು .ಕಣ್ಣು ನಿಮ್ಮ ವ್ಯಕ್ತಿತ್ವದ ಆತ್ಮವಿಶ್ವಾಸವನ್ನು ತೋರಿಸುತ್ತದೆ .ಗುಂಪಿನಲ್ಲಿ ಮಾತಾಡುವಾಗ ಎಲ್ಲರ ಕಡೆಯೂ ತಿರುಗುತ್ತಾ ಮಾತಾಡಬೇಕು .
ಕಣ್ಣಲ್ಲಿ ಕಣ್ಣಿಟ್ಟು ಮಾತಾಡೋದು ಅಷ್ಟು ಸುಲಭವ, ಅಪ್ಪನ ಮಗಳ ಪ್ರಶ್ನೆ ! ಹೆಣ್ಣಿನ ತೊಳಲಾಟವೋ   ಆತ್ಮವಿಶ್ವಾಸದ ಕೊರತೆಯೋ ….

ಜನರ ಜೊತೆ  ಹೆಚ್ಚೆಚ್ಚು ಒಡನಾಡಬೇಕಾದ ನೌಕರಿಯಲ್ಲಿರುವವರಿಗೆ ಅನುಭವವೇ ಟ್ರೇನಿಂಗ ನೀಡಿರುತ್ತದೆ .
ಟೀಚೆರು , ಡಾಕ್ಟರು , ರಾಜಕಾರಣಿಗಳು , ಪೋಲಿಸೋರು ,ಲಾಯರುಗಳಿಗೆ ಎಷ್ಟೆಷ್ಟು ಆಂಗಲ್ ನಲ್ಲಿ pupil ತೆರೆದರೆ, ಎಷ್ಟು ಎತ್ತರಕ್ಕೆ ಉಬ್ಬು ಏರಿಸಿದರೆ  , ಎಷ್ಟು ಕತ್ತು ಗುನಕುಹಾಕಿದರೆ, ಎಷ್ಟು ಕೈ ಆಡಿಸಿದರೆ ನೋಡುವವರಿಗೆ ಏನೇನು ರವಾನೆಯಾಗುತ್ತದೆ,  ಅರ್ಥ ತಲುಪುತ್ತವೆ ಗೊತ್ತಿರುತ್ತದೆ .
ನಮ್ಮದು ವಿಚಿತ್ರ professionnu .ಇಡಿ ದಿನ ಒಂಬತ್ತು ಗಂಟೆ ಕಂಪ್ಯುಟರಿನ ಸ್ಕ್ರೀನಿಗೆ ಕಣ್ಣನೆಟ್ಟು    ನಿರ್ಭಾವುಕವಾಗಿ   ಮಾಡುವ ಕೆಲಸ .ಚಾಟ್, ಇಮೇಲ್ , ಕಾಲ್ ನಲ್ಲಿ ಮಾತು .
ಪಕ್ಕ ಇದ್ದವರನ್ನು ಕಣ್ಣಲ್ಲಿ ನೋಡದೆ ಮಾತಾಡುತ್ತಾ   ತರಾತುರಿಯಲ್ಲಿ ಕುಟ್ಟುವ ಕೆಲಸ .

ಕಣ್ಣುಗಳ ಬಗ್ಗೆ ಕತೆಗಳಿದ್ದವು .
ಆ ಹಾಹಾ…!! ಮಾಯಾಂಗನೆ ನೋಡು ಕಣ್ಣಲ್ಲೇ ಮರಳು ಮಾಡಿ ಹೆದರಿಸಿ ಗಂಡನನ್ನು ಕಟ್ಟಿಹಾಕಿಬಿಟ್ಲು ಅಂತ ಬೈದುಕೊಳ್ಳುತಿದ್ದದ್ದನ್ನು ಕೇಳಿದ್ದೆ .
ದಿಗಿಲಿಗೆ ಕೆಕರುಪಕರಾಗಿ ಬಿಟ್ಟಗಣ್ಣುಬಿಟ್ಟಂತೆ ನಿಂತು ಬಿಡುತ್ತಿದ್ದ ಅಮ್ಮನನ್ನು ತೋರಿಸಿ ನಗುತ್ತ ಅಪ್ಪ ಆಡಿಕೊಳ್ಳುತಿದ್ದರು…ನೋಡು ಪಾಪು 60 ಕ್ಯಾಂಡಲ್ ಬಲ್ಬು ಹೇಗೆ ಹೊಳಿತಾಯಿವೆ …!!
ದುನಿಯಾ ಸಿನಿಮಾದಲ್ಲಿ ಕೇಳಬಾರದ್ದು   ಕೇಳಿ ದುರುಗುಟ್ಟಿ ನೋಡಿಸಿಕೊಂಡ ವಿಜಿ ಕೂಡ ಬಲ್ಬು ಪಳ್ ಅಂತವೇ ಅಂದಾಗ ಅಪ್ಪನನ್ನು ನೆನೆಸಿಕೊಂಡು ಪಕಪಕ ನಕ್ಕಿದ್ದೆ..

ಕೆಟ್ಟತರ್ಕದ ಹುಡುಗರು ‘ನೀವ್ ಬಿಡ್ರಮ್ಮ ಹೆಣ್ಮಕ್ಕಳು ಅತ್ತು ಆದರು ಕೆಲಸ ಜಯಿಸುತ್ತೀರಿ ”    ಅಂತೆಲ್ಲ ಅನ್ನುವಾಗ ಅದ್ಯಾಕೆ ಹೆಣ್ಣು ಮಕ್ಕಳ ಸಾಧನೆ, ಗೆಲುವನ್ನು ಈ ರೀತಿ ವಿಶ್ಲೇಷಿಸಿ ತಮ್ಮ ಸೋಲು ಸರಿಮಾಡ್ಕೊತಾರೋ ಅಂತ ಕೋಪ ಬರುತ್ತಿತ್ತು  ..ಆ ತಾರತಮ್ಯ ಮೀರೋಕೆ ನಗು, ಅಳುವನ್ನು ಬೇರೆ ರೀತಿಲಿ ಉಪಯೋಗಿಸಿಕೊಳ್ಳಬಾರದು ಎಂದು ನನಗೆ ನಾನೇ ಅಣೆಕಟ್ಟುಹಾಕಿಕೊಂಡೆ.
ನೋಡ ಬರುವ ಗಂಡುಗಳನ್ನು ಕತ್ತು ಎತ್ತಿ ನೋಡುವುದ ಹುಡುಗಿಯರ ಸಮಸ್ಯೆ …..ನಾನು ಮಾತ್ರ ಆರಾಮಾಗಿ ನೋಡುತಿದ್ದೆ… ಎರಡನೇ ಬಾರಿ ವಾಪಸ್ಸು ಬಂದಾಗಲೇ ಕಸಿವಿಸಿ  ಆಗುತ್ತಿದ್ದದ್ದು ..ತಬ್ಬಿಬ್ಬುಗೊಳ್ಳುತಿದ್ದದ್ದು.

ನನ್ನ ಕಣ್ಣುಗಳನ್ನು ಆಳವಾಗಿ ಓದಿ ವಿಶ್ಲೇಷಿಸಿದ ಮೊದಲ ಗಂಡಸು ಅಪ್ಪನೆ ಇರಬೇಕು…
ಮೊದಲೇ ಬೆಳ್ಳಗಿರುವ ಮುಖದ ಮೇಲೆ, ಗೂಬೆ ತರಾ ಹೊರಚಾಚಿರುವ ಕಣ್ಣುಗಳಿಗೆ  ಕಾಡಿಗೆ ಬೇರೆ ಅತಿಯಾಗಿ ಹಚ್ಚಿದರೆ , ಎತ್ತಿ ಎತ್ತಿ ಕಾಣುತ್ತದೆ ಎನ್ನುವ explanation ಕೊಟ್ಟು , ನೀನು ಸಿಂಪಲ್ ಆಗಿದ್ರೇನೆ ಜಾಸ್ತಿ ಚೆನ್ನಾಗಿ ಕಾಣ್ತೀಯ ಅನ್ನೋ ತುಪ್ಪಾನು ಸವರಿದ್ದರು .ಹೆಣ್ಣುಮಕ್ಕಳ ತಂದೆ ತಾಯಿಯರಿಗೆ ಎಂತೆಂತ ಸಮಸ್ಯೆಗಳಿರುತ್ತವಪ್ಪ ದೇವರೇ ..

ಅದೊಂದು ದಿನ ಯಾವುದೋ ಮಾತಿಗೆ ವಿಪರೀತ ಹರ್ಟ್ ಆಗಿ ರೋಧಿಸುತ್ತಿದ್ದೆ .ಅಪ್ಪನಿಗೆ ನಾನು ಬೆಳೆದ ಹುಡುಗಿಯಾದರೂ, ನನಗೆ ಅವರು ಅಪ್ಪಾನೆ.. ಎರಡು ವರ್ಷದ ಮೊಗು ಗದರಿದ ತಾಯಿಯ ಬಳಿ  ಓಡಿ  , ಹಿಡಿದು ಅತ್ತು, ಸಿಂಪತಿ ಗಿಟ್ಟಿಸಿಕೊಂಡು ಮುದ್ದುಮಾಡಿಸಿಕೊಳ್ಳುವಂತೆ , ಬೈದ ಅಪ್ಪನ ಪಕ್ಕಕೆ ಹೋಗಿ ಅಳುತ್ತ ಮಲಗಿದ್ದೆ .

ನನಗೆ ನೋಡೋಕೆ ಆಗಲ್ಲ, ಅಳಬೇಡ ನೀನು …. ಕಣ್ಣುವರೆಸಿದ್ದರು…ಕರುಳಬಳ್ಳಿ  ಸಂಕಟ.
ನೀನು ಅಳುತ್ತಿದ್ದರೆ  ಕೆಂಡದ  ಬಿಸಿಯಂತೆ ಕಂಗಳಿಂದ ಬಿಸಿ ಹೊರಟು ನನ್ನ  ಸುಡುತ್ತವೆ ಅಂದರು .
ದಂಡಿಗೆ ಹೆದರದ, ದಾಳಿಗೆ ಹೆದರದ , ಗಳಗಂಟೆ ಪೂಜಾರಿಗೆ ಹೆದರದ , ಅಮ್ಮನಿಗೆ, ಕಾನೂನು, ರೂಲ್ಸಿಗೆ , ಕೋರ್ಟ್ ಕೇಸುಗಳಿಗೆ ,ಯಾವುದಕ್ಕೂ ಹೆದರದ ಅಪ್ಪ, ಹೆದರುತ್ತಿದ್ದದ್ದು ತನ್ನದೇ ಹೆಣ್ಣು ಮಕ್ಕಳ ಕಣ್ಣೀರಿಗೆ…ಎಂತ ಸಂವೇದನಶೀಲಗಂಡಸು !

ಯಾವುದಕ್ಕೂ ಇರದ ಶಕ್ತಿ ಹೆಣ್ಣಿನ  ಕಣ್ನೀರಿಗಿದೆ  ಎಂದು ಹೇಳಿದವರೇ ಅಪ್ಪ.

ಆಗಷ್ಟೇ ಸೇರಿದ ಆಫೀಸಿನಲ್ಲಿ ಜೊತೆಗೆ ಸೇರಿದ ತರಲೆ ಹುಡುಗರಿದ್ದರು..ಚೂರೇ ಚೂರು ಮೇಕ್ ಅಪ್ ಮಾಡಿಕೊಂಡು ಹೋದರು, ‘ಲೇ ನಿನ್ನಜ್ಜಿ ಏನೇ ಮೇಕ್ಅಪ್ ಮಾಡಿಕೊಂಡು ಬಂದುಬಿಟ್ಟಿದ್ಯ…ಮಗ ನೋಡೋ ..’
ಅಂತ ರೇಗಿಸಿಬಿಡುತ್ತಿದ್ದರು.
ತ್ತೂ ….  ನನ್ಮಕ್ಕಳ ಮಾನಕಳೆದುಬಿಡ್ತೀರ , ಗಂಡಸರ ನೀವು ಅಂತ ಕೆನ್ನೆ ಉಬ್ಬಿಸಿಕೊಂಡು ಕೂತ್ಕೊತಿದ್ವಿ.
ನಿಜ ಯಾವ ಹುಡುಗನ ಎದುರು ಕಂಗಳನ್ನ ತೆರೆದು ಓದಿಕೋ ಎನ್ನಲಿಲ್ಲ …
ಮಾತಾಡಲೂ ಇಲ್ಲ ..ಉಪಯೋಗಿಸಿಕೊಳ್ಳಲು  ಇಲ್ಲ..

ಎಷ್ಟೇ ಬಿಸಿಲಿದ್ದಾಗಲೂ  ಕೂಲಿಂಗ್ ಗ್ಲಾಸ್ ಹಾಕದವರು   , ಟ್ರಿಪ್ ಗೆ ಹೋದಾಗ ಮರೆಯದೆ ತೆಗೆದು ಕೊಂಡುಹೋಗ್ತೀವಿ …ಹಾಕಿಕೊಂಡು ಫೋಟೋ ಹೊಡೆಸಿಕೊಳ್ತೀವಿ, facebok  ಗೆ ಹಾಕಿ ಚಮಕ್ ಕೊಡ್ತೀವಿ…
ನಮ್ಮ ಕಣ್ಣುಗಳ ಸುತ್ತದ ಕಪ್ಪು ವರ್ತುಲಗಳನ್ನೂ ಅದು ಮುಚ್ಚುತ್ತದೆ , ಗುಳಿ ಕಂಗಳಿಗೆ ತೇಪೆ ಹಾಕುತ್ತದೆ, ಸೊಗಸಾಗಿ ಕಾಣುವಂತೆ, ಎಲ್ಲ ಸರಿ ಇರುವಂತೆ ಮಾಡುತ್ತದೆ…ನಾವು ನಂಬಿಸಲು ಪ್ರಯತ್ನ ಪಡ್ತೀವಿ, ಸುಖವಾಗಿದ್ದೇವೆ ಅಂತ…ಬದುಕಿಗೂ ಅಂತದ್ದೇ ಗ್ಲಾಸ್ ಸಿಕ್ಕರೆ !!!

ಕಣ್ಣುಗಳು ಮಾತಡ್ತವೆ….ನಂಗೂ ಗೊತ್ತು
ನನ್ನದೇ ಒಂದು ಭಾವುಕ ಪ್ರಪಂಚ  ..
ಅಲ್ಲಿ ನೀಲ ಮೇಘ ಶಾಮನಿದ್ದ  .
ಕೊಳಲನೂದುತ್ತ ಅರೆಗಣ್ಣಲ್ಲಿ ತನ್ಮಯನಾದವನ ಆಲಿಂಗಿಸಿಕೊಂಡು ಉನ್ಮತ್ತಳಾದವಳ  ಕಣ್ಣುಗಳು …  ಎರಡು ಜೋಡಿ ಕಣ್ಣುಗಳು …

ನನ್ನ ಕಣ್ಣಿನ ಕವಿತೆಯ
ಓದೋ ಓ  ಹುಡುಗ
ಎನ್ನುತ್ತಾ ಎದುರು ನಿಲ್ಲಬೇಕು!!

ಭರತನಾಟ್ಯ ಆಡುವವರ ಕಣ್ಣುಗಳನ್ನು ಗಮನಿಸಿದ್ದೆ  ಆ ಕಡೆ ಇಂದ ಈ ಕಡೆಗೆ ಪಟಪಟ ಓಡಿ , ಗಿರಗಿರ ತಿರುಗಿ , ನಕ್ಕು , ಮತ್ತೊಮ್ಮೆ ಆಕ್ರೋಶಗೊಂಡು ನವರಸಗಳನ್ನೂ  ತೋರಿಸಿಬಿಡುವ ಕಣ್ಣು…ನನ್ನ ಅಕ್ಕ ಭರತನಾಟ್ಯ  ಡ್ಯಾನ್ಸರ್ .ನನಗೆ ಬರುತ್ತಿರಲಿಲ್ಲ .

ನನ್ನದು ಕವಿರಸಸಮಯ
ಒಂದು ಅದ್ಭುತ ಪೋಲಿ ಕನಸಿತ್ತು
ನಾನು ಮತ್ತ ಅವನು , ಒಂದು ನದಿ ದಂಡೆ …ಅಕಾಶದಲ್ಲಿ ಶುದ್ಧ  ಹಾಲು ಬೆಳದಿಂಗಳು ..
ಅವನ ಮಡಿಲಲ್ಲಿ ನಾನು..
ಕಣ್ಣುಗಳಲ್ಲಿ ಇಳಿಯಬೇಕು, ಆಳ ನೋಡಬೇಕು, ತೇಲಬೇಕು, ಮುಳುಗಬೇಕು , ಏನು ಆಡದೆ, ಏನು ಮಾಡದೆ ಎಲ್ಲಾ ಮಾತಾಡಬೇಕು…ಇಡಿ ರಾತ್ರಿ …
ನಿನ್ನ ಕಂಗಳ ಕೊಳದಿ
ಬೆಳದಿಂಗಳಿಲಿದಂತೆ
ನನ್ನೆದೆಯ
ಕಡಲೇಕೆ
ಬೀಗುತಿಹುದು
ಪ್ರಶ್ನೆ ಕೇಳಬೇಕು….

ಹರೆಯ, ಕನಸು, ಕವನ ಉಕ್ಕಿ ಉಕ್ಕಿ ಹರಿಯಬೇಕು …ಬೋರ್ಗರೆಯಬೇಕು..
ಅದೇ ಅಮಲಿನಲ್ಲಿ ಬರೆದು ಕೊಂಡಿದ್ದೆ —

ಕಾಡಿಗೆ ಹಚ್ಚಿದ್ದರಿಂದ ಹೆಚ್ಚಾಗದ ಕಾಂತಿ
 ನಿನ್ನ ನೆನಪುಗಳಿಂದ ಹಚ್ಚಹಸಿರಾಗಿದೆ

ಉನ್ಮಾದದ ಹುಚ್ಚು ಹುಣ್ಣಿಮೆ ಚಂದ್ರನ ಓಟದಿಂದಲ್ಲ
 ಚಂದ್ರನ ಬೆಳಕು ಜ್ನಾಪಿಸಿದ ನಿನ್ನ ನೋಟದಿಂದ

ರಾತ್ರಿಯ ನಿದ್ದೆಯಲ್ಲಿ ಮತ್ತೇರುತ್ತಿದ್ದದ್ದು
 ಹಾಸಿಗೆಯ ಮೆತ್ತನಿಂದಲ್ಲ
 ಕನಸಿನಲ್ಲಿ ನೀನಿಟ್ಟ ಮುತ್ತಿನಿಂದ

ಜಗತ್ತು ಹೊಸದಾಗಿ ಗೋಚರಿಸುತ್ತಿರುವುದು
 ಆಗುತ್ತಿರುವ ಕ್ಷಿಪ್ರ ಬದಲಾವಣೆಗಳಿಂದಲ್ಲ
 ನನ್ನ ಕಂಗಳ್ಲಲ್ಲಿ ನೀ ತುಂಬಿರುವುದರಿಂದ

ಅಪ್ಪ ಬಿಡಲಿಲ್ಲ ಅಂದ್ರೆ ಏನು, ಅವನು ಈಗಿನ ಕಾಲದವನು  ..ಹಾಗೆಲ್ಲ ತಡೆಯಲ್ಲ ..
ಸೇಲ್ಸ್ ಗರ್ಲ್ ಹಚ್ಚಿದ್ದ ಬ್ರಾಂಡ್ ನ ಹೆಸರನ್ನು ಕೇಳಿ ಕಾಡಿಗೆ ಖರೀದಿಸಿದ್ದೆ ..  

ಅದೊಂದು ಸೀನು ಆ ದಿನ ಅವನ ಕಣ್ಣುಗಳಿಗೆ ಭೀಕರ  ಕೆಂಪಿನ ಅಮಲು , ಅವಳ ತುಟಿ, ಕೆನ್ನೆಗಳೆಲ್ಲ ಅದರುತ್ತಿರುತ್ತವೆ…
ಕಲ್ಪನೆಗೆ ನಾನು ಬೆವರಿದ್ದೆ .ಆ ದಿನ ಬಂತು .
ನನ್ನ ಕಣ್ಣಲ್ಲಿ ಕಣ್ಣನೆಡಲೇ  ಇಲ್ಲ ಅವನು , ಹಾಸಿಗೆಯಲ್ಲಿತ್ತು ಅವನ ಕಣ್ಣು.. ಕೆಂಪನ್ನೇ  ಹುಡುಕುತ್ತಿತ್ತು …ಕಂಡಮೇಲೆ ತೃಪ್ತಿಯ  ಪಸೆ, ಕ್ರೌರ್ಯದ ಪಸೆ …
ಹರಿದು ಹೋಗಿದ್ದೆ ಒಳಗೆ !!
ನಿನಗೇನು  ಇಷ್ಟವಾಯಿತು ಕೇಳುತಿದ್ದ, ಮಾತು ಬೇಕಿತ್ತು, ನಿನ್ನ ಕಣ್ಣಲ್ಲಿ ನಾನೆಂದೆ…ಅವನಿಗೆ ಅರ್ಥವೇ ಆಗಲಿಲ್ಲ ….

ಅಪ್ಪ ಕಾಡಿಗೆ ಹಚ್ಚಲು ಬಿಡದೆ ಇದ್ದಿದ್ದು ಒಳ್ಳೆಯದೇ ಇತ್ತು …ಅವನಿಂದ ಪದೇಪದೇ ಅತ್ತು ಅತ್ತು,ಕಾಡಿಗೆ ಕರಗಿ ಸುರಿದು ,  ಅಂದ ಕೆಡಿಸಿಕೊಳ್ಳೋದು ತಪ್ಪಿತ್ತು .

ಇಡಿ ರಾತ್ರಿ ರಚ್ಚೆ ಮಳೆಯಂತೆ ಬೋರಲಾಗಿ ಅತ್ತುಅತ್ತು ಹುಚ್ಚು ಹಿಡಿತಿದ್ರು  ಹೆಣದಂತೆ ಮಲಗಿರುತ್ತಿದ್ದ …ನನ್ನ ಕಣ್ಣೀರು  ಅವನನ್ನು ಅಲ್ಲಾಡಿಸುತ್ತಿರಲಿಲ್ಲ…

ನೆನಪಾಯಿತು ….ಅಂದು ಆ ದಿನ ನನ್ನ ಕಂಗಳ ಆಳವಾಗಿ ಓದಿದ ಗಂಡಸು ಸತ್ತು ಹೆಣವಾಗಿ  ಮಲಗಿದ್ದ .ರಾತ್ರಿ ಎಲ್ಲ ಮಾತಾಡಿ, ಬೆಳಗ್ಗೆ ಎದ್ದು ಕೆಲಸಕ್ಕೆ ಹೋದವರನ್ನು, ಹೆಣವಾಗಿ ತಂದು ಮಲಗಿಸಿ ಕೊಂಡಿದ್ದೆವು .
ಇನ್ನಷ್ಟು ಗಂಟೆಗೆ ಮಣ್ಣು ಸೇರಿ, ಹುಳು ಹತ್ತುವ ದೇಹವನ್ನು ಕಡೆ ಬಾರಿಗೆ ಕಣ್ಣುತುಂಬಿಕೊಳ್ಳಬೇಕಿತ್ತು .
ರೆಪ್ಪ್ಪೆ ತೆರೆದು ನೋಡಿದೆ..ನನ್ನಂತವೆ,  ಕೆಂಚು ಕಣ್ಣುಗಳು !!!
ನಿನಗೂ, ನನಗೂ, ಈ ಪ್ರಪಂಚಕ್ಕೂ ಎಲ್ಲ ಋಣವೂ  ಹರಿದುಹೋಯಿತು ಎನ್ನುವಂತೆ  ನಿರ್ಭಾವುಕವಾಗಿ ಆಕಾಶಕ್ಕೆ ನೆಟ್ಟ ಕಣ್ಣುಗಳು ….ನನ್ನ ಕಣ್ಣುಗಳ ಬಿಸುಪಿಗೆ, ಬಿಸಿಗೆ ಹೆದರಿಕೊಂಡ ಕಣ್ಣುಗಳು , ಇನ್ಯಾವುದಕ್ಕೂ  ಹೆದರಲ್ಲ ಅನ್ನುತ್ತಿದ್ದವು   .
ಹಣೆಗೊಂದು ಮುತ್ತು ಕೊಟ್ಟೆ , ತಣ್ಣಗಿತ್ತು….
ತುಟಿ ಬೆಳ್ಳಗಿತ್ತು .

ಸೋಲಬಾರದು ಎಂದು ಒಂದು ಗಂಟೆ ಹೋರಾಟ ಮಾಡಿದ್ದೆ ..ಕಡೆಗೆ ಸೋತು ಮಡಿದೆ…ಪೋಲೀಸರ ಎದುರು ಕಣ್ಣೀರು ತಡೆಯಲಾರದೆ ಉದುರಿ ಬಿದ್ದವು .ಎಷ್ಟೇ ಪ್ರಯತ್ನ ಪಟ್ಟರು ಮೀರಲಾರದ ಹೆಣ್ತನ .
ಆದರೆ ಹೆದರಲು ಅವರೇನು ಅಪ್ಪ ಅಲ್ಲವಲ್ಲ…
ಒಂದಿಡೀ  ವರ್ಷ ಕಣ್ಣುಗಳನ್ನು ಶೂನ್ಯದಲ್ಲಿ ನೆಟ್ಟುಕೂತೆ …ಹಾದಿಬದಿಯಲ್ಲಿ ಮರ, ಹೂವು, ಬೆಟ್ಟಗಳಿದ್ದವು….ಎಲ್ಲ ಕಾಣುತಿತ್ತು ಆದರೆ ದೃಷ್ಟಿ ನೆಡುತ್ತಿರಲಿಲ್ಲ…
ಅವನನ್ನು ಮೀರಿ ನನ್ನ ಪ್ರೀತಿಸಿಕೊಳ್ಳಬೇಕೆಂದೇ ಮಾಡುತ್ತಿದ್ದ ವ್ಯರ್ಥ ಪ್ರಯತ್ನದಲ್ಲಿ ಒಮ್ಮೆ ನೀಲಿ eyeliner ಖರೀದಿಸಿದೆ ….ಹಚ್ಚಿಕೊಂಡ ದಿನವೇ ಅಕ್ಕ ಎಚ್ಚರಿಸಿದಳು… ಹೀಗೆಲ್ಲ ನೀನು vibrant  ಬಣ್ಣ ಹಚ್ಚಬಾರದು …ಅಕ್ಕ ಪಕ್ಕದವರಿಗೆ ತಪ್ಪು ಕಾಣುತ್ತದೆ …
ಮತ್ತೆ ಸತ್ತೆ … ನಮ್ಮದೇ ಮನೆಯವರಿಗೂ ನಾವು ಇಷ್ಟು ಅಪರಿಚಿತರ ..??

ಅದು ಆಫೀಸ್ …

ನೀವು ಹೆಚ್ಚೇನೂ ಹೇಳುವುದು ಬೇಕೇ ಇಲ್ಲ, ನಿಮ್ಮ ಕಂಗಳೇ ಎಲ್ಲಾ ಹೇಳಿಬಿಟ್ಟವು ….
ಕಿವಿ ನೆಟ್ಟಗಾಯಿತು..
ನನಗೋಸ್ಕರ ಅಕ್ಕ ಆಕ್ರೋಶದಲ್ಲಿ ಬಡಬಡಿಸುತ್ತಿದ್ದಳು .
ಅರೆ ಈ ಹುಡುಗನಿಗೆ ಕಣ್ಣು ಓದೋಕೆ ಬರುತ್ತಾ..?
ಆದ್ರೆ ಅಕ್ಕನ ಕಣ್ಣನ್ನು  ಏಕೆ ಓದಿದ..ಮಳ್ಳು ಮಳ್ಳು ನಗು!

ಇದು ಮೊದಲನೇ ಬಾರಿಯೂ ಅಲ್ಲ, ಕಡೆಯದೂ ಅಲ್ಲ… ಬೇಡ ಎನ್ನುವ ತಿರಸ್ಕಾರದ ಮಾತುಗಳು..ಹಣೆಬರಹದ ಜಾಡು ತಿಳಿದಿತ್ತು ಅವರಿಗೂ..
ಮೌನವಾಗಿದ್ದೆ…
ಹೆಣದೆದುರು ಕೂತವರಿಗೆ ಅತ್ತು ಬಿಡು ಎನ್ನುವಂತೆ ಅವರು ಸಮಾಧಾನ ಹೇಳುತ್ತಿದ್ದರು ..
ಏನಾದರು ಮಾತಾಡಮ್ಮ , ಧೈರ್ಯ ತೆಗೆದುಕೊಳ್ಳಮ್ಮ …..
ಹುಚ್ಚುಹುಚ್ಚಂಗೆ ಬೆಪ್ಪುಬೆಪ್ಪಂಗೆ ನಕ್ಕುಬಿಟ್ಟೆ ..
ಗಾಬರಿಯಾದಳು  ಅಕ್ಕ
ಎಲ್ಲ ಕೊಚ್ಚಿಕೊಂಡು ಹೋದ ಮೇಲೆ ಮೂಡುವ ನಿಟ್ಟುಸಿರ ಬೆಪ್ಪು  ನಗುವಂತಿದೆ ..ಸಮಾಧಾನ  ಮಾಡಿಕೊ ಎಂದಳು…
ತಿರುಗಿ ನೋಡಿದೆ..
ಭರತನಾಟ್ಯದ ಕಣ್ಣುಗಳು…
ಯಾಕೋ ಮತ್ತೆ ನಗು ಬಂತು  

 

 
   

    

   

 

 

 

 

 

        

 

ಸಿಂಡ್ರೆಲ್ಲ ಡ್ರೆಸ್ಸು …ಹೆವಿ crushu

 

ಪ್ರೇಮಪರ್ವದ ಕಾಲದಲ್ಲಿ  ರಾಷ್ಟ್ರಗೀತೆಯಂತ್ತಿದ್ದ   ಹಾಡು ಪಲ್ಲವಿ ಅನುಪಲ್ಲವಿ ಚಿತ್ರದ್ದು  
ನಗುವ ನಯನ
ಮಧುರ ಮೌನ
ಮಿಡಿವ ಹೃದಯ
ಇರೆ ಮಾತೇಕೆ
ಹೊಸ ಭಾಷೆ ಇದು
ರಸ ಕಾವ್ಯವಿದು
ಇದ ಹಾಡಲು ಕವಿಬೇಕೆ ?
ಟೂರು ಟ್ರಿಪ್ಪು ಅಂತೆಲ್ಲ ಹೋಗುತ್ತಿದ್ದಾಗ ಎಲ್ಲರ ಅಭಿರುಚಿ ಮೀರಿ ನನ್ನ ಕಡೆಯಿಂದ ಈ ಹಾಡು ಬರಲೇಬೇಕಿತ್ತು.ಪ್ರೀತಿಯ ಪರಿಯನ್ನು ಚಿಕ್ಕದಾಗಿ ಚೊಕ್ಕದಾಗಿ ಹೇಳಬಲ್ಲ ಎಂದಿಗೂ ಸಲ್ಲುವ ನನ್ನ ಮೆಚ್ಚಿನ ಹಾಡು
ನನ್ನ  ಯವ್ವನದ  ಕ್ಯಾನ್ವಾಸ್ ತೀರ ಚಿಕ್ಕದು .ಹುಡುಗರನೆಲ್ಲ ಕದ್ದೊಯ್ದು ಯಾವುದೋ ದ್ವೀಪದಲ್ಲಿ ಅಡಗಿಸಿದಂತಿತ್ತು ಪರಿಸ್ತಿತಿ.ಬಹುಪಾಲು ಖಾಲಿ ಖಾಲಿ .

ಈಗಿನ ಕಾಲದವರು ನಮಗೆಲ್ಲ ಪ್ರೀತಿಯ ಅನುಭವ ಒಂದನೇ ಎರಡನೇ ಕ್ಲಾಸಿಗೆ ಆಗಿತ್ತು ಅಂತೆಲ್ಲ  ಹೇಳುತ್ತಿದ್ದರೆ ಪ್ರಪಂಚದ 8ನೆ ಅದ್ಭುತದಂತೆ  ಕಾಣುತ್ತದೆ ನನಗೆ.ನಂಬಲಸಾಧ್ಯ   .

ಓದಿದ್ದು ಹುಡುಗಿಯರ ಶಾಲೆ .
ಅಂತು ಇಂತೂ ಏಳನೇ ತರಗತಿವರೆಗೂ ಕಡೆಪಕ್ಷ ಬೆಂಚಿಗೊಬ್ಬ ಹುಡುಗನಾದರೂ ಇದ್ದ .ನಂತರ ಪರಿಪೂರ್ಣ ಮಹಿಳಾಮಯಾ  .ಹೇಳಿಕೇಳಿ ನಮ್ಮದು ಮಡಿವಂತ ಬ್ರಾಹ್ಮಣರ  ಶಾಲೆ .ಅಲ್ಲಿದ್ದ ಹುಡುಗಿಯರು ನನಗಿಂತ worstu
ಚೆಂದ ಓದುವ ಒಂದಿಬ್ಬರು ಹುಡುಗಿಯರನ್ನು , ಇದ್ದ ಬದ್ದ ಮೂರ್ಮುಕ್ಕಾಲು ಜನರಲ್ಲಿ  ಚೆನ್ನಾಗಿ ಓದುವ ಹುಡುಗ ಮಾತನಾಡಿಸಿದ್ದು  ಎಲ್ಲಿ ಗುಲ್ಲಾಗಿ ಬಿಡುತ್ತದೋ   ಎಂದು ರಾಖಿ ಹಬ್ಬದ ದಿನ ಎಲ್ಲರಿಗು ರಾಖಿಕಟ್ಟಿ ತಾನು ಒಳ್ಳೆಹುಡುಗಿ ಅಂತ ಸಾಬೀತುಪಡಿಸಿದ್ದಳು ಒಬ್ಬಳು .ಇಂತ ವಿಚಿತ್ರ ಪರಿಕಲ್ಪನೆಯ ಹುಡುಗಿಯರಲ್ಲಿ ನಾನು ಮುಗ್ದ ಬಾಲೇ !!
height ಪ್ರಕಾರ ಹುಡುಗಿಯರನ್ನು ಹುಡುಗರನ್ನು ನಿಲ್ಲಿಸಿ 4 ಹುಡುಗಿಯರಿಗೆ ಒಬ್ಬ ಹುಡುಗನ್ನ ಸೇರಿಸಿ ಒಂದು ಬೆಂಚು ಮಾಡುತ್ತಿದ್ದರು .ಮೊದಲಿಂದ ಕೊನೆವರೆಗೂ ತಪ್ಪದೆ  ನನ್ನದು ಮೊದಲ ಬೆಂಚೆ .
ಹಿಂದಿನ ಬೆಂಚಿನ ಧೃಡಕಾಯದ ಸಹಪಾಟಿಗಳ  ಬಗ್ಗೆ ಗೊತ್ತಿಲ್ಲ , ನನ್ನಂತ 5 lilliput  ಗಳು ನಮ್ಮದೇ ಪ್ರಪಂಚದ್ದಲ್ಲಿ ಪುಟ್ಟ ಮಕ್ಕಳಂತೆ ಇದ್ದು ಬಿಟ್ವಿ .
ಇರೋರಲ್ಲೇ ಬೆಟರ್ ಇದ್ದ ಒಬ್ಬರನ್ನು ಆಯ್ಕೆಮಾಡಿ ಬೆಂಚ್ ಲೀಡರ್ ಅಂತ ನೇಮಿಸಿ  “ನೀವಷ್ಟೇ ಓದಿ ಉದ್ದಾರ ಆಗಬೇಡಿ, ಮಿಕ್ಕ ಮಕ್ಕಳನ್ನು ಓದಿಸಿ” ಎಂದು ಹೇಳುತ್ತಿದರು ಟೀಚೆರು .ಅದನ್ನು ತುಂಬಾ ಸೀರಿಯಸ್ ಆಗಿ ತೆಗೆದುಕೊಂಡ ನಾನು ‘ಮಿಕ್ಕವರನ್ನು ಉದ್ದಾರ ಮಾಡುವ ಜವಾಬ್ದಾರಿ ನನ್ನ ಮೇಲಿದೆ ‘ ಅನ್ನೋ ತರ ಆಡುತ್ತಿದ್ದೆ. ಬೆಂಚ್ಗೆ ಸ್ಟ್ರಿಕ್ಟ್ ಟೀಚರ್ ನಾನು .
ಅದ್ಯಾವುದೋ ತರಗತಿಯಲ್ಲಿ  ಒಬ್ಬ  ಹುಡುಗ ಹೆಸರು ಸುಮಿತ್ ಅಂತಿರಬೇಕು ನನ್ನ seriousness ನು ಮೀರಿ , ನನ್ನ  ಕಿವಿಗಳನ್ನು ಅಮುಕಿ ಹಾಲುಖೋವಾ ಇದ್ದಂಗೆ ಮೆತ್ತಗಿದೆ  ಅಂದು , ಅವತ್ತಿನಿಂದ  ನನ್ನನ್ನು  ಹಾಲುಖೋವಾ ಅಂತ  ಕರೆಯಲು ಶುರುಮಾಡಿದ  .ಇನ್ನೊಬ್ಬ ರಾಕೇಶ್ .ಪಾಪದ ಹುಡುಗ .ಓದಿನ ಮಹತ್ವದ ಬಗ್ಗೆ ಅದೆಷ್ಟೆಲ್ಲ  ಅವನಿಗೆ ಪ್ರವಚನ ಕೊಟ್ಟು brain ವಾಶ್ ಮಾಡಿಬಿಟ್ಟಿದೆ ಎಂದರೆ ನನ್ನ dictationnu , ಟೆಸ್ಟು , ಅಸೈನ್ಮೆಂಟ್ಗಳನ್ನು ಯಾರು ಕ್ಯಾರೆ ಅನ್ನದೆ ಹೋದರು  , ಅವನು ಮಾತ್ರ ರಾತ್ರಿ ಎಲ್ಲ ಓದಿಕೊಂಡು ಬಂದು ಬರೆದು ಬೇಶ್ ಎನಿಸಿಕೊಳ್ಳುತ್ತಿದ್ದ…
ಅಲ್ಲಿಗೆ ಹುಡುಗರ ಅಧ್ಯಾಯ ಮುಗಿದಿತ್ತು .
ನನಗಿಂತ ನನ್ನ ಅಕ್ಕ ಮೂರು ವರ್ಷಕ್ಕೆ ದೊಡ್ಡವಳು .ಹರೆಯದ ಸರಹದ್ದು ಶುರುವಾಗೋ ಹೈ ಸ್ಕೂಲ್ ನಲ್ಲಿ ಅವಳು ಸೀನಿಯರ್ ನಾನು ಜೂನಿಯರ್ .ಅವಳ ತರಗತಿಯ ಹುಡುಗಿಯರ ಗುಟ್ಟು ಗುಟ್ಟು ಕತೆಗಳು ಆಗೊಂದು ಈಗೊಂದು ಹೇಳುತ್ತಿದ್ದಳು .ಆದರೆ ನಾನು ಮೂರು ವರ್ಷವೂ ನಾನಿನ್ನು ಜೂನಿಯರ್ ಎನ್ನುವ ಭ್ರಮೆಯಲ್ಲೇ ಕಳೆದುಬಿಟ್ಟೆ .
ಇನ್ನು ಸೇರಬೇಕಾಗಿ ಬಂದ ಕಾಲೇಜು ಮಹಿಳಾ ಕಾಲೇಜೆ .ಆದರೆ ಮಹಾನ್ ಜಂಭವಂತ , ಅತಿಲೋಕ ಸುಂದರಿಯರ , ಶ್ರೀಮಂತ  ಕಾಲೇಜು ಅಂತ ಹೆಸರಿತ್ತು .ಬೆಂಗಳೂರಿನ ಹುಡುಗರು ಸುತ್ತಲು  ಗಸ್ತು ತಿರುಗುವ ಕಾಲೇಜು ಎನ್ನುವ ಕ್ಯಾತಿ ಅಪಕ್ಯಾತಿಯನ್ನ್ನು ಪಡೆದಿತ್ತು.  
ಅಂತಿಪ್ಪ ಕಾಲೇಜಿಗೆ ಸರಿಯಾಗಿ ಇಂಗ್ಲಿಷ್ ಬಾರದ , markscard ನಲ್ಲಿ ಮಾತ್ರ ಆತ್ಮವಿಶ್ವಾಸ ಇಟ್ಟುಕೊಂಡು , ಆರ್ಡಿನರಿ  ಡ್ರೆಸ್ ಹಾಕಿಕೊಂಡು  ಹೋಗಿದ್ದ ನನಗೆ  ಮೊದಲ ದಿನವೇ ದಿಗಿಲಾಗಿ ಹೋಗಿತ್ತು…ಮದ್ಯಮವರ್ಗದ ಕನ್ನಡ ಹುಡುಗಿಯರನ್ನು  ಇನ್ನಿಲದಂತೆ ಹುಡುಕಿದ್ದೆ .
ಅಲ್ಲೊಂದು ಗುಂಪಿತ್ತು .ಪ್ರತಿಷ್ಟಿತ ಮಕ್ಕಳಷ್ಟೇ  ಓದುವ highfy   ಶಾಲೆಯಿಂದ ಬಂದ ಶ್ರೀಮಂತ ಹುಡುಗಿಯರ ದಂಡು.
ನನ್ನ ಮುಖದಲ್ಲಿ ಹಳ್ಳಿಗಮಾರೆತನ, ಪೆದ್ದುತನ ಅದೆಷ್ಟು ನೀಟಾಗಿ ಎದ್ದುಕಾಣುತಿತ್ತೋ ಏನೋ ಆ ಗುಂಪಿನಿಂದ ಒಬ್ಬಳು ಹುಡುಗಿ ಬಂದವಳೇ ‘ನೀನು ಒಳ್ಳೆ ಹುಡುಗಿ ತರಹ ಕಾಣುತ್ತೀಯ , ನಿನ್ನ friendship ಮಾಡಬಹುದ” ಅಂತ ಇಂಗ್ಲಿಷ್ನಲ್ಲಿ ಕೇಳಿಬಿಟ್ಟಳು.ragging  ಮಾಡುತ್ತಿದ್ದಾಳ ಅಂತ ಪೂರ್ತಿ ಕಕ್ಕಾಬಿಕ್ಕಿಯಾಗಿಬಿಟ್ಟೆ  . ಅವಳೇ   ಸಮಜಾಯಿಷಿಯನ್ನು  ನೀಡಿದಳು ಅವರೆಲ್ಲ ಶೋಕಿಯ ಹುಡುಗಿಯರು, ನಾನು ಸೀರಿಯಸ್ ಆದ   ಗುರಿ ಇಟ್ಟುಕೊಂಡವಳು  ಓದಿ ಉದ್ದಾರ ಆಗಬೇಕು , ಅದಕ್ಕೆ ….  ಅವಳ ಬೇಲಿಗೆ ನಾನು ತಂತಿಯಾಗಬೇಕಿತ್ತು .
ಎಂತ ಖುಷಿ ಅದು ! ನನ್ನ ಜೊತೆ ಉದ್ಧಾರ ಆಗೋಕೆ, ನನ್ನ ಉದ್ಧಾರ ಮಾಡೋಕೆ ಆ ದೇವದೂತ ಏಸುನೆ ಕಳಿಸಿಕೊಟ್ಟನ ,ಅಮೀನ್ ! ಎಂದುಕೊಂಡೆ .ನಿಜ ಅವಳು ತುಂಬಾ ಬುದ್ಧಿವಂತೆ , ಹಾಗೆ ಪಟಪಟಪಟ  ಇಂಗ್ಲಿಷ್ ಮಾತಾಡುತಿದ್ದಳು.ಮನಸಿಗೆ ಅನಿಸಿದ್ದನ್ನು ಹೊರಗೆ ಹಾಕಲು ನನ್ನ ಇಂಗ್ಲಿಷ್ ಸರಿಯಾಗಿ ಸಹಕರಿಸುತ್ತಿರಲಿಲ್ಲ .ಮೊದಲ ವರ್ಷ ಪೂರ್ತಿ ಅವಳ ಮಾತುಕೇಳಿಕೊಂಡು  observe ಮಾಡುತ್ತಾ ಕುಳಿತುಕೊಂಡೆ  .ಎರಡನೇ ವರ್ಷದಷ್ಟರಲ್ಲ್ಲಿ ಹೆಚ್ಚು ಕಮ್ಮಿ ಅವಳಂತೆ ಮಾತಾಡಲು ಕಲಿತೆ .ಸ್ವಲ್ಪ stylish  accent ಬೇರೆ ಗತಿಸಿಹೋಗಿತ್ತು, ನನ್ನ ವಿಚಿತ್ರ accent ಕೇಳಿ ಒಬ್ಬಳು  ನಿನ್ನ ಇಂಗ್ಲಿಷ್ ಚೆನ್ನಾಗಿದೆ ಯಾವ ಶಾಲೆ  ಎಂದು ಕೇಳಿದ್ದಳು ?ಡ್ಯಾಡಿಗಂತು ಹಿರಿಹಿರಿ ಹಿಗ್ಗು .
ನಮ್ಮ ಜೊತೆ ನಮ್ಮಂತವರೆ ಒಂದಿಬ್ಬರು ಜತೆಯಾಗಿದ್ದರು.  ಅದರಲ್ಲೊಬ್ಬಳು ಸಪೂರ ಸುಂದರಿ .busstop ನಲ್ಲಿ ಒಬ್ಬ ಹುಡುಗ, ಫಸ್ಟ್ ಸೈಟ್ ನಲ್ಲಿ ಲವ್ವು , runnning ಬಸ್ ಹಿಂದೆ ಓಡಿಬಂದು   ನಂಬರ್ ಕೊಟ್ಟ …ಅಂತೆಲ್ಲ ಕತೆ ಹೇಳಲು ಶುರು ಮಾಡಿದರೆ  ಸ್ವಲ್ಪ ಸ್ವಲ್ಪ filmninda  ಕದಿಯುತ್ತಿದ್ದಾಳೆ ಅನಿಸುತ್ತಿತ್ತಾದರು, ಯಾಕೋ ಹುಡುಗಿ ರಾಂಗ್ route ನಲ್ಲಿ ಹೋಗುತ್ತಿದ್ದಾಳೆ ಎನಿಸಿ  ನಾವು ನಾವೇ ಮಾತಾಡಿಕೊಂಡು ಅವಳನ್ನು ನಮ್ಮ ಗುಂಪಿಂದ ಬಹಿಷ್ಕರಿಸಿಬಿಟ್ಟೆವು.
ನನ್ನ ಇಂಗ್ಲಿಷ್ ಗೆಳತಿ ಹುಡುಗರ ಬಗ್ಗೆ ಮಾತಾಡಲು ತೊಡಗಿದಾಗಲೇ ನನಗೂ ಹರೆಯದ ಅನುಭವವಾಗಿದ್ದು, ಧೈರ್ಯ ಬಂದಿದ್ದು …tution ಗೆ ಬರುತಿದ್ದ topper ಹುಡುಗನ ಬಗ್ಗೆ ಗಂಟೆಗಟ್ಟಲೆ ಹೊಗಳುತ್ತಿದ್ದಳು ….
ಕಾಲಕಾಲಕ್ಕೆ ತಕ್ಕಂತೆ  ಮಳೆಬೆಳೆಯಾಗಬೇಕು ಎನ್ನುವಂತೆ ಸದ್ದಿಲ್ಲದೇ ಹರೆಯ ಮೆಲ್ಲಗೆ ಬಂದು ಎದೆಯೊಳಗೆ ಕೂತಿತ್ತು .
ನನಗು ಯಾರಬಗ್ಗೆಯಾದರು ಮಾತಾಡಬೇಕು ಎನಿಸಿತು ..ಆದರೆ ಅಲ್ಲ್ಯಾರು ಇರಲಿಲ್ಲ .
tutionನಲ್ಲಿ ನಾ ಕೇಳಿದ ಡೌಟ್ಟನ್ನ ಸಿಲ್ಲಿ ಅಂತ ಒಬ್ಬ ಹುಡುಗ  ನಕ್ಕು ಅವಮಾನ ಮಾಡಿಬಿಟ್ಟ .ಹೀರೊಇಸ್ಮ್  ತೋರಿಸಿಕೊಳ್ಳಕಾಲ ಅದು .ಕೇಳಬೇಕ ಜಗಳಕ್ಕೆ ಬಿದ್ದ ನನ್ನ ಮತ್ತು  ಅವನಿಂದ ಇಡಿ  ಕ್ಲಾಸ್ ಹುಡುಗರ ,ಹುಡುಗಿಯರ ಎರಡು ಗುಂಪಾಗಿ   ಇಬ್ಬಾಗವಾಗಿಹೋಯಿತು .ಮೊದಲ ಪುರುಷ ದ್ವೇಷ !

ಆದರೂ ಅಪ್ಪನ ಅಂಕೆಯನ್ನು ಮೀರಿ ಎಷ್ಟೇ ಬೇಡಾ ಬೇಡಾ ಎಂದರು ಕಣ್ಣು ಗಳು ಯಾರನ್ನೋ ಹರಸುತ್ತಿದ್ದವು .
ಬಾಡಿಗೆಗೆ ಹೋದ ಹೊಸಮನೆಯ ಮೇಲೆ ಒಬ್ಬ mtech ಹುಡುಗ .ಆಗ ನಾನು ಇಂಜಿನಿಯರಿಂಗ್ ಸೇರಬೇಕಿದ್ದವಳು.  ಬೆಟ್ಟ ಹತ್ತಲು ಹೊರಟವಳಿಗೆ ಅದಾಗಲೇ ತುತ್ತತುದಿಯಲ್ಲಿ ಬಾವುಟ ನೆಟ್ಟವನು ಅಪ್ರತಿಮ ಸಾಧಕನಾಗಿ ಕಂಡ .

ಕನ್ನಡಿಯ ಎದುರು ನಿಂತು ತಿರುಗಿದಾಗ ನನ್ನದೆ ತಿರುವುಗಳು ನನ್ನ ಕೆನ್ನೆಯನ್ನೆ ಇನ್ನೊಂದಿಷ್ಟು ಕೆಂಪಾಗಿಸಿದವು.ಎಷ್ಟೇ ತಡೆದರು ಬೆತ್ತಲೆ ಬೆನ್ನಿಗೆ ಮುತ್ತಿನ ಬಯಕೆಯಾ ಕನಸನ್ನು ಕಾಣದೆ ಇರಲಾಗಲಿಲ್ಲ  . ಆದರು ಯಾರು ಯಾಕೆ  ಇನ್ನು ಹಿಂದೆ  ಬಿದ್ದಿಲ್ಲ ಅನ್ನೋ ಪ್ರಶ್ನೆ…

ಅದೊಂದಿನ ಬೆಳಗ್ಗೆ ಮಿಂದು ಹಸಿ ಕೂದಲನ್ನು ಹರವಿಕೊಂಡು ಅಂಗಡಿಗೆ ಹೋಗಿ  ಬರುತ್ತಿದ್ದವಳಿಗೆ   ಮಬ್ಬು ಮಬ್ಬು ಬೆಳಕಲ್ಲಿ ಕಾಣಿಸಿದ್ದು ತಾರಸಿಯ compound ನ ಹಿಂದಿದೆ ಬಚ್ಚಿಟ್ಟುಕೊಂಡು  ಇಣುಕುತ್ತಿದ್ದ  ಅಸ್ಪಷ್ಟ ಪುರುಷಾಕೃತಿ
ಅಯ್ಯೋ ಅಂಕಲ್ ಇಷ್ಟು ಕೆಟ್ಟಾಕೊಳಕ? ಹೆಂಡತಿ ಇದ್ದರು ಹೀಗೆಲ್ಲ ಆಡಬಹುದ ಥೂ …  ಅಂದುಕೊಂಡು ಹತ್ತಿರ ಹತ್ತಿರ ಬಂದಂತೆ ಸ್ಪಷ್ಟವಾಗಿ ಕಾಣಿಸಿತು ಆಕೃತಿ .ಅಂಕಲ್ ಅಲ್ಲ  ಅದು ಆ mtech ಹೀರೋ …!!!

ಆಗ ಆಗಿದ್ದು ಭಯವೋ , ಭೀತಿಯೂ , ರೊಮಾಂಚನವೊ, ಪುಳಕವೋ, ಅಸಹ್ಯವೋ  ಇದುವರೆಗೂ ಗೊತ್ತಾಗಿಲ್ಲ  ನನಗೆ …
ಆ ಘಟನೆ ನಡೆದಿರಲಿಲ್ಲ ಎಂದಿದ್ದರೆ ಮಾತನ್ನಾದರೂ ಆಡಿಸುತ್ತಿದ್ದೆನೇನೋ .ಅದ್ಯಾಕೋ ವಿಚಿತ್ರ  ಸ್ಥಿತಿಗೆ   ತಗುಲಾಕಿಕೊಂಡಿದ್ದೆ .ಕೀ ಕೊಡಲು ಎಷ್ಟು ಬಾರಿ ಅವನು  ಬಂದರು, ಏನೆಲ್ಲಾ ಸನ್ನಿವೇಶ ಸೃಷ್ಟಿಯಾದರು ಜಪ್ಪಯ್ಯ ಎಂದರು ಒಂದು  ಮಾತು ಅಪ್ಪಿತಪ್ಪಿಯೂ ಹೊರಡುತ್ತಿರಲಿಲ್ಲ…ಬಾಯಿಗೆ ಬೀಗ ಜಡಿದ ಮೂಖಳು  ನಾನಾಗ .

ಇನ್ನು ಎಂಜಿನಿಯರಿಂಗು……. ಮೊದಲ ದಿನ ಅಡ್ಮಿಶನ್ ಮಾಡಲು ಬಂದ ಅಪ್ಪ  ಖರ್ಚಿಗೆಂದು ಒಂದೆರಡು ನೋಟು ತೆಗೆಯುತ್ತಿದ್ದಾಗ ,ಹಿಂದಿನಿಂದ  ಸಾಲಿನಲ್ಲಿ ಹೋಗೋ ಹುಡುಗ ಚುಡಾಯಿಸಿದ್ದ…ಅಪ್ಪನಿಗಿಂತ ನಾನೇ ಹೆಚ್ಚು ಹೆದರಿಕೊಂಡಿದ್ದೆ .ಅಪ್ಪ ಅದಾಗಲೇ ಹೆದರಿಸಿಯೇ ಕರೆತಂದಿದ್ದರು  ಲವ್ವು ಗಿವ್ವುಮಾಡಿ ಮಾನ ಕಳಿಬೇಡ ಮಾರಾಯ್ತಿ

ಆದರೆ ನನ್ನ ತರಗತಿಯಲ್ಲಿ ಒಂದು ಮೂತಿಯು ನನಗೆ ಇಷ್ಟ ಆಗಲಿಲ್ಲ …ಸೀನಿಯರ್ ಒಬ್ಬನಿಗೆ ನನ್ನ ಹೆಸರು ಕಟ್ಟಿ ಅಣಕಿಸುತ್ತಿದ್ದದ್ದು ಕೇಳಿಸುತ್ತಿತ್ತು .. ಹುಡುಗ ಹೆವಿ ಅರ್ಜೆಂಟ್ ನಲ್ಲಿದ್ದನೋ ಏನೋ ಸ್ವಲ್ಪ ದಿನಕ್ಕೆ ಬೇರೆ ಚಿಟ್ಟೆಯೊಂದು ಅವನ  ಜೊತೆಗೆ  ಹಾರುತ್ತಿತ್ತು….

distinction ತೆಗೆದುಕೊಳ್ಳೋ ಸ್ಟೂಡೆಂಟ್ಸ್ ಗೆ  ಒಂದು ಕಷ್ಟವಿರುತ್ತದೆ .consistency maintain ಮಾಡಿಕೊಂಡು ಬಂದು, ಇದ್ದಕ್ಕಿದಂತೆ ಮುಗ್ಗರಿಸಿದರೆ, ಹೆತ್ತವರಿಗೆ ಫುಲ್ confirmation  ಆಕ್ಸಿಡೆಂಟ್  ಆಗೋಗಿದೆ ಅಂತ .ಪ್ರೀತಿ ಅಂತ  ತಲೆಕೆಡಿಸಿಕೊಳ್ಳಲು ಬಿಡದ ಭಯದಲ್ಲಿ ಇದು ಒಂದು .
ಜೊತೆಗೆ ಅಪ್ಪನ ಕೈಲಿ ಒಳ್ಳೆಯವಳು ಅನ್ನಿಸಿಕೊಳ್ಳಬೇಕು ಅನ್ನೋ ಗುರಿ,ಗೀಳು  ಬೇರೆ !!!!

ಒಬ್ಬಳು ಗೆಳತಿ ಇದ್ದಳು ಚೆಲುವಿನ ಚಿತ್ತಾರದ ಪ್ರೀತಿ ಅವಳದ್ದು…ಅವಳು ಎಂಜಿನಿಯೆರು, ಅವನು ಎಲೆಕ್ಟ್ರಿಕ್ ರಿಪೇರಿ.ದಿನಾದಿನಾ ಒಂದಲ್ಲ ಒಂದು ರೋತೆ ಮಾಡಿಕೊಂಡು , ಗಂಡ ಸತ್ತವಳಂತೆ ಎದೆ ಬಿರಿಯುವಹಾಗೆ  ಅಳುತ್ತಾ ಕೂರುತ್ತಿದ್ದಳು .ಓದು ಸೀದಾ ಹಳ್ಳ ಹಿಡಿಯುತ್ತಿತ್ತು .ಬೇರೆ ಹುಡುಗಿಯರೆಲ್ಲ ಅಯ್ಯೋ ಪಾಪ ಎಂದು ಫೀಲ್ ಮಾಡಿಕೊಂಡರೆ ನಾನು ಮಾತ್ರ ಕಂತೆಕಂತೆ ನೀತಿ ಪಾಠ ಹೇಳಿ ಬೈಯ್ದು ಮತ್ತಷ್ಟು ಅಳಿಸಿಬಿಡುತ್ತಿದ್ದೆ .ಯಾಕೆ ಬೇಕು ಈ ಹಾಳು ಪ್ರೀತಿ, ಈ ನೋವು ?ಮುಚ್ಕೊಂಡು ಓದು ಅಪ್ಪ ಆಟೋ ಓಡಿಸಿ  ಫೀಸ್ ಕಟ್ಟಿದ್ದಾರೆ ಅಂತ ನಾನೆಂದರೆ , ಇಲ್ಲ  ಹೇಮಾ ನಿನಗೆ ಇವೆಲ್ಲಾ ಅರ್ಥ ಆಗಲ್ಲ  ಅಂದು ಬಿಡುತ್ತಿದ್ದಳು..ತಲೆ ಚಚ್ಚಿಕೊಂಡು ಎದ್ದು ಬರುತ್ತಿದ್ದೆ  .
ಕಡೆಗೆ ಅವನೂ ಸಿಗಲಿಲ್ಲ, ಅವಳಿಗೆ ಕೆಲಸವೂ ಸಿಗಲಿಲ್ಲ…ಹೀಗೆಲ್ಲ ಆಗುತ್ತದೆ ಎಂದು ಮುಂಚೆಯೇ ತಿಳಿದವರಂತೆ ಹುಷಾರಾಗಿ ಬದುಕಲು ಅಣಿಯಾದವರು ನಾವು .
ಇನ್ನೊಬ್ಬಳು ಮುಸ್ಲಿಂ ಹುಡುಗಿ .ಎಂತಾ sensitive ಹುಡುಗಿಯೆಂದರೆ ತಮಾಷೆಗೆ ಮತ್ತೊಂದು ಹುಡುಗಿ ದುಪ್ಪಟ್ಟ ಎಳೆದಿದ್ದಕ್ಕೆ ರೇಪ್ ಆಗಿಹೋಯ್ತೇನೋ  ಎನ್ನುವಷ್ಟು ಅತ್ತು ರಂಪ ಮಾಡಿಬಿಟ್ಟಿದ್ದಳು .ಸೆಮಿನಾರ್ ಕೊಡೋಕೆ  ಸ್ಟೇಜ್ ಗೆ ಬಂದವಳಿಗೆ ವಾಂತಿ, ತಲೆಸುತ್ತು ಎಲ್ಲ ಆಗಿಹೋಯಿತು ..
ಆಶ್ಚರ್ಯವೆಂಬಂತೆ ಅಂತ ಹುಡುಗಿಗೂ   ಒಬ್ಬ ಪ್ರೇಮಿ ಇದ್ದ ….ಕ್ಯಾಂಪಸ್ ತುಂಬಾ ಲವ್ ಬರ್ಡ್ಸ್ ಗಳ ಕಲರವ.

ಇಂತಾ ವೈಪರಿತ್ಯಗಳನೆಲ್ಲ ನೋಡಿದ ಮೇಲೆ ಪ್ರೀತಿ ಎಂದರೇನು ಎನ್ನುವ  ಗೊಂದಲ ಕುತೂಹಲಗಳು.ಹುಡುಗಿಯರು ಸುಮ್ಮಸುಮ್ಮನೆ ನಗುತ್ತಿದ್ದರೆ ಒಳಗೊಳಗೇ ಅಸೂಯೇ …
ಅನುಭವಕ್ಕೆ ದಕ್ಕಿಸಿಕೊಳ್ಳಬೇಕಿತ್ತು ನಾನು, ತಪ್ಪು ನನ್ನದಲ್ಲ ವಯಸಿನದ್ದು…
ಒಂದು ದಿನ ನಾನು ಘೋಷಿಸಿಬಿಟ್ಟೆ ಸಕ್ಕತ್ತು ಡೀಪ್  ಆಗಿ ಸೀರಿಯಸ್ ಆಗಿ ಲವ್ವ್ ಆಗ್ಬಿಟ್ಟಿದೆ ಅಂತ ..
ಯಾರವನು ಯಾರವನು ಅಂದವರಿಗೆ ಅವನೇ ಮುಂಗಾರು ಮಳೆ ಗಣೇಶ್ ಎಂದೇ …ನಕ್ಕು ಬಿಟ್ಟರು ಜನ ..

ಇಲ್ಲ ತುಂಬಾ ಪ್ರೀತಿಸಿದ್ದೆ ಆಗ..
ಅವನು ಕುಣಿದು ಕುಣಿದು ಬಾರೆ ಎಂದರೆ ನನ್ನೇ ಕರೆದನೇನೋ  ಅನ್ನೋಷ್ಟು ಸಂಭ್ರಮವಾಗಿಬಿಡುತ್ತಿತು.
ಅನಿಸುತಿದೆ ಯಾಕೋ ಇಂದು ಎಂದರೆ , ನಂಗು ಅಷ್ಟೇ ಐ  ಲವ್ ಯು ಅಂತ ಕೂಗಿ ಹೇಳಬೇಕಿತ್ತು .
ಆ ಹಾಡಿನಲ್ಲಿ ಮೂಡುವ ಅವನ ಒಂದೇ ಒಂದು smilege ಮತ್ತೆ ಮತ್ತೆ rewind ಮಾಡಿ ಮಾಡಿ ನೋಡಿದ್ದೇನೋಡಿದ್ದು , ಪ್ರತಿ ಬಾರಿಯೂ ಅಷ್ಟೇ ತೀವ್ರವಾಗಿ  ನಾಚಿಕೊಳ್ಳುತಿದ್ದೆ. ಮೊದಲೇ ಚೂರು ಪಾಪಿ ನಾನು ಅಂತ ಅವಾ ಕಣ್ಣು ಮಿಟುಕಿಸಿ, ನಾಲಿಗೆ ಕಚ್ಚಿಕೊಂಡು , ತಲೆ ನೇವರಿಸಿಕೊಂಡರೆ    ಮೈಯೆಲ್ಲಾ ಪುಳಕ ಪುಳಕ ….ಸಾವಿರ ಹೂ ಅರಳಿದ ಪುಳಕ

ಅಗರ್ ತುಮ ಮಿಲ್ ಜಾವೋ
ಜಮಾನ ಚೋಡ್  ದೇಂಗೇ ಹಮ್ಮ್…

ವಾಸ್ತವದಲ್ಲಿ ಯಾರು ಇರದೇ ಹೋದರು ಒಬ್ಬ ಹುಡುಗನನ್ನು ಅಷ್ಟು ಉತ್ಕಟವಾಗಿ ಪ್ರೀತಿಸಬೇಕು, ಬೇರೆ ಏನು ಬೇಡಾ ನಿನ್ನ ಬಿಟ್ಟರೆ, ನಿನಗಾಗಿ ಎಲ್ಲ ತೊರೆದು ಬಂದುಬಿಡುವೆ    ಅನ್ನೋಷ್ಟು ಗಾಡವಾಗಿ ಪರಿಭಾವಿಸಬೇಕು ಅಂತೆಲ್ಲ ನಿಜವಾಗಲೂ ಅನಿಸುತ್ತಿತ್ತು …

ನಿಜ ಯಾರು ಖಾಲಿ ಖಾಲಿ ಬದುಕಿ ಸಾಯೋಲ್ಲ .. ಕನಸಲ್ಲಾದರೂ ಸ್ಕಲಿಸಿರುತ್ತಾರೆ ..ಎಂತ ಒಳ್ಳೆ ಹುಡುಗನಿಗೂ ಎಲ್ಲ ತಿಳಿದೇ ಇರುತ್ತದೆ …ನಾವುಗಳು  ಮದುವೆ ನಂತರ ಅಂತ ಪೀಟಿಕೆ ಹಾಕಿಕೊಂಡೆ ಕನಸು ಕಾಣತೊಡಗುತ್ತೇವೆ …ಕವನ ಬರೆದು ಸುಖಿಸುತ್ತೇವೆ .. ನಮಗೆ  ಹಾಗೆಲ್ಲ ಆನಿಸೋದೆ ಇಲ್ಲ ಅಂತ ಅನ್ನುತಿರುವಾಗಲೇ , ಇನ್ಯಾರೋ ಬಂದು ಹೇಳಲಿ ಅಂತ ಕಾಯುತ್ತಿರುತ್ತೇವೆ  . ಹೇಳಿಬಿಟ್ಟರೆ reject  ಮಾಡಿ ಪೋಸ್ ಕೊಡುತ್ತೇವೆ …

ಪ್ರೀತಿಯೆಂದರೆ ನಮ್ಮನ್ನು ನಾವು ಪ್ರೀತಿಸಿಕೊಳ್ಳಲು ಕಂಡುಕೊಳ್ಳೋ ಒಂದು ಮಾರ್ಗವಷ್ಟೇ  …ಸದಾ ಯಾರಮೇಲಾದರು ಪ್ರೀತಿಯಿರಲೇಬೇಕು ..ಆ  ಮೂಲಕ ನಮ್ಮನ್ನು, ನಮ್ಮ ಬದುಕನ್ನು  ಚೆಂದಗೊಳಿಸಿಕೊಂಡು    ಪ್ರೀತಿಸಿಕೊಳ್ಳುತ್ತೇವೆ   ….ಚಿಕ್ಕವರಿರುವಾಗ ತಂದೆ ತಾಯಿ, ಯವ್ವನದಲ್ಲಿ ಸಂಗಾತಿ, ಮದುವೆ ನಂತರ ಮಕ್ಕಳು, ವಯಸಾದಾಗ ಮೊಮ್ಮೊಕಳು, ದೇವರು, ಗಿಡ ಮರ … ಪ್ರೀತಿಯ ಒರತೆ ಬತ್ತಲೆಬಾರದು .  
ಅಕ್ಕ ಮಹಾದೇವಿ, ಮೀರಾ ಎಲ್ಲ ಯಾಕೆ ದೇವರನ್ನು ಅಷ್ಟು ಪ್ರೀತಿಸಿದರು ಈಗ ಅರ್ಥವಾಗುತ್ತದೆ ನನಗೆ .

ಗಂಡು ಹೆಣ್ಣಿನ ಪ್ರೀತಿ ಬಗ್ಗೆ ನನ್ನಲ್ಲೇ ಘನೀಕರಿಸತೊಡಗಿದ ಕಲ್ಪನೆಗಳು

ನೀನು ಮುಗಿಲು
ನಾನು ನೆಲ
ನಿನ್ನ ಒಲವೆ
ನನ್ನಾ ಬಲ…

ನೀನು ಗಂಡು
ನಾನು ಹೆಣ್ಣು
ನೀನು ರೆಪ್ಪೆ
ನಾನು ಕಣ್ಣು

ನನ್ನ ಪುರುಷ, ಪ್ರಬುದತೆಯಲ್ಲಿ , ಪರಿಪಕ್ವತೆಯಲ್ಲಿ ಸದಾ ನನಗಿಂತ ಎತ್ತರದಲ್ಲಿದ್ದು ಭಾವನಾತ್ಮಕವಾಗಿ ಆಶ್ರಯನೀಡಿ ಬಳ್ಳಿಯಂತೆ ತಬ್ಬಿ ಅವಲಂಬಿತಳಾಗಳು   ಒದಗಬೇಕು ಎನ್ನುವುದು ನನ್ನ ಕಲ್ಪನೆ .
ಇದೆ ಸೂತ್ರವನ್ನ ಅವನಿಗೆ ಹೇಳಿ ನಿನ್ನ ನಂಬಿ ಬಂದೆ , ಆದರೆ ನೀನು ಕಾಪಾಡಲಿಲ್ಲ ಎಂದಿದ್ದನ್ನು ಅವನ ತಾಯಿ  ಕೂಗಾಡಿಕೊಂಡು “protection ಗೆ ಒಬ್ಬ ಬೇಕಿತ್ತಂತೆ ಅದುಕ್ಕೆ ಮದುವೆ ಆಗಿರೋದು ‘ ಎನ್ನುವ ಕೀಳು ಮಟ್ಟಕ್ಕೆ ಇಳಿಸಿದ್ದರು !

ಯಾವ ರಾಗಕೋ ಏಕೋ ನನ್ನೆದೆ ವೀಣೆ ಮಿಡಿಯುತ ನರಳಿದೆ ಎನ್ನ್ನುವಂತ ನವಿರಾದ ಭಾವ ತನ್ನಷ್ಟಕ್ಕೆ ತಾನು ಹೊಮ್ಮಬೇಕು .
ನೀ ಯಾರೋ ನಾ ಯಾರೋ ಚೂರು ಅರಿಯದವರು , ಕಂಡ ಕ್ಷಣವೇ ಆದೇವೆ ಜನ್ಮಾಂತರ ಗೆಳೆಯರು ಅಂತೆಲ್ಲಾ ಜೀವ ಹಿಂಡಬೇಕು…

ಭಾವಗೀತೆ ನನ್ನ ಮೆಚ್ಚಿನ ಪ್ರಕಾರ ..ಎಲ್ಲ ಸಂದರ್ಭಕ್ಕೂ   ಅಲ್ಲಿ ಹಾಡಿದೆ ..
ಪ್ರೀತಿ ಮುರಿದಾಗ  ‘ಹೇಳಿ ಹೋಗು ಕಾರಣ ಹೋಗುವಾ ಮೊದಲು … ‘, ‘ತಪ್ಪಿ ಹೋಯಿತ್ತಲೇ ಚುಕ್ಕಿ ಬೆಳಕಿನ ಜಾಡು , ಇನ್ನಿಲ್ಲ ವಾಯಿತೇ ಆ ಹಕ್ಕಿ ಹಾಡು ‘…
ಮದುವೆಯಾಗಿ ಹೋದಾಗ
‘ಮೊದಲ ದಿನ ಮೌನ, ಅಳುವೇ ತುಟಿಗೆ ಬಂದಂತೆ’ , ನಂತರ ‘ಅಕ್ಕಿ ನುಚ್ಚು ಆರಿಸುವಾಗ …’,

ಪ್ರೇಮ ಗೀತೆಗಳು ಎಂದರೆ ಮೊದಲಿಗೆ ಕಣ್ಣೆದುರು ಬರುವುದು ಹಂಸಲೇಖ ರವಿಚಂದ್ರನ್ ಜೋಡಿ.
ಸ್ವಾತಿ ಮುತ್ತಿನ ಮಳೆಹನಿಯೇ, ಮೆಲ್ಲ ಮೆಲ್ಲನೆ ಧರೆಗಿಳಿಯೆ   —ಹುಚ್ಚು ಮಳೆಯಲ್ಲಿ ಪ್ರೀತಿಯನ್ನು ತೊಯ್ಯಿಸುವ  ರೋಮ್ಯಾಂಟಿಕ್   ಹಾಡದು .

ಅಮೃತವರ್ಷಿಣಿಯಲ್ಲಿ ದಂಪತಿಗಳು  ಪ್ರೀತಿಸುವ  ರೀತಿ , ಹುಡುಗಿಯರ  ಕನಸಿಗೆ ದೊರೆತ ಸ್ಪಷ್ಟ ಚಿತ್ರಣ .

ಗಗನದ ಸೂರ್ಯ ಮನೆ ಮೇಲೆ
ನೀ ನನ್ನ ಸೂರ್ಯ ಹಣೆ ಮೇಲೆ

ಅಂತ ಹಾಡಬಲ್ಲವರು
.. ಏ ದುನಿಯಾ ಪಿತ್ತಲ್ ದಿ , ಬೇಬಿ ಡಾಲ್ ಅಂತ ಬೇಕಾದರೂ ಆಡುತ್ತೇವೆ
 ಎಲ್ಲ ಅವನೆದುರಿಗೆ ಮಾತ್ರ ಅನ್ನೋ terms  and  conditions !!!

ಸಿನಿಮಾಗಳ ವಿಷಯಕ್ಕೆ ಬಂದಾಗ ನಾನು ತುಂಬಾ ಚೂಸಿ .ನಿಜವಾದ ಪ್ರೀತಿ ಅನ್ನೊಂತ  ಎಳೆ  ಇದ್ದರೆ ಮಾತ್ರ  ಇಷ್ಟವಾಗಿ ಬಿಡುತ್ತಿತ್ತು  .ಅದರಲ್ಲೂ ಅದ್ಯಾಕೋ ದುಖ ದುರಂತದ  ಕತೆಯೇ ಅಚ್ಚುಮೆಚ್ಚು .

ಸದಾ ಕಾಲದ ನನ್ನ  ಮೆಚ್ಚುಗೆಯ ಸಿನಿಮ  ‘ಗೀತ’ ..
ಜೀವನ ಪ್ರೀತಿಯ ಸಾಮಾನ್ಯ ಹುಡುಗಿ ಸೆಲೆಬ್ರಿಟಿ ಹಿಂದೆ ಬಿದ್ದು ಅವನನ್ನು ಒಲಿಸಿಕೊಳ್ಳೋದು, ಬದುಕಿದರೆ  ಅವಳಂತೆ ಬಿರುಬೀಡೆಯಿಂದ ಪ್ರೀತಿ ಹಿಂದೆಬಿದ್ದು  ಹೇಳಿಕೊಂಡು ಬದುಕಬೇಕು ಅನಿಸುವುದು   ,
ನಾಯಕನ  ಮಾಗದ ಹಳೆಯ  ಗಾಯ, ಆದರು ಒಪ್ಪಿಕೊಳ್ಳೋ ಮೂವ್ ಆನ್  ತತ್ವ  , ಮದುವೆಯ ಮುಂಚಿನ ಔಟಿಂಗ್ ಹಾಡು , ಅಣ್ಣ ಅತ್ತಿಗೆಯ ಕೆಂಗಣ್ಣು , ಮನೆ ನಾಯಿ, friendly ಫ್ಯಾಮಿಲಿ , ಪ್ರೀತಿ ದಕ್ಕುವುದಿಲ್ಲ ಅಂದಾಗ ನಾಯಕ ಪಡುವ ನೋವು, ಪರಿಪಾಟಲು, ಬದುಕು ಇಷ್ಟೇ ಎನಿಸಿ  ತಂದೆತಾಯಿ ಪ್ರೀತಿಗೆ ನೀಡೋ ಬೆಂಬಲ .ಸಿಂಪ್ಲಿ ಸುಪೆರ್ಬ್ಬ್ .
ಅದೇ ತೆರನಾದ ಚಿತ್ರ ‘ಸಂಜು ವೆಡ್ಸ್ ಗೀತ ‘.ಚಿಕ್ಕ ವಯಸಲ್ಲೇ ನಾಯಕಿ  child  abuseಗೆ ಒಳಗಾದ ಸತ್ಯ ತಿಳಿದಮೇಲು ಪ್ರೀತಿಯ ಒಂದನಿಯು ಕಡಿಮೆಯಾಗದೇ ಮತ್ತಷ್ಟು ಗಟ್ಟಿಯಾಗಿ ಪ್ರೀತಿಸುವ ನಾಯಕನ ಪಕ್ವತೆ, ಪ್ರೀತಿಯ ಸಾಂದ್ರತೆ  ಇದೆಯಲ್ಲ ಅದು ಜಸ್ಟ್ ಅಮೇಜಿಂಗ್ .ಪ್ರೀತಿ ಗೆದ್ದರು ಬದುಕು ವಂಚಿಸುತ್ತದೆ ,ಇನ್ಯಾರದೋ ರಕ್ಕಸ ಕೈಗೆ ಸಿಕ್ಕು ಹಸುನೀಗೋ ಜೀವನ .ಸಿನಿಮಾ ಬಿಟ್ಟು ಬಂದರು ಅದೆಷ್ಟೋ ಗಂಟೆಗಳು ಡಿಸ್ಟರ್ಬ್ ಆದಂತ  ಸ್ಟೇಟ್ .
‘ಇಂತಿ ನಿನ್ನ ಪ್ರೀತಿಯ’ ದಲ್ಲೂ ಹಾಗೆ…ಮುದ್ದಾದ ಹುಡುಗನ  ಎದುರು  ಕೈಬಿಟ್ಟು ಹೋದ ಹುಡುಗಿ ಬಂದಾಗ ‘ಚೆನ್ನಾಗಿದ್ಯ’ ಅಂತಾನಲ್ಲ, ಕರಳು ಚುಮುಗಟ್ಟಿ ಹೋಗುತ್ತದೆ….
ಹೂಕನಸ ಜೋಕಾಲಿಗೆ ಜೀಕಲು ಬಂದ  ಹೆಂಡತಿಯು ಹೆಣವಾಗಿ ಮಲಗಿದಾದ ಅವನ ಅಸಹಾಯಕತೆಗೆ ,ಕುಡುಕನ ಮೇಲೆ ಮೊದಲ ಕನಿಕರ , ಬದುಕು ಎಷ್ಟು ಕ್ರೂರ ಎನಿಸಿ ಹೇಗಾದರೂ ನೋವನ್ನು ಕಳೆದುಕೊ ಎನ್ನುವ ಪ್ರಾರ್ಥನೆ.
ಅಮೃತಧಾರೆಯ ಗಂಡ ತನ್ನ ಹೆಂಡತಿಯ ಆಸೆಗಳನ್ನು ಈಡೇರಿಸಲು ಪಡುವ ಪ್ರಯತ್ನ ನೋಡಿದಮೇಲೆ , ಪ್ರತಿ ಹುಡುಗಿಗೂ  ಅಂತದ್ದೇ ಗಂಡ ಬೇಕು ಅನಿಸಿತ್ತು .ಅಂತದ್ದೇ ಇನ್ನೊಬ್ಬ ಗಂಡ ಮಿಲನ ಚಿತ್ರದ ಆಕಾಶ್ .
ನಮ್ಮ ಕಾಲದ ಮೊದಲ ಪ್ರೀತಿ ಸಿನಿಮ ಅಮೇರಿಕಾ ಅಮೇರಿಕಾ ..ಅದರಲ್ಲಿನ ಸೂರ್ಯ ಭೂಮಿಗೋಸ್ಕರ ಸಂಕಟ ಪಡುವಾಗ ಭೂಮಿ  ಒಪ್ಪಿಕೊ ಒಪ್ಪಿಕೊ ಅನ್ನುತಿದ್ದೆವು  …
ಅನುರಾಗ ಸಂಗಮದ ಮುಗ್ದ ನಾಯಕ ತನ್ನ ಪ್ರೀತಿ ಹುಡುಗಿಗೆ  ಕಣ್ಣು ಮೂಡಲು ಮಾಡುವ ತ್ಯಾಗ ಅಮರ .
ಸದ್ಮ – ಕಮಲಹಾಸನ್ , ಶ್ರೀದೇವಿ ಸಿನಿಮ.ಅಲ್ಲೂ ಹೀಗೆ ಮುಗ್ದ ಪ್ರೀತಿ, ಮುದ್ದಾದ ನಾಯಿ ಹರಿಪ್ರಸಾದ್, ಕೋತಿ ರಾಮ ….

ನನ್ನ ಪ್ರಕಾರ ಪ್ರೀತಿ ಎನ್ನುವುದು ತೆವಲಲ್ಲ… ತ್ಯಾಗ .ಬುದ್ಧಿ ಭಾವ ಮೀರಿ ನಿಂತ ಅವಲಂಬನೆ .
ಗೆಳೆತನ ವಿಶ್ವಾಸಗಳು,ಸಲಿಗೆ ಕರುಣೆಗಳು   ಬೇಕು .ಸಹನೆ ಬೇಕು .ಸ್ವಾರ್ಥ ಇರಬಾರದು .
ತಾಯಿಕೋತಿಯನ್ನು ಮರಿಕೋತಿ  ತಬ್ಬಿ ನಿಶ್ಚಿಂತೆಯಾಗಿ ಇದ್ದುಬಿಡುವ ತರಹದ ಭಾವಾನಾತ್ಮಕ ಅವಲಂಬನೆ ಇರಬೇಕು.ದೇವರಲ್ಲಿ ಶರಣಾಗತಿ ಮತ್ತು ಆರಾಧನೆ ಇರುವಂತ  ಮಾನಸಿಕ  ಸ್ಥಿತಿ ತಲುಪಿಕೊಳ್ಳಬೇಕು.
ವಾಸ್ತವದಲ್ಲಿ ಸ್ನೇಹ ಮೂಡಬೇಕು .
ಬೇಕೆಂದಾಗ ಎಳೆದುಕೊಂಡು ಪಟ್ಟ್ ಅಂತ ಮುತ್ತುಕೊಡುವ wildness ಬೇಕು .
ಕನಿಷ್ಠ ಬಾರಿ ದಿನವೊಂದಕ್ಕೆ ಒಂದಿಪ್ಪತ್ತು ಸರಿ ಅವನ ಕೆನ್ನೆ ಜಿಗುಟಿ , ತಲೆ ಕೆದರಿ ಕರಡಿ ಪ್ರೀತಿ ಮಾಡಬೇಕು…
ಕಾಲು ಒತ್ತೋಕೆ, ಶೂ ಪಾಲಿಶ್  ಮಾಡೋಕೆ ಖುಷಿಯಾಗಬೇಕು, ಕೋಪ ಬಂದಾಗ ಸಿಕ್ಕಾಪಟೆ ಬಾಯಿಗೆ ಬಂದಂಗೆ ಬೈದು ಆಮೇಲೆ ಹಿಂದಿನಿಂದ ಹೋಗಿ ತಬ್ಬಿ ಸಾರೀ ಕೇಳಬೇಕು …ಏನೇನೋ ರೋಮ್ಯಾಂಟಿಕ್  ಕಲ್ಪನೆಗಳಿದ್ದವು …   

ಅಷ್ಟಕ್ಕೂ ನಾನು ಹೇಳಹೊರಟಿದ್ದು  ಕೇವಲ ಗಂಡು  ಹೆಣ್ಣಿನ  ಮೋಹದ ಬಗ್ಗೆ ಅಲ್ಲ .ಜೀವನ ಪ್ರೀತಿಯ ಬಗ್ಗೆ .
intense ಆಗಿ ಬದುಕಬೇಕು, ನೋವನ್ನಾಗಲಿ, ಪ್ರೀತಿಯನ್ನಾಗಲಿ ಮೊಗೆ ಮೊಗೆದು ಕುಡಿದುಬಿಡುವ ಚಟ ನನಗೆ .
ನನ್ನ ನೆಚ್ಚಿನ ಲೇಖಕರು , ಅವರ ಕತೆಗಳಲ್ಲಿನ ನಾಯಕರು , ನಾನೇ ನಾಯಕಿ ಎಂದು ಭಾವಿಸಿಕೊಂಡ ಪಾತ್ರಗಳು ಎಲ್ಲವನ್ನು ಇನ್ನಿಲ್ಲದಂತೆ ಪ್ರೀತಿಸಿ ಬಿಡುತ್ತಿದ್ದೆ..ಓದಿದ ಕತೆಯನ್ನೇ ಮತ್ತೆ ಮತ್ತೆ ಓದುತಿದ್ದೆ …ಕುಪ್ಪಳಿಸಿ  ಕುಣಿಯುತ್ತಿದ್ದೆ .
ಎಲ್ಲರ ಮೇಲು ಪ್ರೀತಿ ಹತ್ತುತಿತ್ತು ..ಯೋಗರಾಜ್ ಭಟ್ರ ಉಡಾಫೆ , ಜಯಂತ್ ಕಾಯ್ಕಿಣಿಯವರ ನಕ್ಷತ್ರ ಕಣ್ಣು, ಎಂದಿಗೂ ತೀರದ ಅವರ ಪದಗಳ ಭಾವುಕತೆ, ರವಿ ಬೆಳೆಗೆರೆಯ ಚಾರ್ಮ್ , ದುನಿಯಾ ವಿಜಯ್ ನ ಒರಟುತನ , ದಿಗಂತನ ಗುಳಿ ಕೆನ್ನೆ,ಅಶ್ವಥ್ ರೆ ರೆ ರೇರಾ ಅನ್ನೋ ರೀತಿ   …..
ಪ್ರೀತಿಯ ಮೋಡಿಗೆ ಜಗಕೆಲ್ಲ ವಸಂತವೇ .
ಬದುಕೋಕೆ ವಿಪರೀತ ಆಸ್ಥೆ .ಹಬ್ಬಕ್ಕೆ ಖುದ್ದು   ಶಾಪಿಂಗ್ ಮಾಡಿ ಹಣ ಉಳಿಸಬೇಕು ಎನ್ನುವುದರಿಂದ ಹಿಡಿದು ಮನೆ ಗೋಡೆಗೆ ಇಂತದ್ದೆ ಫ್ರೇಮ್ ಹಾಕಬೇಕು ಎನ್ನುವತನಕ ಎಲ್ಲದರ ಮೇಲೂ ಹುಚ್ಚು ಆಸೆ .ಬೀದಿಬದಿಯ ಅಂಗಡಿಯ ಗಾಜಿನೊಳಗೆ ಗೊಂಬೆ ತೊಟ್ಟುಕೊಂಡಿದ್ದ ಸಿಂಡ್ರೆಲ್ಲ ಡ್ರೆಸ್ಸು ವ್ಯಾಮೋಹ ಹುಟ್ಟಿಸುತ್ತಿತ್ತು ,ಕಾರ್ ಓಡಿಸೋದ ಕಲಿಯಬೇಕು , ಒಂದು ಒಳ್ಳೆ ಲಿಪ್ಸ್ಟಿಕ್ ಕರೀದಿಸಬೇಕು , ಹೂವು, ಚಂದಿರ, ಹಣ್ಣು ಎಲ್ಲದರ ಮೇಲೂ ಪ್ರೀತಿ … ರೇಶಿಮೆ ಸೀರೆ, ಸೆಕ್ಸಿ ಬ್ಲೌಸು , ಮಲ್ಲಿಗೆ ಹೂವು , ಜುಮುಕಿ , ಮಂಡಿಮೇಲಿನ ಗಿಡ್ಡ jeans ಚಡ್ಡಿ ,  ಮುದ್ದಿನ ನಾಯಿ ,  ಕೀಟಲೆ ಮಕ್ಕಳು , ಬೀದಿ ಬದಿಯ ಪಾನಿಪುರಿ , ಯಾರೋ ಬರೆದ ಕವನ , ಇನ್ಯಾರದ್ದೋ  ಕತೆ —- ಪ್ರೀತಿಸಬೇಕು ಜಗತ್ತನ್ನ, ಬದುಕ್ಕನ್ನ ಬಿಟ್ಟೂಬಿಡದೆ .

ಇದೆಲ್ಲ ಈಗ ಯಾಕೆ ನೆನಪಾಗುತ್ತಿದೆ ಎಂದರೆ ಹೆಚ್ಚುಕಮ್ಮಿ ಎರಡು ವರ್ಷ ಉಸಿರಾಡದೆ ಬದುಕಿಬಿಟ್ಟೆ …ಒಂದು ಹಾಡು ಕೇಳಲೂ ಹೆದರಿದೆ ಎಲ್ಲಿ ಕಂಪನಗಳೇಲಿ   ಚುಚ್ಚಿ ಬಿಡುತ್ತವೋ ಎಂದು .

ಅತಿ ಕಡಿಮೆ ಆತ್ಮವಿಶ್ವಾಸದ ಹುಡುಗಿ ನಾನು.
ಆ  ಲೆಕ್ಚರರ್ ಯಾಕೆ ನಿನ್ನೆ ನೋಡಿ ಪಾಠ ಮಾಡಿದ,ಟೀಂ ಲೀಡರ್ ಯಾಕೆ ನಿನಗೆ ಹೆಚ್ಚು ಇಂಟರೆಸ್ಟ್ ಕೊಟ್ಟು ಕೆಲಸ ಕಲಿಸುತ್ತಾನೆ,  ಎಂದು ರೇಗಿಸುತಿದ್ದ ಗೆಳೆಯ-ಗೆಳತಿಯರಿಗೆ ಛೆ ಹಾಗೆಲ್ಲ ಏನು ಇರಲಾರದು ಎನ್ನುತ್ತಿದ್ದೆ  …ಇದ್ದರು ಇರಬಹುದು ಎನಿಸುತ್ತಿರುವಾಗಲೆ ತುಂಟು ತುಂಟಾಗಿ ನನ್ ಮಗ ಬಿದ್ದಿದ್ದಾನೆ  ಎಂದು ಬಿಡುತ್ತಿದ್ದೆ .
ಮತ್ತೆ ಹೆಚ್ಚು consious ಕೂಡ ಆಗಿಬಿಡುತ್ತಿದ್ದೆ , ನನ್ನಿಂದ encourage ಆಗಬಾರದು , ಒಳ್ಳೆ ಹುಡುಗಿ ಪಟ್ಟಕ್ಕೆ ಮೋಸಮಾಡಬಾರದು ಎನ್ನುವಂತೆ .
ನಮ್ಮನ್ನು ನಾವು ನಿಯಂತ್ರಣದಲ್ಲಿ ಇಟ್ಟುಕೊಳ್ಳೋಕೆ  ಇಲ್ಲದ ಸಮಜಾಯಿಸಿಕೊಟ್ಟುಕೊಳ್ಳುತ್ತಾ ದೂರ ನಿಲ್ಲುತ್ತೀವೇನೋ .

ಜೀವನವನ್ನು ಉತ್ಕಟವಾಗಿ ಪ್ರೀತಿಸ ಬಯಸಿದವಳಿಗೆ ,ಒಂದು ಮಾರ್ಗ ಹೊಳೆದಿತ್ತು..ಶತ್ರುವನ್ನ ಮಿತ್ರ ಮಾಡಿಕೊಂಡು ಬಿಟ್ರೆ ಬದುಕನ್ನು ಮತ್ತೂ ಪ್ರೀತಿಸಬಹುದು…ತೀರ ತೀರ ಹೆಣ್ಮಕ್ಕಳಂತೆ ಆಡುತ್ತಿದ್ದಾರೆ ಇಲ್ಲದ ಕಸಿವಿಸಿ ಅಪ್ಪನಿಗೆ….ಅದರ ಬದಲು ಅಪ್ಪನ ಪಕ್ಕವೇ ಕೂತು ಯಾವುದೋ ಹುಡುಗ ಲೈನ್ ಹೊಡೆದ ಏನ್ ಮಾಡ್ಲಿ ಇವಾಗ, ನಿನ್ನ ಟೈಮ್ ನಲ್ಲಿ ಏನಾಗಿತ್ತು   ಅಂದುಬಿಟ್ರೆ   ??ಅವರಿಗೂ ದೈರ್ಯ .ಅಂತ ಹುಚ್ಚು ಪ್ರಯತ್ನಕ್ಕೆ ಕೈ ಹಾಕಿದವಳು ನಾನು .
ಅಪ್ಪನನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಿತ್ತು ..
ಆದ್ದರಿಂದಲೇ ನಾನು ಹೆಚ್ಚು ಹೆಚ್ಚು ಹೆಣ್ಣಾಗಲೂ  ಹೋಗಲೇ ಇಲ್ಲವೇನೋ ..ಕೆಲವರು ಹೆಣ್ಣಿಗೆ ಇರಬೇಕಾದ ನಯ, ನಾಜೂಕು , ನಾಚಿಕೆ ಇಲ್ಲದ ಗಂಡುಹುಡುಗಿ  ಎಂದರು .
ಜಾಸ್ತಿ ಮೇಕ್ಅಪ್ ಮಾಡೋದು, ಬ್ಯೂಟಿ parlour ಸುತ್ತೋದು , ಕೂದಲನ್ನು ಸುಮ್ಮಸುಮ್ಮನೆ ನೆವರಿಸೋದು, ಕೋಲ್ಡ್ ಕ್ರೀಂ, perfume ಗಳ ಮೊರೆ ಹೋಗೋದು    , ಮಾತು ಮಾತಿಗೂ ನಗೋದು ಸಾಧ್ಯ ಆಗುತ್ತಲೇ  ಇರಲಿಲ್ಲ ನನಗೆ…
ಅಪ್ಪನಿಗೆ ಹೆಚ್ಚು ಆತುಕೊಂಡು ಬೆಳೆದುಬಿಟ್ಟೆ  .  ಗಂಡಸರ ಕಂಫರ್ಟ್ jone ಹೆಚ್ಚು ಇಷ್ಟವಾಗ ತೊಡಗಿತ್ತು  .ಚೂರು ಮೈಚಳಿ ಬಿಟ್ಟು ಹುಡುಗರೊಂದಿಗೆ ಮಾತಾಡೋಕೆ ಶುರು ಮಾಡಿದ್ದೆ ಕೆಲಸಕ್ಕೆ ಸೇರಿದ ಮೇಲೆ . ಮಗ ಗಾಂಚಲಿ ಕಣೋ ನಿನಗೆ ಅಂತ ಮಾತು ಶುರು ಮಾಡಿದರೆ ಯಾವ ಹುಡುಗ ತಾನೇ ಬಿದ್ದಾನು …ಆದರು ಹತ್ತಿರದಿಂದ ಬಲ್ಲವರಿಗೆ ಮಾತ್ರ  ನನ್ನ ಒಳತೋಟಿ ಗೊತ್ತಿತ್ತು , ಕವನಗಳ ಬಗ್ಗೆ ಗೊತ್ತಿತ್ತು , ಭಾವುಕತೆಯ ಬಗ್ಗೆ ಗೊತ್ತಿತ್ತು …
ತುಂಬಾ ಸೀರಿಯಸ್ ಹುಡುಗಿ ಮಾತೆ ಆಡಲ್ಲ ಅನ್ನುವವರು ಇದ್ದರು, ಕಚ್ ಬೇಡ ಬೇಗ ಹೇಳಿ ಮುಗಿಸು ಅನ್ನುವವರು ಇದ್ದರು ..

ಹರೆಯಕ್ಕೆ ದುಡ್ಡು ಮತ್ತು ದೈರ್ಯವಿರಬೇಕು …ನನ್ನ ಬಳಿ ಎರಡು ಇರಲಿಲ್ಲ …ಇದ್ದ್ದದ್ದೆಲ್ಲ ಒಂದಷ್ಟು ಕನಸು, ಕಲ್ಪನೆ, ವಾಸ್ತವದಲ್ಲಿ ಬದುಕದೆ ಕವನಗಳಲ್ಲಿ ಬದುಕಿದ ಹುಡುಗರು …ಕೆಲಸಕ್ಕೆ ಸೇರಿ ಕೈನಲ್ಲಿ ದುಡ್ಡು ಹಿಡಿಯುವ ಹಾಗೆ ಆದಾಗ ಬಂಧನದ ಸರಪಳಿ ಬಿಚ್ಚಿದ್ದರು ..ಆದರು ದೈರ್ಯ ಬಂದಿರಲಿಲ್ಲ .
ಹುಡುಗರನ್ನು ಪ್ರೀತಿಸಬೇಡ ಅಂತ ಕಟಪ್ಪಣೆ ಹಾಕಿ ಹಿಂದಿಂದೆ ಭಯದ ನೆರಳು ಹಿಂಬಾಲಿಸುವಂತೆ ಮಾಡಿದ ಅಪ್ಪ ನನ್ನ ಮದುವೆ ಸಮಯಕ್ಕೆ ಗಂಡು ಹುಡುಕಲು  ಜೊತೆ ಇರಲೆಇಲ್ಲ   …
ಅತಿ ಮಡಿವಂತಿಕೆ ತೊಟ್ಟುಕೊಂಡಂತ ಸೋಗು ಹೊರಗೆ  .ಅದನ್ನೇ ಹೆಮ್ಮೆಯಿಂದ ತೊಟ್ಟು ಮೆರೆಯುತ್ತಿದ್ದವಳಿಗೆ ಸರಿಯಾಗೆ ಏಟು ಕೊಟ್ಟಿದ್ದ ಅವನು .

ಅಪ್ಪ ಬಿಟ್ಟು ಹೋದ ದುಡ್ಡು ,ಗಾಡಿ, ಕಾರು, ನಾನು ಗಳಿಸಿಕೊಂಡ ಓದು, ಕೈ ತುಂಬಾ ಸಂಬಳ , ತಾತ ಬಿಟ್ಟು ಹೋದ ಆಸ್ತಿ ಎಲ್ಲ ಇತ್ತು ….
ಅವನಿಗೊ ಎಲ್ಲ ಇದ್ದವು ಎಂದೇ ತಿಳಿದಿದ್ದೆ …ಸಮಸ್ಯೆ ಏನಿದ್ದೀತು …ಸುಖಿಸೋದು ಒಂದೇ .ಅವನಿಂದ ಅಂತ ಯಾವ expectation ಗಳೂ ನನಗಿರಲಿಲ್ಲ ಪ್ರೀತಿಯೊಂದನ್ನು  ಬಿಟ್ಟು.
ಹೊಟ್ಟೆ ಬಿರಿಯುವ ಹಾಗೆ ತಿಂದು, ಮೈ ಮುರಿಯುವ ಹಾಗೆ ಬಾಚಿ ತಬ್ಬಿ ಸುಖಿಸಿ   , ಮಾತಲ್ಲೆಲ್ಲ ಸ್ಕಲಿಸಿ , ಜೋಂಪಾಗಿ ನಿದ್ದೆ ತೆಗೆದು, ಸಿಕ್ಕ ಸಿಕ್ಕಲೆಲ್ಲ ಅಲೆದು, ಇಷ್ಟ ಬಂದಹಾಗೆ ಶೋಕಿ ಮಾಡಿಕೊಂಡು ..ಜೀವನ ಪರ್ಯಂತ ನಲಿದಾಡಬಹುದಾದ ಅದ್ಭುತ ಅವಕಾಶ ಇತ್ತು ಅವನಿಗೆ .
ಒಂದೇ ಹನಿ ಪ್ರೀತಿ ಸೋಕಿಸಿದ್ದಿದ್ದರೆ ಸಾವಿರ ಕವನಗಳ ಬರೆದು ಬಿಸಾಕುತ್ತಿದ್ದೆ .ಅವನ ನೆಚ್ಚಿಗೆಯ ಮಾತಿಗೆ ಏನು ಬೇಕಾದರೂ ಕಲಿತು ಮಾಡಲು ಸಿದ್ದವಿದ್ದೆ .ಅವನ ಗಂಡಸುತನ ಮತ್ತು ನನ್ನ ಹೆಣ್ತನ ಎರಡನ್ನು ಒಟ್ಟೊಟ್ಟಿಗೆ ಸಂಭ್ರಮಿಸಿ ಸಾರ್ಥಕ ಪಡೆಯಬೇಕಿತ್ತಷ್ಟೇ ನನಗೆ ……  
ಆದರೆ ಅವನಿಗೆ ಅದ್ಯಾವುದ್ದೂ ಬೇಕೇ ಇರಲಿಲ್ಲ ….ಕನಸುಗಳ ಬಲೂನಿಗೆ ಚುಚ್ಚಿದ ವಾಸ್ತವದ ಪಿನ್ನು ನನ್ನ ಮದುವೆ.
ಅವನಿಗೆ  ಬೇಕ್ಕಿದ್ದೆಲ್ಲವು ದುಡ್ಡು, ಇದ್ದಿದ್ದೆಲ್ಲವು ದರ್ಪ, ಕೊಳಕು ಚೆಷ್ಟೆಗಳೇ .
ಸಲಿಗೆ ಸ್ವಾತಂತ್ರ್ಯವನ್ನು ಜಪ್ಪಯ್ಯ ಅಂದರು ನೀಡಲು ತಯಾರಿರಲಿಲ್ಲ ಅವನು .ದಾಸ್ಯದ ಕಣ್ಣೀರು ಅತವ ಕಾಸು ಎದುರಿಗೆ ಬೀಳುವವರೆಗೂ ಏನೇನೋ ನೆಪಗಳಿಗೆ ಗೋಳುಯ್ದುಕೊಳ್ಳುತಿದ್ದ .
ಮೊತ್ತಮೊದಲ ಬಾರಿಗೆ ಹೆಣ್ನಾಗಿದಕ್ಕೆ   ಹಿಂಸೆ, ಸಂಕಟಪಟ್ಟೆ..ಗಂಡಸುತನ ಇಷ್ಟು  ಭೀಕರವಾಗಿರಬೇಕಾ   ಅಂತ  ಭಯಪಟ್ಟೆ …
ಎಂತಾ ಜಿಗುಪ್ಸೆಯದು  !!!! ಆತ್ಮಭಿಮಾನವನ್ನ ಹರಿದು ಹಂಚುವ , ಜೀವನವನ್ನ ಬುಡಮೇಲೂ ಮಾಡುವ, ದುಡ್ಡಿಗೋಸ್ಕರ ಪ್ರೀತಿಯ ಹೆಸರಲ್ಲಿ ನಡೆಯುವ   ವ್ಯಾಪಾರ …
ಇಂಚಿಂಚು ಇರಿದು ಇರಿದು ಕೊಲ್ಲುತ್ತಿದ್ದ, ಮೃಗದಂತೆ ಮನಸ ಮೇಲೆಲ್ಲಾ ಎರಗುತ್ತಿದ್ದ , ಎಲ್ಲದಕ್ಕೂ ಶಿಕ್ಷೆ, ಮೋಕ್ಷ ಕೊಡಲು ಕಟಕಟ ಹಲ್ಲುಕಡೆದು ಹೆದರಿಸುತ್ತಿದ್ದ… ಮಾತು ಮರೆತುಹೋಯ್ತು..ಅವನ   ಉಸಿರಿಗೆ ಗುಂಡಿಗೆಯಲ್ಲೆಲ್ಲಾ ಗಡಗಡ ಸದ್ದು.
ಮನೆ ಕೆಲಸದವರಿಗಿಂತಲೂ   ಕಡೆಯಾಗಿ ನಡೆಸಿಕೊಂಡ  , ಏನೇನೋ ಅನುಮಾನ ಪಟ್ಟ, ದೂರಿದ , ದುಡ್ಡು ಕೊಟ್ಟಾಗ ಪ್ರೀತಿಸಿದ …ಡಿಪ್ರೆಶನ್ ಗೆ ಜಾರಿದ್ದು ಆಗಲೇ  …
ತೀರ ತೀರ ಸಿಂಪಲ್ ಮೌಲ್ಯಗಳು ಕೂಡ ಇರಲಿಲ್ಲ ಅವನ ಮನೆಯವರಿಗೆ   …ಹಿಂಸೆ ಮಾಡಬಾರದು, ಒಳ್ಳೆಯದ್ದು ಮಾಡಲಾಗದಿದ್ದರೂ ಕೆಟ್ಟದನ್ನು ಮಾಡಬಾರದು, ಇನ್ಯಾರದ್ದೋ ಮಾನದ ಜೊತೆ ಸರಸವಾಡಬಾರದು   ….ಅವಮಾನ, ಹಿಂಸೆ ಬಿಟ್ರೆ ಮತ್ತೇನು ನೆನಪಿಗೆ ಬರೋಲ್ಲ ನನಗೆ .

ನೋಡುನೋಡುತ್ತಿದ್ದಂತೆ ಕನಸಿನ ಸೌದ ಕುಸಿದು ಬಿದ್ದಿತ್ತು..ಯಾರ್ಯಾರೋ ಸೇರಿಕೊಂಡು ಒಡೆದು ಉರುಳಿಸಿದ್ದರು .
ಬಯಲಲ್ಲಿ  ಬೆತ್ತಲಾಗಿ ಅಭದ್ರಗೊಂಡಂತೆ…
ಪಾತಾಳಕ್ಕೆ ಕುಸಿದುಬಿದ್ದೆ ..ಯಾರು ಅಲ್ಲಿಂದ ನನ್ನ ಈಚೆ ತರಲು ಸಾದ್ಯವಿರಲಿಲ್ಲ …
ದಿಕ್ಕು ತಪ್ಪಿದ ಬದುಕು..

ಸಿಗರೇಟನ್ನು ಸೇದದೆ ಸುಮ್ಮನೆ ಸುಡುವಂತೆ ಹಗಲು ಇರುಳುಗಳನ್ನು ಸುಟ್ಟುಹಾಕಿದೆ…ಕೊಂಡುಕೊಂಡ ಪುಸ್ತಕಗಳು, ಅದರಲ್ಲಿನ  ಕತೆಗಳು ಅಲ್ಲೇ ಉಳಿದವು, ಓದಿ ಏನಾಗಬೇಕು , ಬದುಕೇ ಮುಗಿದು ಹೋಗಿದೆ, ಇನ್ಯಾರದ್ದೋ ಕತೆ ಕಟ್ಟಿಕೊಂಡು ಏನುಮಾಡಲಿ ಎನ್ನುವ ತಾತ್ಸಾರ,  ನನ್ನ ಕತೆ ಹೇಳಿಕೊಳ್ಳಲು ಒಬ್ಬರು ಗತಿ ಕೂಡ  ಇರಲಿಲ್ಲ, ಜನರ ಸಮಯಕ್ಕೆ ಕಾಸಿನ ಕಿಮ್ಮತ್ತು , ಒಂಟಿತನ.
ದೈರ್ಯವಿರದ ಬದುಕು ಒಂದು  ಬದುಕಾ ಅನಿಸಿತು .
 ಬದುಕಿನ ಮೇಲೆ ಸಿಟ್ಟು , ಅಪ್ಪನ ಮೇಲೆ ಸಿಟ್ಟು , ನನ್ನ ಮೇಲೆ ಸಿಟ್ಟು , ಅವನ ಮೇಲೆ ಸಿಟ್ಟು ….ಅವನೇ ಪ್ರಪಂಚ ಎಂದು ಕೊಂಡಿದ್ದಾಗ   , ಅವನ ನಿರ್ದಾಕ್ಷಿಣ್ಯ ತಿರಸ್ಕಾರದಿಂದ   , ಇಡೀ ಪ್ರಪಂಚವೇ ನನ್ನನ್ನು ತಿರಸ್ಕರಿಸಿ ಬಿಟ್ಟಿತು  ಎನ್ನುವ ಭಯ,ಮುಂದೇನು   ತತ್ತರಿಸಿ ಹೋದೆ …ಎಲ್ಲ ಗಂಡಸರು ಹೆಚ್ಚು ಕಡಿಮೆ ಒರಟಾಗೆ  ಸ್ಪಂದಿಸಿದ್ದರು…ಅವನು ತಿರಸ್ಕರಿಸುವಂತ ತಪ್ಪನ್ನು ನೀನು ಏನು ಮಾಡಿದೆ ಕೇಳುತ್ತಿದ್ದರು, ಬಾಯಿಗೆ ಬಂದಂಗೆ ನೀತಿ ಪಾಠ ಮಾಡಿದರು, ಬಯಸಿದಂತೆ ಉಪಯೋಗಿಸಿಕೊಳ್ಳುವುದು  ಅವನ ಹಕ್ಕು, ಅದಕ್ಕಿಂತ ನಿನ್ನ ಕರ್ತವ್ಯ ಏನಿದೆ ಎಂಬಂತೆ ನಿರ್ಣಯ ಕೊಟ್ಟರು …ನಾನು ಓದಿದ್ದು, ಬರೆದಿದ್ದು, ಬೆಳೆದಿದ್ದು, ಬದುಕಿದ್ದು,ಕೆಲಸ  ಮಾಡುತ್ತಿರುವುದು  ಯಾವುದನ್ನು ಗಣನೆಗೆ ತೆಗೆದುಕೊಳ್ಳದೆ ಲಾಜಿಕ್ ಗಳ ಮೇಲೆ ನಾಲಿಗೆ ಹೋದಂಗೆ ಮಾತಾಡಿದರು .
ಮರುಗಟ್ಟಿ ಹೋದೆ.
ಕವನಗಳು ವಿಶಾದವನ್ನೇ ಉಸಿರಾಡಿದವು…ಯಾರನ್ನು ತಲುಪದೇ ಮಲಗಿದವು.. .. ಬಡವನ ಕೋಪ ದವಡೆಗೆ ಮೂಲ ಎಂಬಂತೆ ಏನೂ ಪ್ರಯೋಜನಕ್ಕೆ ಬರಲಿಲ್ಲ ..ಬರೆದು ಏನಾಗಬೇಕು ಎನ್ನುವ ಉದಾಸೀನತೆ ..ಯಾವೊಂದು ವಿಷಯದಲ್ಲೂ ಆಸಕ್ತಿ ಉಳಿಯಲಿಲ್ಲ ….ಬದುಕಲ್ಲಿ ಭರವಸೆ  ಇರಲಿಲ್ಲ  …ಇನ್ನಿಲ್ಲದಂತೆ ಬಲವಂತದಿಂದ ಬದುಕಿದೆ…ಅವನು ವಾಪಸು ಬಾರದ  ಹೊರತು ಏನನ್ನೂ ಪ್ರೀತಿಸಲಾರೆ ಎಂದುಕೊಂಡು ಸುಮ್ಮನೆ ಜಡಗಟ್ಟಿ ಹೋದೆ.  

ಅವನೊಬ್ಬ ಹುಡುಗ ಎಲ್ಲ ಗಂಡಸರಂತೆ ಮಾತಾಡಲಿಲ್ಲ.. ಕನಿಕರವಿತ್ತು,  ತಿಳುವಳಿಕೆ ಇತ್ತು , ಕನಿಷ್ಠ ಪಕ್ಷ ನೋಯಿಸಬಾರದು ಎನ್ನುವ ಕಾಳಜಿ ಇತ್ತು, ಶಿಷ್ಟಾಚಾರವಿತ್ತು… ಸಣ್ಣ ಭರವಸೆ ನೀಡಿದ..ಏನೋ ಬರೆದು ಕೊಂಡೆ..ಇನ್ಯಾರೋ ಹುಡುಗ ಸ್ಪಂದಿಸಿದ..ನಿಮ್ಮ ಕವನಗಳನ್ನು 5 -6  ವರ್ಷಗಳ ಹಿಂದೆಯೇ  ಸ್ವೀಕರಿಸಿದ್ದೆ ಎಂದ, ,ನಿಮ್ಮನ್ನು  ಪ್ರೀತಿ ಮಾಡಿದ್ದೆ ಎಂದ…. ಆಗ ಕರೆದ್ದಿದ್ದರೆ ಬದುಕಿಗೆ ಬಂದಿರುತ್ತಿದ್ದಿರ ತುಂಟ ಪ್ರಶ್ನೆ ಕೇಳಿದ ….

ತಿರಸ್ಕಾರ, ನೋವು, ಹಿಂಸೆಯನ್ನೇ ಉಂಡುಂಡು ಸತ್ತಿದ್ದವಳಿಕೆ ಸಣ್ಣ ಎಳೆಯಲ್ಲಿ ಜೀವ ಚೈತನ್ಯ …

ಹೆಣ್ಣ ಅಲ್ಲ ಎಂದವರಿಗೆ, frigid ಎಂದವರಿಗೆ, ಬೆಂಕಿ ಎಂದವರಿಗೆ , ಬೇಡ ಎಂದವರಿಗೆ
ಹೇಳಬೇಕಿತ್ತು ಒಬ್ಬ  ಪ್ರೀತಿಯ ಗಂಡ, ಮುದ್ದು ಮೊಗು, ಬೆಚ್ಚಗಿನ ಮನೆ, ಚೆಂದದ ಸಂಸಾರ , ಪ್ರೀತಿಯ ತೇರು ಅಷ್ಟೇ ನನ್ನ ಕವನ, ಕನಸು, ಬದುಕು ಬಯಸಿದ್ದು,  ಕನವರಿಸಿದ್ದು ಎಂದು..
ಅದನ್ನೂ ನೀಡಲಾಗದ ಅವನೊಬ್ಬ ಶುದ್ಧಾನು ಶುದ್ಧ ಅಯೋಗ್ಯ ಎಂದು …

ಅಪ್ಪ ಪಾಯ ಹಾಕಿದ್ದರು , ಅವನು ಗೋಡೆ ಕಟ್ಟಿ ಎತ್ತರಿಸಿದ , ನಾನೇ ಮಾಡು ಹಾಕಿ ಮುಚ್ಚಿಕೊಂಡ ಸಮಾಧಿಯ ಇಟ್ಟಿಗೆಗಳನೆಲ್ಲ   ಕಿತ್ತಾಕಿ
ಇದ್ದ ಬದ್ದ ಉಸಿರನೆಲ್ಲ ಬಸಿದು ಧೈರ್ಯವಾಗಿ ಬರೆದೆ …

ಅದ್ಭುತ ಪ್ರೆಯಸಿಯಾಗಬಲ್ಲೆ
ಅಪ್ಪಟ ಪ್ರೇಮಿಯೊಬ್ಬಬೇಕು
ಅವನ ಕನಸುಗಳನೆಲ್ಲ
ಕೊಂಡುಕೊಂಡು ಬಿಡಬಲ್ಲೆ
ತ್ವರಿತಕ್ಕೆ ಒಂದಿಷ್ಟು ಕವನಗಳು
ಮಾತ್ರ  ಮಾರಾಟಕ್ಕಿವೆ
ಅರ್ಹತೆಯ ಅಗತ್ಯ ಒಂದೇ
ಪ್ರೀತಿಸಲ್ಪಡುವ ಯೋಗ್ಯತೆ
ಉದ್ದ ಆಳ ಅಗಲ ಸವಿಸ್ತಾರವಾಗಿ
ಪ್ರೀತಿಸಿದರು ಮುಗಿಯದಷ್ಟು ದಾಹವಿದೆ
ಹೆಣ್ಣಾಗಿದಕ್ಕೆ ಸಂಕಟಬೇಡ
ಇನ್ನು ಮುಂದೆ
ಹಳೆ ಜನ್ಮದ ಪಾಪವೆಲ್ಲ ತೊಳೆದುಕೊಂಡು ಬಿಡುವೆ  
ಸಂಭ್ರಮಕ್ಕೆ ಒಂದು ಚೆಂದದ  ನೆವ ಬೇಕು
ಯಾರಾದರು ಇದ್ದೀರಾ ಕಣ್ಣ ಹಿಂದೆ  ??  

ಯಾರಿಗೆ ಅರ್ಪಿಸಬೇಕೋ, ಎಲ್ಲಿ ಕೂಗಿ ಓದಬೇಕೋ ತಿಳಿಯದೆ ಸಂತೆಯಲ್ಲಿ ಕಳೆದು ಹೋದೆ ..
ಕನಿಷ್ಠ ಪಕ್ಷ ಕನಸಲ್ಲಿ ಮತ್ತೆ  ಬದುಕಿ ಬಂದೆ.
 

 

 

    

 
 
 

 

 
   
 

 

   

 

 
        
   
   
 
 

ಈ ಕಾಲದ ಅರ್ಭುದನು ಆ ಕಾಲದ ಪುಣ್ಯಕೋಟಿಯೂ ….

ಯಾಕೋ ಇತ್ತೀಚೆಗೆ ಪುಣ್ಯಕೋಟಿ ಕತೆ ಮತ್ತೆ ಮತ್ತೆ ನೆನಪಾಗುತ್ತಿರುತ್ತದೆ
..ನೆನೆದಾಗಲೆಲ್ಲ ಕಣ್ಣಲಿ ನೀರು ….ಚಿಕ್ಕವಳಿದ್ದಾಗ ಅಪ್ಪ ಪದೇ ಪದೇ ಹೇಳುತಿದ್ದ
ಕತೆ ಅದು.”ಸತ್ಯವೇ ನಮ್ಮ ತಾಯಿ-ತಂದೆ ಸತ್ಯವೇ ನಮ್ಮ ಬಂಧು-ಬಳಗ …ಸತ್ಯ ವಾಕ್ಯಕೆ
ತಪ್ಪಿ ನಡೆದರೆ ಮೆಚ್ಚನಾ ಪರಮಾತ್ಮನು …..”

ಹಸಿದ ಹೆಬ್ಬುಲಿ ಆರ್ಬುದ ವಾಪಸ್ಸು ಬಂದ ಪುಣ್ಯಕೋಟಿಯ ಸತ್ಯಕ್ಕೆ ತಾನೇ ಆತ್ಮಹತ್ಯೆ
ಮಾಡಿಕೊಂಡನಂತೆ..

ನಾನು ಸಹ ಆರ್ಬುಧನ ಎದುರು ನಿಂತಿದ್ದೆ…ಆದರೆ ಕಾಡಲಲ್ಲ…ರೋಡಲ್ಲಿ …
ಮತ್ತು ಅವನು ನನ್ನ ಗಂಡ ….”ಮರ್ಯಾದೆಯಿಂದ ಸೆಟಲ್ಮೆಂಟ್ ಮಾಡಿಕೊಂಡು ಡೈವೋರ್ಸ್
ಕೊಡು ಎನ್ನುತ್ತಿದ್ದ ….ಇಲ್ಲಾಂದ್ರೆ ಪರಿಣಾಮ ನೆಟ್ಟಗಿರಲ್ಲ ಅನ್ನುವ warning
ಬೇರೆ ….
ಇದಕ್ಕೂ ಮುಂಚೆ ಎಷ್ಟೋ ತಿಂಗಳುಗಳ ಹಿಂದೆ ಬೇಟಿಮಾಡಿದಾಗ “ಸಾಯಿಸೆತೀರುತ್ತೇನೆ
,ಕೊಂದುಬಿಡುತ್ತೇನೆ ,ಏನೇ ಆದರು ಇವತ್ತು ಇವಳನ್ನು ಉಳಿಸಲ್ಲ ” ಎನ್ನುತ್ತಾ
ಅರ್ಬುದನಿಗಿಂತ ಕೆಟ್ಟ ಹಸಿವಿನಲ್ಲಿ ಆರ್ಬಟಿಸಿದ್ದ …..15-20 ಜನರಿದ್ದರು
….ಎಲ್ಲರೆದುರು ಸೂಳೆಮುಂಡೆ ಎಂದು ಕರೆದ …ಇಂದು ಬೀದಿಯಲ್ಲಿ ಜನರ ಎದುರು ….

ಹುಟ್ಟಿದ ಮೇಲೆ ಸಾವು ನಿಶ್ಚಿತ …ಎಂದೋ ನಡೆಯಬೇಕಿರುವುದು ಇಂದೇ ನಡೆದರೆ ಒಂತರ

ಮುಕ್ತಿ ..ಸಾವಿಗೆ ಅಂಜಿಕೆಯಿಲ್ಲ …

ಅವನ ಮನೆಯವರ ಜಾಯಮಾನಕ್ಕು ನನಗು ಅಜಗಜಾಂತರ …50-60 ದಾಟುತ್ತಿದ್ದರು
ಇನ್ನೊಂದು 100 ವರ್ಷಗಳಿಗೆ ಗ್ಯಾರಂಟಿ ಕಾರ್ಡ್ ತಂದಿರುವವರಂತೆ ಪ್ರತಿಕ್ಷಣ ತಮ್ಮ
security,safety ಗೋಸ್ಕರ ಇನ್ನಿಲ್ಲದ ತಂತ್ರಗಳನ್ನು ಉಪಯೋಗಿಸುತ್ತಾ
ಬದುಕುತ್ತಿದ್ದರು …

“ಖಂಡವಿದೆಕೋ ಮಾಂಸವಿದೆಕೋ ,ಗುಂಡಿಗೆಯ ಬಿಸಿ ರಕ್ತವಿದೆಕೋ ,ಚಂಡ ವ್ಯಾಗ್ರನೆ
ನೀನಿದೆಲ್ಲವ ಉಂಡು ಸಂತಸದಿಂದಿರು ” ಎನ್ನುತ್ತ ನಾನು ನಿಂತಿದ್ದೆ …
ಅವನಿಗೆ ಸ್ಪಷ್ಟವಾಗಿ ಹೇಳಿದೆ -” ಸಾಯಿಸುತ್ತೀಯ ಈಗಲೇ ಸಾಯಿಸು , ಕ್ಯಾರೆಕ್ಟರ್
ಸರಿ ಇಲ್ಲ ಗಂಡನ ಬಿಟ್ಟವಳು ಅನ್ನಿಸಿಕೊಂಡು ಈ ಸಮಾಜದಲ್ಲಿ ಬದುಕುವುದಕಿಂತ
ಸಾಯುವುದೇ ಮೇಲು ”

90 % ತೆಗೆದರು ಜಂಭ ಬೀಳಬಾರದು ಎಂದು ಕಮ್ಮಿಯೇ ಆಯಿತು ಅನ್ನುತ್ತಿದ್ದ ಅಪ್ಪ,
ಒಳಗೊಳಗೇ ಖುಷಿಪಟ್ಟು friends ಹತ್ತಿರ ಹಂಚಿಕೊಂಡು ಹೆಮ್ಮೆ ಪಡುತ್ತಿದ್ದ ಅಪ್ಪ ,
ಕಾಲೇಜಿಗೆ ಕಳಿಸುವಾಗ ಒಂದು ಮಾತು ಹೇಳಿದ್ದರು … ನೀನು ಮಾರ್ಕ್ಸ್ ತೆಗೆದು ನನಗೆ
ಹೆಸರು ತಂದುಕೊಡದಿದ್ದರೂ ಪರವಾಗಿಲ್ಲ, ಲವ್ವುಗಿವ್ವು ಅಂತ ಮಾಡಿ ಹೆಸರು
ಹಾಳುಮಾಡಬೇಡ ”

ಅಪ್ಪನಿಗೆ ತಕ್ಕ ಮಗಳಾದ ತೃಪ್ತಿ ಇತ್ತು …ಆದರೆ ಮದುವೆ ಎನ್ನುವ ಒಂದು ಘಟನೆ
,ಅಕ್ಷರಶಃ ಮಾನಸಿಕವಾಗಿ ಚಿತ್ರ ಹಿಂಸೆಕೊಟ್ಟು ಜೀವಂತವಿರುವಾಗಲೇ ನನ್ನನ್ನು
ಕೊಂದುಹಾಕಿತ್ತು ….. ದೇಹಕ್ಕೆ ಮಾತ್ರ ಜೀವಅಂಟಿಕೊಂಡಿದೆ ಅನ್ನಿಸುತ್ತಿತು …

ಗಂಡಸರ ಕತೆ ಕೇಳಿದ್ದೇನೆ ಅವರು ಕೊಂಚ ಹಂಗೆ…Possesive ,ಸಿಡಿಮಿಡಿ

ಆದರೆ ಆ ಮನೆಯ ಹೆಂಗಸರು …?
ತಾವುಗಳು ಹೆಣ್ಣು ಎಂದು ಹೇಗೆ ಕರೆದುಕೊಳ್ಳುತ್ತಾರೋ
ಮಧ್ಯ ರಾತ್ರಿ ಎದ್ದು ಪ್ರಿಯತಮ ಎಂದು ಕವನ ಬರೆಯುತ್ತಾಳೆ ,ಕಣ್ಣೆದುರಿಗೆ ಯಾರದೋ
bike ಹತ್ತಿ ಚಕ್ಕಂದ ಆಡುತ್ತ ಹೋದಳು,ಯಾವನ ಜೊತೆಯೂ ರಾತ್ರಿಯೆಲ್ಲ ಗಂಟೆಗಟ್ಟಲೆ
ಫೋನಿನಲ್ಲಿ ಮಾತನಾಡುತ್ತಾಳೆ ಅಂತೆಲ್ಲ ರೋಚಕ ಕತೆಗಳನ್ನು ಕಟ್ಟಿ ಹೇಳಿ ಹಂಚಿದ್ದರು
….. ಎಲ್ಲಿಂದ ಹೊಳೆದವೋ ?

ಅವನ ಒಬ್ಬ ಚಿಕ್ಕಪ್ಪ ನನ್ನ ಸಂಸ್ಕಾರ , ಪಾಸ್ಟ್ life ಬಗ್ಗೆ ಪ್ರಶ್ನೆ ಕೇಳಿದರೆ ,
ಇನ್ನೊಬ್ಬ ಚಿಕ್ಕಪ್ಪ ಮದುವೆಯ ಸಮಯದಲ್ಲಿ ಯಾಕೆ ಮನೆ ಖಾಲಿ ಮಾಡಿದರು ಎನ್ನುವ
ಪ್ರಶ್ನೆಯನ್ನು ಜನರನ್ನು ಗುಡ್ಡೆ ಹಾಕಿಕೊಂಡು ಕೇಳುತ್ತಿದ್ದ ..ಇನ್ನು ಚೋಟಮೋಟ
ಬಚ್ಚಾಗಳು ಸುಮ್ಮಸುಮ್ಮನೆ ನಿಮ್ಮ ಬಗ್ಗೆ ಹೀಗೆಲ್ಲ ಯಾಕೆ ಹೇಳುತ್ತಾರೆ,ಅವನು ಒಳ್ಳೆಯ
ಹುಡುಗ ಎನ್ನುತ್ತಿದ್ದರು …ನನ್ನನು ಇಂಚಿಂಚೆ ಬೆತ್ತಲೆ ಮಾಡಿ ಇಣುಕಲು
ಪ್ರಯತ್ನಿಸುತ್ತಿದ್ದರು …

ಏನು ಮಾಡಿದ್ದೆ ಎನ್ನುವುದೇ ನನಗೆ ಅರ್ಥವಾಗುತ್ತಿಲ್ಲ ….

7 ತಿಂಗಳುಗಳಿಂದ ಪ್ರಶ್ನೆಗಳಿಗೆ ಉತ್ತರ ಪಡೆಯಲು ಅವನಿಗಾಗಿ ಕಾದಿದ್ದೆ ,ಇಂದು
ಬಂದವನೇ ಎಷ್ಟು ದುಡ್ಡು ಬೇಕೋ ಬಾಯಿಬಿಟ್ಟು ಕೇಳು,ಬಿಸಾಕುತ್ತೇನೆ ಎಂದ …

ಯಾರೋ ಹೇಳುತ್ತಿದ್ದರು ಒಂದು ಗಂಟೆ ಪಕ್ಕ ಮಲಗಿಕೊಂಡ ಸೂಳೆಮೇಲೆಯೂ ಗಂಡಸಿಗೆ ಒಂದು
ಸಾಫ್ಟ್ ಕಾರ್ನರ್ ಉಳಿದುಬಿಡುತ್ತದಂತೆ …ತನ್ನ ವೀರ್ಯ ಅವಳಲ್ಲಿ ಚೆಲ್ಲಿತು ಅಂತ
11 ತಿಂಗಳು ಪಕ್ಕ ಮಲಗಿಸಿಕೊಂಡಿದ್ದ …ಎಷ್ಟು ಬೇಕು ಎನ್ನುತ್ತಿದ್ದಾನೆ

ಮಗುವಿನ ಕನಸು ಕಂಡಿದ್ದೆ …ಪಕ್ಕದಲ್ಲಿ ಮಲಗಿದ್ದ ಗಂಡನನ್ನೇ ಮಗುವೆಂದು
ತಬ್ಬಿದ್ದೆ ..ಹೊಟ್ಟೆಯಲ್ಲಿ ಹುಟ್ಟಬೇಕಿರುವುದು ಎರಡನೆಯದಷ್ಟೇ ಎಂದು
ಭಾವುಕಳಾಗುತ್ತಿದ್ದೆ… ಮಮ್ಮು ಕೊಡು ಎಂದು ಕೇಳುತ್ತಿದ್ದವನು ಅಪ್ಪಿತಪ್ಪಿ
divorce ಕೊಡು ಎಂದುಬಿಟ್ಟಿದ್ದರೆ ಒಂದು ವೇಳೆ ಸರಿ ಎಂದು ಕೊಟ್ಟುಬಿಡುತ್ತಿದ್ದೆನೇನೋ
..

ಕೈಹಿಡಿದುಕೊಂಡು ಕೇಳಿದೆ ಸಂಸಾರ ಮಾದಲಾಗದವನು ಯಾಕೆ ತಾಳಿ ಕಟ್ಟಿದೆ?
ಥಳಿಸಿ ಎರಡೆರಡು ಬಾರಿ ನೆಲಕ್ಕೆ ದಬ್ಬಿದ ..ಓಡಿ ಓಡಿ
ಪರಾರಿಯಾದ……………………..

ಅಲ್ಲೇ ಗಾರೆಕೆಲಸ ಮಾಡುತ್ತಿದ್ದವರು ಅಂದರು “ಎಂತಹ ರಾಕ್ಷಸ ! ಮೊದಲು ಪೋಲಿಸ್
ಕಂಪ್ಲೇಂಟ್ ಕೊಡಿ …ಇಂತವರನ್ನು ಸುಮ್ಮನೆ ಬಿಡಬಾರದು …ಹೆಣ್ಣುಮಕ್ಕಳ ಬಾಳು
ಹಾಳುಮಾಡಲು ಅಮ್ಮ ಅಕ್ಕನ ಮಾತು ಕೇಳುತ್ತಾರೆ ”

ಒಮ್ಮೆ ಕಂಪ್ಲೇಂಟ್ ಕೊಟ್ಟಿದಕ್ಕೆ ಹೀಗೆ ಓಡುತ್ತಿದ್ದಾನೆ…ಮತ್ತೆನ ? ಯಾಕೋ
ನೋವಾಗಲಿಲ್ಲ…ಅವಮಾನವೂ ಆಗಲಿಲ್ಲ…ಅಬ್ಯಾಸ ಆಗಿಹೋಗಿರಬೇಕು ಹಾಳುಜನ್ಮಕ್ಕೆ…

ಈ ಪುರುಷ ವ್ಯಾಗ್ರನಿಗೆ ಹೆಣ್ಣಿನ ಮಾನ ಮರ್ಯಾದೆಯನ್ನು ಹರಿದು ಮುಕ್ಕುವ ಹಸಿವಾಗಿರಬೇಕು …

ಅವನಕ್ಕನಿಗೆ ಫೋನೆಮಾಡಿ ತಿಳಿಸಿದೆ, ಈಗ ಏನುಮಾಡಬೇಕು ಎಂದು ಕೇಳಿದೆ….
ಅಂದೇ ಹೊಡಿ ಎಂದವಳು ಇಂದು ತಲೆಕೆಡಿಸಿಕೊಳ್ಳುತ್ತಾಳ ? ಸಂತೋಷಪಟ್ಟಿರಬೇಕು
…ಕಡೆಗೆ ನನಗಿಂತ ಮುಂಚೆಯೇ ಹೋಗಿ –ಫೋನ್ ಮಾಡಿ ಹೆದರಿಸುತ್ತಿದ್ದಾಳೆ– ಎಂದು
ನನ್ನ ಮೇಲೆ ಕಂಪ್ಲೇಂಟ್ ಕೊಟ್ಟಿದ್ದಾಳೆ

ಗಂಡ ಮೇಲ್ ಮಾಡಿದ್ದ… ನನ್ನ ಅಮ್ಮ ಅಕ್ಕನಿಗೆ ಫೋನ್ ಮಾಡಿ ಬೈದಿದ್ದೀಯ , ನನಗೆ
ಆಳವಾಗಿ ನೋವಾಗಿದೆ …

ನಗುವುದೊಂದೇ ಬಾಕಿ ನಾನು…

ರಕ್ತ ಮಾಂಸ ಹಂಚಿಉಂಡ ಹೆಂಡತಿಯ ಮೇಲೆ ಎಷ್ಟೆಲ್ಲಾ ಜನ ಅತ್ಯಾಚಾರ ಮಾಡಿದರು ನೋವೆ
ಆಗದವನು, ಇಂದು ಒಂದು ಫೋನ್ ಕಾಲಿನಿಂದ ನೋವುಪಡುತ್ತಿದ್ದಾನೆ,ಅದು ಆಳವಾಗಿ!!!!

7 ತಿಂಗಳಿಂದ ಮನಸು ಕೋಮಸ್ಟೇಜ್ ನಲ್ಲಿದೆ …ಏನು ನಡೆಯುತ್ತಿದೆ ಸುತ್ತ
ತಿಳಿಯುತ್ತಿಲ್ಲ….ಸತ್ತಂತೆ ಬದುಕು…ದೇಹಕೆ ಉಸಿರೇ ಸದಾ ಭಾರ….ಇಲ್ಲ ಆಧಾರ
..ಮಾನವೇ ನಮ್ಮ ಆಸ್ತಿಯಮ್ಮ… ಒಡವೆ ಬಂಗಾರ ..

ಅವರಿಗೂ ನೆಮ್ಮದಿಯಿಲ್ಲವಂತೆ …ವರದಿಗಳು ಬಂದು ಬೀಳುತ್ತಲೇರುತ್ತವೆ
–ಸಂಬ್ರಮ,ಬಾಡೂಟ,ಟೂರು,ಟ್ರಿಪ್ಪು ,ಹಬ್ಬ ಅವರು ಮಾತ್ರ ತಲೆ ಎತ್ತಿಕೊಂಡೆ
ಓಡಾಡುತ್ತಿದ್ದಾರೆ …

ಪುಣ್ಯಕೋಟಿ ಕೊಡಲಾಗಿದ್ದು ಅಷ್ಟೇ ಅಲ್ಲವೇ…ಖಂಡ,ರಕ್ತ,ಮಾಂಸ….ಮಾನ ಕೇಳಿದಿದ್ದರೆ
? ಸೀತೆಬೆಂಕಿಗೆ ಹಾರಿದ್ದು ಮಾನಬಿಟ್ಟುಕೊಡಲಾಗದೆ ಅಲ್ಲವೇ?

ಮೊನ್ನೆ ಮೊನ್ನೆ ತಾನೇ ಪೂಜಾರಿ ಹೇಳಿಕೊಟ್ಟಂತಿದೆ…”ಮಾವನ ಮಗನೆ ಮುತ್ತಿನ ಚಂಡೆ ”
ಬೋಳಿಮಗ ಪೂಜಾರಿ ಮಿಕ್ಕೆಲ್ಲ ಶ್ಲೋಕಗಳನ್ನು ಕನ್ನಡದಲ್ಲಿ ಹೇಳಿ
ಅರ್ಥಮಾಡಿಸಿರಬಾರದಿತ್ತ ಇವನಿಗೆ ” ಸಹಬಾಳ್ವೆ,ಸಹಧರ್ಮ,ಸಹಜೀವನ …ನಿನ್ನ ನಂಬಿಬಂದ
ಹೆಂಡತಿಯನ್ನು ಕಾಪಾಡುವುದು ,ಸಾಕುವುದು ,ಸುಖವಾಗಿಡುವುದು ನಿನ್ನ ಕರ್ತವ್ಯ “….

ಅಮ್ಮ ಅಂತು ಮಗನಿಗೆ ಹೆಣ್ಣೆಂದರೆ ಏನು ಎಂದು ಹೇಳಿಕೊಟ್ಟಿರಲಿಲ್ಲ …”ಹೆಂಡತಿ ಮೇಲೆ
ಅನುಮಾನ ಪಡಬೇಡ, ತಾಯಿಗೆ ಅವಮಾನ ಮಾಡಬೇಡ ” ಪಾಠ ಹೇಳಿರಲಿಲ್ಲ
ಹೆಣ್ಣೊಬ್ಬಳನ್ನು ಹೇಗೆ ನಡೆಸಿಕೊಳ್ಳಬೇಕೆಂದು ಅಕ್ಕನಾದರು ಹೇಳಿರಬೇಕಿತ್ತು ….
ಒಡಿ ಬಡಿ ಕಡಿ …!!!

ಅವನ ಅಮ್ಮನಿಗೂ, ಅಕ್ಕನಿಗೂ ಪ್ರೀತಿ ಗೌರವಕೊಡದೆ ನಡೆದುಕೊಳ್ಳುತಿದ್ದೀನಂತೆ ..
ಹೆಣ್ಣಾಗಿ ಮತ್ತೊಂದು ಹೆಣ್ಣಿನ ಮಾನಭಂಗ ಮಾಡಿದವರ ಮೇಲೆ ಪ್ರೀತಿ, ಗೌರವ ….!!!!

ಮದಲನೆ ರಾತ್ರಿ ಆದ bedsheetina ಕಲೆ ಇನ್ನು ಮಾಸಿಲ್ಲ, ಮದುವೆಗೆಂದು ಕೊಂಡುಕೊಂಡ
ಚಪ್ಪಲಿ ಮೊನ್ನೆ ಅಷ್ಟೇ ಹರಿದಿದೆ , ಹೊಸ ಸೀರೆಗಳಿಗೆ ಉಡಿಸಿಕೊಳ್ಳುವ ಭಾಗ್ಯವೇ
ಇನ್ನು ಒದಗಿ ಬಂದಿಲ್ಲ , t.v ಯಲ್ಲಿ– “ಕಿರುಕುಳ,ಮನನೊಂದ ಗೃಹಿಣಿ ಸಾವು” ಎಂದ
ನನ್ನ ಮದುವೆ ಫೋಟೋ ಸಮೇತ ಎಲ್ಲಿ ಬರುತ್ತೋ ಅನ್ನುವ ಭಯ….

ಸಾಮೂಹಿಕ ಅತ್ಯಾಚಾರ ಅಂದರೆ ಇದೇನಾ ?

ಯಾರ ಬಳಿ ನನ್ನ ಕತೆ ಹೇಳಿಕೊಂಡರು ನನ್ನನ್ನೇ ಬೈಯುತ್ತಾರೆ …. ಓದಿಕೊಂಡ ಹುಡುಗಿ
ನೀನು …ಎಷ್ಟೆಲ್ಲಾ ಆದಮೇಲು ಅವನೇ ಬೇಕು ಅಂತೀಯ!!!?, ನಿನಗೇನೂ ಹುಚ್ಚೋ
ಮರುಳೋ?

ಸಮಾಜ ಮರ್ಯಾದೆ ಏನೇನೋ ತಡವರಿಸುತ್ತೇನೆ …

ಮನೆಯಲ್ಲೂ ಅದೇ ಭಯ, ನಿನ್ನನು ಸಾಯಿಸಲು ಹೇಸದವರು ಅವರು , ಬೇಡ …

“ಮಗು ಇಲ್ಲಾ ಅಂದರೆ ಅತ್ತೆ ಮೂತಿ ತಿವಿಯಲ್ವೇನೆ , ಮೊದಲು ಮೊಗು ಆಗಿಬಿಡಲಿ” ಎಂದು
ಕಿವಿಹಿಂಡಿ ಬುದ್ದಿಹೇಳುತ್ತಿದ್ದ ಪಕ್ಕದ ಮನೆ ಅಜ್ಜಿಯೂ ಕೂಡ ಈಗ “ಅಯ್ಯೋ ಹೋದರೆ
ಹೋಗಲಿ ಬಿಡು,ಪ್ರಪಂಚಕ್ಕೆಲ್ಲ ಅವನೊಬ್ಬನೇ ಗಂಡಸ? …ಕಾಲ ಬದಲಾಯ್ತು ಆರಾಮಾಗಿ
ಇರು ” ಅಂತಾರೆ

ಮತ್ತೆ ನನ್ನನ್ನು ತಡೆಯುತ್ತಿರುವವರು ಯಾರು ???

ತನ್ನ ಗೋರಿ ಪಕ್ಕ ಮಲಗಿಸಿಕೊಂಡು ಇನ್ನು ಪುಣ್ಯಕೋಟಿ ಕತೆ, ಮನೆ ಮಾನ ಮರ್ಯಾದೆ ಪಾಠ
ಹೇಳಿಕೊಡುತ್ತಿರುವ ಅಪ್ಪಾನ?

ಗೋರಿಕಿತ್ತು ಅಪ್ಪನ್ನನ್ನು ಹೊರಗೆಳೆದು, ಹೇಳಬೇಕು , “ನಾನೇನೋ
ಪುಣ್ಯಕೊಟಿಯಾಗಬಲ್ಲೇ, ಆದರೆ ಅವನು ಆರ್ಬುದನಲ್ಲ …..ಅವನ ಬಳಗ ನನ್ನ ಮುಗಿಸದೆ
ಬಿಡುವುದಿಲ್ಲ… ಈ ಕಾಲಕ್ಕೆ ಪುನ್ಯಕೋಟಿಯೂ ಬದುಕಲಾಗುವುದಿಲ್ಲ ….”

ಭಯಾನಕ ಕನಸು

ಅಬ್ಬಾ ಎಂತ ಕನಸದು
ಭಾರಿ ಭಯಾನಕ !!!

ಕೆಟ್ಟ ಪ್ರಪಂಚದಿಂದ
ಮರೆಮಾಡಿ ಬೆಚ್ಚಗಿಟ್ಟು
ಕಣ್ಣಲ್ಲಿ ಕಣ್ಣಿಟ್ಟು
ಜತನದಿಂದ ಕಾಪಾಡಿ
ಪೊರೆಯುತಿದ್ದ ಅಪ್ಪ
ಸತ್ತು ಬಿದ್ದಿದ್ದಾನೆ …

ಮೂಗಿನ ಹೊಳ್ಲೆಯಲ್ಲಿ ಹತ್ತಿ
ಮೈಮೇಲೆಲ್ಲ ಸುಗಂಧ ರಾಜ
ಹಣೆ ಚಚ್ಚಿ ಅಳುವ ಅಮ್ಮ
ಗಂಟಲೊಳಗೆ ನುಗ್ಗಿ ಬಂದ
ಅಳು
ಸುತ್ತ ನೆರೆದ ಜನರ
ಕಣ್ಣು ಸುರಿಯಿತು

ಅಯ್ಯೋ ಎಂದರು
ಸಂತಾಪ ಮಿಡಿದರು
ಎಷ್ಟು ಬೇಡ ಬೇಡ ಅಂದರು
ಬಿಡದೆ ಮಣ್ಣಿಗೆ
ತಳ್ಳಿಯೇ ಬಿಟ್ಟರು

ಜನ ಜಂಗುಳಿ ಚದುರಿ
ಬಟಾ ಬಯಲಲ್ಲಿ ನಾ ಒಂಟಿ

ಮುಳುಗೋ ಸೂರ್ಯ
ತಬ್ಬ್ಬಿದ ತಬ್ಬಲಿತನ
ಅಭಧ್ರತೆ
ಆಸರೆಯಿಲ್ಲದೆ ಕಂಗಾಲು

ಅವ ಬಂದ
ಭುಜವೆತ್ತಿ ವರಗಿಸಿಕೊಂಡ
ಕಳಕೊಂಡ ನೋವಿಗೆ
ಔಷಧಿ ತಾನಾಗುವೆನೆಂದ
ಬೆಚ್ಹಗಿರಿಸುವುದಾಗಿ ಆಣೆ ಮಾಡಿ
ಕೈ ಹಿಡಿದು ಕರೆತಂದ

ಒಂದೆರಡೆ ದಿನ
ಉಂಡು ಮುಗಿಯಿತು
ಯಾವ ಲಾಭದ ಬಾಬ್ತೋ
ಎಲ್ಲರೆದುರು ನಿಲ್ಲಿಸಿ
ಬಟ್ಟೆ ಕಳಚ ತೊಡಗಿದ
ಇಲ್ಲಿ ನೋಡಿ ಇಲ್ಲಿ ನೋಡಿ
ಇದೆ ಗುರುತು , ಇದೆ ಅಂಗ

ಇಲ್ಲ ಇಲ್ಲ ನಾನು
ಸೂಳೆಯಲ್ಲ
ಕೋಣೆಯ ಮೂಲೆ ಮೂಲೆಗೆ
ಓಡಿ ಒರಗಿಕೊಂಡೆ
ಬಂದವರೆಲ್ಲರಿಗೂ ಚಪಲ
ಬಾಯಿ ಆಡಿಸಿದರು
ಸಾವಿಗಿಂತ ಭೀಕರ ಇದು
ಹೆಸರು ಮಾನಭಂಗ

ನಾವೆಲ್ಲಾ ನಿಂತು ನೋಡಬೇಕು
ನಮ್ಮೆದುರೇ ನಡೆಯಬೇಕು
ಹೆಣ್ಣು ಗಂಡೆಂಬ ಬೇದವಿಲ್ಲ
ಎಲ್ಲರು ಒಂದೇ
ಅತ್ಯಾಚಾರಕ್ಕೆ ಆಹುತಿ
ದೇಹ ಒಂದೇ ?
ಮನಸ ಮೇಲೆಲ್ಲಾ
ರಕ್ತದ ಕಲೆ

ದಿಗ್ಗನೆ ಎಚ್ಚೆತ್ತೆ
ಅವನೆಸರು ಗಂಡ
ಅವಳೆಸರು ಅತ್ತೆ
ಮತ್ತವಳು ನಾದಿನಿ
ನೆರೆದಿದ್ದವರು ನೆಂಟರು

Compensation

ನಾಲ್ಕು ಗೋಡೆಯ ಮರೆಯಲ್ಲಿ
ನಿಂತು ಕೇಳಿದ್ದಿದ್ದರೆ
ಕೊಟ್ಟಿಬಿಟ್ಟಿರುತ್ತಿದ್ದೆ
ಸಣ್ಣದೊಂದು ಡಿವೋರ್ಸ್ ಏನು
ಪೂರ್ತಿ ಪ್ರಾಣ ಅವನಿಗೆ …

ಸಿಗಲಿಲ್ಲ ಎಂದು ಅಂಗಾಲಾಚಿದ್ದು ನಾ
ಕೇವಲ ಎರಡೇ ಎರಡು ಹನಿ ಪ್ರೀತಿ ..
ನೀಡಲಿಲ್ಲ ಎಂದು ದಾವೆ ಹೂಡುತ್ತಿರುವುದು ಅವ
ಅದೇ ಸುಡುಗಾಡು ಪ್ರೀತಿ ..
ಕೂತು ಒಮ್ಮೆಯೂ ಯೋಚಿಸಲ್ಲಿಲ್ಲ
ಕಂಡರೂ ಅರ್ಥಮಾಡಿಕೊಳ್ಳಲಿಲ್ಲ
ಕೇಳಿಯೂ ತಿಳಿದುಕೊಳ್ಳಲಿಲ್ಲ
ಪ್ರೀತಿ ತಡೆದ ಭೀತಿ….
ಆಶ್ಚರ್ಯ ನನಗೆ ಎಂದೂ ಅರಿವಿಗೆ
ಬಾರಲಿಲ್ಲವ ಅವನಿಗೆ
ತುಂಬಿದೆನ್ನೆದೆಯ ಈಚೆ
ಸ್ಪುರಿಸುತ್ತಿದ್ದ ಹಾಳು ಪ್ರೀತಿ !!!

ನಾನಂತು ಮುಗ್ದೆ ನಂಬಿ
ಇಳಿದಿದ್ದೆ
ಮುಳುಗಿ ತೇಲಿದ್ದೆ, ತೇಲಿ ಮುಳುಗಿದ್ದೆ
ನನ್ನ ಕನಸು , ಕನವರಿಕೆ
ಅವನ ಮಾತು , ಮೌನ,
ಸಿಟ್ಟು , ಸೆಡವು
ವೀರ್ಯ, ಸ್ಖಲನ,
ಒರಟು ಗಡ್ಡ,ಬಿರಿದ ತುಟಿ
ಮತ್ತೇನು ಕಾರಣ-ನೆಪ
ಬೇಕೇ ಇರಲಿಲ್ಲ ನನಗೆ ಸಾಕಾಗಿತ್ತಷ್ಟೇ
ಅವನು ಗಂಡಸು ಮತ್ತು ನನ್ನ ಗಂಡ!!!!
ಒಲ್ಲದ ಗಂಡನಿಗೆ ಸಾವಿರದ ಮೇಲಿದ್ದವು
ನೀವಾರಿಸಲಾಗದ ಮೊಸರಲ್ಲಿನ ಕಲ್ಲುಗಳು
ಶಿಲುಬೆಗೇರಿಸಿ ಮೊಳೆ ಜಡಿಯುತ್ತಿದ್ದ
ಬೇಯದ ಅಡಿಗೆ , ಮುಗಿಯದ ಸೇವೆ,
ಮಾಡದ ಮನೆಗೆಲಸ, ಬರೆದುಬಿಟ್ಟ ಕವನ
ಮೊಬೈಲು ಬಿಲ್ಲು ,ಕ್ರೆಡಿಟ್ಟು ಕಾರ್ಡು ,
ಅಕೌಂಟಿನ ದುಡ್ಡು ,ಪತ್ರದ ಮೇಲಿನ ಆಸ್ತಿ,
ಅಧಿಕಾರದ ಹೆಸರು, ಹಕ್ಕಿನ ಜರೂರತ್ತು

ಮೂವತ್ತು ದಿನದ ಮುಂದೆ
ತಪ್ಪದೆ ನರೆಯುವ ಮೈಯಿನ ರಜೆಯಷ್ಟೇ
ಕರಾರುವಕ್ಕು ಇಪ್ಪತ್ತು ದಿನಕ್ಕೆ
ಅವರು ನೆರೆದು ಸೇರಿಸುತಿದ್ದ ಪಂಚಾಯ್ತಿ
ಪ್ರತಿ ಚಕ್ರದಲ್ಲೂ ರಕ್ತ ಸ್ರಾವವಾದರು
ಏನೊಂದು ಆಗದೆ ಬದುಕುವ ಹೆಣ್ಣಂತೆ
ಇನ್ನೂ ಬದುಕುಳಿದಿರುವೆ
ಹಿಂದಿಂದೆ ಆದ ಅತ್ಯಾಚಾರ, ಹೃದಯಾಘಾತಗಳ
ತರುವಾಯವೂ

ಮೊದಲ ಹೊಡೆತಕ್ಕೆ ಹೈವೆಯಲ್ಲಿ
ನೆಲಕ್ಕೆ ಬಿದ್ದ ನಾಯಿಯ ಮೇಲೆ
ಮುಲಾಜಿಲ್ಲದೆ , ಕಣ್ಣಿಲ್ಲದೆ, ಕರುಣೆಯಿಲ್ಲದೆ
ಹರಿದಾಡಿದ ಕ್ರೂರ ವಾಹನಗಳ ನಾಲಿಗೆಗಳು
ಈಚೆ ಒಸರುತ್ತಿದ್ದದ್ದು ಕೇವಲ ಕೆಂಪು ರಕ್ತ , ಹಸಿಮಾಂಸ
ಕೊಳೆತ ವಾಸನೆಯಷ್ಟೇ ಅಲ್ಲಾ
ಅದೆಷ್ಟೋ ವರ್ಷ ಬಚಿಟ್ಟುಕೊಂಡಿದ್ದ ಮಾನ,
ಮರ್ಯಾದೆ,ನಗ್ನವಾದ ನಾಚಿಕೆ ….

ದೇಹದ ನಿಷ್ಠೆ ಸಾಬೀತಾಗಿತ್ತು
ಹಾಸಿಗೆ ಮೇಲೆ ಅವನಿಂದ ಹರಿದು
ಚೆಲ್ಲಿದ ರಕ್ತದಿಂದ
ಅದರ ನಂತರವೂ ಪರೀಕ್ಷಿಸುತ್ತಲೇ
ಇದ್ದನಲ್ಲ ನನ್ನ ‘ನಲ್ಲ’
ಅವನಿಗೆ ಕಾಣಿಸಬಲ್ಲದು ಹೇಗೆತಾನೆ
ಮನಸಿನ ನಿಷ್ಠೆ
ಇಷ್ಟಾದ ಮೇಲೂ ನೆನಪಿಗೆ ಬಾರದ ಹಿಂದೆ ಬಿದ್ದ ಹಳೆಯ ಗೆಳೆಯ ..

ಸಂಸ್ಕಾರ ಕೂಡ ಮಾಡಿಮುಗಿಸದೆ
ಬದುಕಿದ್ದಾಗಲೇ ಸಾಯಿಸಿ
ಬಿಸಾಡಿ ಹೊರಟು ಹೋದನಲ್ಲ
ದ್ವೇಷವಾದರು ಕಾಡಬೇಕಿತ್ತು
ಖಾನೂನು ಸುಲಭ , ಶಿಕ್ಷೆ ನಿಖರ
ಅಸಹಾಯಕತೆ ಅಲ್ಲವೇ ಅಲ್ಲ
ಕೂಡಿಬಾರದ ಶಕ್ತಿಯ ಹೆಸರು
ಅದೇ ಕಿತ್ತುಹೋದ ಅವನ ಮೇಲಿನ ಕೆಟ್ಟ ಪ್ರೀತಿ!!!!

ಎಲ್ಲಾ ಕಳಕೊಂಡ ನಾನು
compensation ಅಂತಲಾದರೂ
ಕೇಳಿ ಪಡೆಯಬೇಕು
ಚೂರು ಕಾಡದ ಪಾಪಪ್ರಜ್ಞೆ , ಆತ್ಮಸಾಕ್ಷಿಯ
ಜೊತೆ ತಾನೊಬ್ಬ ಮಾತ್ರ ಇನ್ನೂ
ಹಾಯಾಗಿ ಬದುಕಬೇಕು ಎನ್ನುವ ಸ್ವಾರ್ಥದಲ್ಲಿ
ದಯಪಾಲಿಸು
ಕಾಲಾಂಶ ಮಾತ್ರ
ನಷ್ಟವಾದ ಜೀವನ ಪ್ರೀತಿಯನ್ನ
ತುಂಬಿಕೊಳ್ಳುತ್ತೇನೆ..
ಇನ್ನೊಂದು ಬಾರಿ
ಮನುಷ್ಯರನ್ನು ನಂಬುತ್ತೇನೆ

ನಾನು ಹೆಣ್ಣಲ್ಲವೇ ?

ಅವ ಅಂದ
ಹೆಣ್ಣೇ ಅಲ್ಲ ನೀನು
ನಿಜ,
ಹೆಣ್ಣಾಗಿರಲಿಲ್ಲ ಇನ್ನು
ಅವನ ಸ್ಪರ್ಶ ಮಾತ್ರಕ್ಕೆ ಕಾದಿದ್ದೆ —
ಅಹಲ್ಯೇ ಅಥವಾ ಕಲ್ಲು

ಕಲ್ಲಿಗದ್ಯಾವ ಲಿಂಗ ?

ಮರೆತು ಹೋಗಿತ್ತು ಎಂದೋ
ಹಾಡಬೇಕಿದ್ದ ಹಾಡು
ಅರೆ ! ಮೂಡೆ ಇರಲಿಲ್ಲವಲ್ಲ ಅಸಲಿಗೆ
ಹೆಣ್ತನವನ್ನೆಲ್ಲ
ಒಂದೊಂದಾಗಿ ಕಳಚಿ
ಮೂಟೆಕಟ್ಟಿ ಅಟ್ಟಕೆಸೆದ ನೆನಪು…

ಕಾಲು ಗೆಜ್ಜೆ ಕುಣಿಸಲಿಲ್ಲ
ಕೈಯ ಬಳೆ ಕಿಣಿಕಿಣಿಸಲಿಲ್ಲ..
ಮೂಗು ನತ್ತು ನಗಲಿಲ್ಲ
ನೀಲ ಜಡೆಯನು ನಿದ್ದೆಕೆಡಿಸಲು ಬಿಡಲಿಲ್ಲ
ಮುಂಗುರುಳನು ತೀಡಿ
ಗಾಳಿಗೆ ಹಾರಿಸಲಿಲ್ಲ

ತುಟಿಯಂಚಿನ ನಗೆಯಲ್ಲೋ
ಕಣ್ಣ ಮಿಂಚು ,ಕೆನ್ನೆ ಕೆಂಪು
ನಡಿಗೆ ಲಯದ ಲಾಸ್ಯದಲ್ಲೋ
ಯಾರನ್ನೂ ಸಂಹಾರ ಮಾಡುವ
ಹುನ್ನಾರವನ್ನಂತು
ಮಾಡಲೇ ಇಲ್ಲ …

ಕಾದಿದ್ದರು ಅಪ್ಪ
ಆಚೆ ;ಬೇಲಿ ನೆಟ್ಟು
ಗಡಿ-ಹಾರದಂಗೆ..
ಗಡಿಯಾರ-ದಂಗೆ
ಸುತ್ತ ಸರ್ಪಗಾವಲು
ಮನೆ,ಮಾನ,ಮರ್ಯಾದೆ ಅಂದರೆ?

ಅಮ್ಮ ಪಿಸುಗುಟ್ಟಳು
ಹೆಣ್ಣಾಗುವ ‘ಗೋಳು’
ಮುಂದೆ ಇದ್ದೇ ಇದೆ
ಮೊದಲು ವ್ಯಕ್ತಿಯಾಗು ,
ನಾಲ್ಕು ಕಾಸಿಗೆ -ಮೂರು ಹೊತ್ತಿನ ಊಟಕ್ಕೆ
ಶಕ್ತಿಯಾಗು .

ತಲೆತುಂಬಾ ಅದೇನೇನೋ
ಹುಚ್ಚು ಆವೇಶ
ಒಳಗೊಳಗೇ
ಸುಪ್ತ ಆಮಿಷ
ಅಭಾವ ವೈರಗ್ಯವೋ ..
ಆದರ್ಶ ,ಪಾವಿತ್ರ್ಯವೋ ..

ಅಂತೂ ಹೆಣ್ಣಾಗಲೇ ಇಲ್ಲ ನಾನು

ಅಲ್ಲ ಬಿಡಲಿಲ್ಲ ಅವರು
ನನ್ನ ಆಜನ್ಮ ವೈರಿಗಳು
ರಸ್ತೆ ಮೇಲೆ ಡಿಕ್ಕಿ ಹೊಡೆದೋ
ಬಸ್ನಲ್ಲಿ ಕೈತಾಗಿಸೋ
ವೈರತ್ವ ಕಟ್ಟಿಕೊಂಡರು
ಅಥವಾ ನಾನೇ ಹಾಗಂದುಕೊಂಡು ಬಿಟ್ಟೆ

ಮಾರ್ಕ್ಸ್ ಕಾರ್ಡುಗಳಲ್ಲಿ
ಎಥೇಚ್ಛ, ಬೀಳುತಿದ್ದ ಮಾರ್ಕ್ಸು
ಕಂಪ್ಯೂಟರಿನ ಕೀಲಿ ಕುಟ್ಟುತ್ತಿದ್ದ ಕೈ
ಕೆಲಸದ offeru
ಯಾವುದರಲ್ಲೂ ಸುಳಿವಿರಲಿಲ್ಲ
ಹೆಣ್ತನದ; ಸೋಂಕಿರಲಿಲ್ಲ..

ಹಾಡು-ಹಸೆ ,ಅಡಿಗೆ ಒಗ್ಗರಣೆ
ಅಂಗಳಕ್ಕೊಂದು ಚೆಂದದ ರಂಗವಲ್ಲೇ
ಒಂದು ಕಡೆ
ಸಮುದ್ರದಾಚೆಗಿನ ಕನಸು ,
ಮುತ್ತಿನ ಬಯಕೆ
ಮತ್ತೊಂದು ಕಡೆ

ಸಮಯವಾದರೂ ಯಾರಿಗಿತ್ತು , race ಅದು ?

ಕಟ್ಟಿದ ರೆಕ್ಕೆ ಸಡಿಲಿಸಿದಾಗಲು
ಹಾರಲಾರದ ಆಲಸ್ಯ
ಬಿಡುಗಡೆ ನಂತರವೂ
ಒದಮೂಡದ ಬಯಕೆ
ಕಲ್ಲಿನ ಸ್ಥಿತಿ ಇದೇ ಇರಬೇಕು
ಹೆಣ್ಣು ಅಲ್ಲದ ,ಗಂಡು ಅಲ್ಲದ …

ಅರೆ , ಬರುವನಂತೆ ಬಿಡು …ಕ್ಷಮಿಸು ಕರೆತರಿಸುತ್ತಾರಂತೆ !!!

ಅಗೋಚರ ದೇಶದ
ರಾಜಕುಮಾರ !
ಅವನ ಹುಚ್ಚು ಕುದುರೆ
ಟಕ್ಕು ಟಕ್ಕಿಗೆ
ಸಾವಿರ hertz ಗಳಿಂದಾಚೆಗೆ ಜಿಗಿವ
ನನ್ನೆದೆ ನಗಾರಿ ಢವ ಢವಾ

ಹೆಸರೇನೋ ಸಂಪ್ರದಾಯವಂತೆ

ಅಷ್ಟಕ್ಕೂ ಕಾಯುವಿಕೆ
ಅಂದರೆ ಸುಮ್ಮನೇನ ?
ಕಾಯ್ದಿರಿಸಿದ ಸಂಯಮ
ಒರೆಗಚ್ಚಿದ ತಾಳ್ಮೆ
ಬಚ್ಚಿಟ್ಟ ಕನಸು,ಬರೆಯದ ಕವನ
ಎಲ್ಲದಕ್ಕೂ ಸುಖಾಸುಮ್ಮನೆ
ಬೇನಾಮಿ ವಾರಸುದಾರ
ಇವನೇನ ?

ಅವನ ತಣ್ಣನೆ ಸ್ಪರ್ಶಕ್ಕೆ
ಬಿಸಿಯೇರಿ ಹಣ್ಣಾಗುವ ತವಕ
ಕಳ್ಳ ಕಣ್ಣ ನೋಟಕ್ಕೆ
ಕೊಲೆಯಾಗುವ ಭಯ
ಮೆಲು ದನಿಯ ಕೂಗಿಗೆ
ಪಿಸುನುಡಿವ ಮಾತಿಗೆ

ನಾಚಿ ‘ನೀರೇ’ ಆಗಿ
ಹರಿದು ಬಿಡಬಲ್ಲೆ
ಅವನೆದೆಗೆ ನೇರ
ಶಾಪ ವಿಮೋಚನೆ
ಹೆಣ್ಣಾಗಿ ಅರಳುವ ಸಂಭ್ರಮ
ಯಾರಿಗೆ ತಾನೇ ಬೇಡ ?

ಕ್ರೂರಿ ಅವನು …ಅದೇ ಜನಾಂಗ
ಆ ಜನ್ಮ ವೈರಿ
ಪುರುಷ ಷಂಡತನ
ಸೀತೆಯ ಮೇಲು ಅನುಮಾನ
ಕ್ಷಮಿಸು ರಾಮ
ಹಾರಿದ್ದು ಬೆಂಕಿಗೆ ಅಹಲ್ಯೆ ಅಲ್ಲವಲ್ಲ

ಕಡೆಗೂ ಹೆಣ್ಣಾಗಳಿಲ್ಲ– ಹೆಮ್ಮಾರಿಯಾದೆ ..

ನುಡಿಯುತ್ತಿದ್ದಾನೆ
ಹೆಣ್ಣೇ ಅಲ್ಲವಂತೆ ನಾನು –ಮೂರ್ಖ !
ಶಾಪ -ಸಂಯಮ -ಅಹಲ್ಯೆ
ಕಾಡು-ವನವಾಸ-ಸೀತೆ
ಕಡೆಗೆ ಕೊಚ್ಚಿ ಕೊಲ್ಲೋ ಕಾಳಿ
ಎಲ್ಲರಲ್ಲೂ ನಾನಿಲ್ಲವೇ ?

ನಾನು ಹೆಣ್ಣಲ್ಲವೇ ?

ಸೂತಕಕೊ ಒಂದು ಸಾವಿರಲಿ

 

 

ಹೈವೇಯಲ್ಲಿ ಕಾರು ಎಗ್ಗಿಲ್ಲದೆ ವೇಗವಾಗಿ ಸಾಗುತ್ತಿತ್ತು .ಕಡುಕತ್ತಲು.ಗಾಜಿನಿಂದಾಚೆ ಧೋ ಸುರಿವ ವಸಂತದ ಮೊದಲ ಮಳೆ .ಇಂತಹ ಲಾಂಗ್ ಡ್ರೈವ್ ಗಳನ್ನು ಅದೆಷ್ಟು desparate ಆಗಿ  ಬಯಸುತ್ತೇನೆ .ನೀರವ ರಮ್ಯ ರಾತ್ರಿಗಳಲ್ಲಿ  ಹಾಡುಗಳ ಮಾಧುರ್ಯ ಸೇರಿ ಸ್ವರ್ಗಸೃಷ್ಟಿಯಾಗಬಹುದು !
ಮತ್ತದೇ ಧ್ಯಾನ ….ಜೊತೆ ಅವನಿದ್ದಿದ್ದರೆ …ಮನದ ಇಳಿಜಾರಿಗೆ ಕಾಲುಜಾರುವ ಹಳೆ ನೆನಪು…!
ಸುಡುಗಾಡು !ನನ್ನ ಭ್ರಮೆಯಷ್ಟೇ .ಜೊತೆ ಅವನಿದ್ದಿದ್ದಿದ್ದರು ಹಾಗೆಲ್ಲ ಏನು ಆಗುತ್ತಿರಲಿಲ್ಲ .ಕಾರಣವೆ ಇಲ್ಲದಿದ್ದರೂ ಬೈಯುತ್ತ ಸಿಡಿಸಿಡಿದು ಹೋಗುತ್ತಿರುತ್ತಿದ್ದ  .ಮಳೆಯಲ್ಲೂ ಬೆವರುತ್ತ ನಾನು ಮುದುಡಿ, ಮುರುಟಿಕೊಂಡು ಕೂತಿರುತ್ತಿದ್ದೆ .
ದೇವರೇ ಕನಸಿಗೂ ವಾಸ್ತವಕೂ ಯಾಕಿಷ್ಟು ಅಂತರ .magical  moments ನಮ್ಮಿಬ್ಬರ ಮಧ್ಯೆ ಯಾಕೆ ಸೃಷ್ಟಿಯಾಗುತ್ತಿರಲಿಲ್ಲ   .ಅವೆಲ್ಲ ಪುಸ್ತಕದ ಬದನೆಕಾಯಿಗಳಾ    .ಅಥವ ಆ ಪರಿಯ ಮಾದಕತೆ, ಬೆಡಗು, ಬಿನ್ನಾಣ ನನ್ನ ಹೆಣ್ತನಕ್ಕೆ ಇರಲಿಲ್ಲವ   ?

ಈಗ ಇದು ಇನ್ಯಾರದ್ದೋ ಕಾರು .ಜೊತೆಗೊಂದಿಷ್ಟು ಸಹಪ್ರಯಾಣಿಕರು .ಡ್ರೈವ್ ಮಾಡುತ್ತಿದ್ದವರನ್ನು ಬಿಟ್ಟು ಮತ್ತೆಲ್ಲ ಹೆಂಗಸರು, ಅವರವರ ಲೋಕದಲ್ಲಿ ಅವರವರು ತಲ್ಲೀನ .ಸಧ್ಯ ಯಾವ ಹಕ್ಕು, ಅಧಿಕಾರ, ಕಾಳಜಿಯ ನೆಪಕ್ಕು ಬಂಧಿಸದೆ  ನನ್ನ ಪಾಡಿಗೆ ನನ್ನ ಬಿಟ್ಟುಬಿಟ್ಟಿದ್ದರು.ದಿವ್ಯ ಏಕಾಂತ ದೊರಕಿಹೋಗಿತ್ತು
ಪೂರ್ತಿವಾರದ ದುಃಖ, ಹತಾಶೆ, ನೋವು  ಸ್ಪೋಟಗೊಳ್ಳಲು ಅವಕಾಶಕ್ಕೆ ಕಾದುಕುಳಿತಂತೆ ಎಲ್ಲದರಿಂದ withdraw ಆಗಿ,  ಒದ್ದೆ ಮುದ್ದೆಯಾಗಿತ್ತು ನನ್ನ ಮನ..
ಕಿವಿಯಲ್ಲಿ  ಜಿ .ಎಸ.ಎಸ ರವರ ಭಾವುಕತೆಯನ್ನು ತನ್ಮಯರಾಗಿಸಿಕೊಂಡು ಅವರ ಪಾಡಿಗೆ ಅವರು ಆಲಾಪಿಸುತ್ತಿದ್ದರು  ಅಶ್ವಥ್.ನನ್ನ ಮನದ ಮಾತನ್ನೇ ಹಾಡುಮಾಡಿದಂತಿತ್ತು  ಸಾಲುಗಳು  …..

“ಕಾಣದ ಕಡಲಿಗೆ ಹಂಬಲಿಸಿದೆ ಮನ…”

ಕಂಗಳು ತೇವಗೊಂಡವು , ಗಂಟಲುಬ್ಬಿ  ಬಂತು ….ಪುಣ್ಯಕ್ಕೆ ಅವರ್ಯಾರಿಗೂ ನನ್ನ ಮುಖ ಕಾಣುತ್ತಿರಲಿಲ್ಲ .

“ಜಟಿಲ ಕಾನನದ ಕುಟಿಲ ಪಥಗಳಲಿ ಹರಿವ ತೊರೆಯು ನಾನು…
ಎಂದಿಗಾದರೂ? ಎಂದಿಗಾದರೂ…
ಕಾಣದ ಕಡಲನು ಸೇರಬಲ್ಲೆನೇನು ?
ಸೇರಬಹುದೇ ನಾನು ಕಡಲಿನ ನೀರಿನೊಳು… ಕರಗಬಹುದೇ ನಾನು …?”

ನನ್ನ  ಕಡಲೆಂದು ಅವನನ್ನು ಕಂಡಿದ್ದೆ ,ಸೇರಿದ್ದೇ , ಕರಗಿದ್ದೆ …ಹಾಗೆ ಮುಗಿದೂ ಹೋಗಿದ್ದೆ …ಅರವಳಿಕೆ ಕಳೆದು ಅರಿವಿಗೆ ಬಂದಾಗ ತಿಳಿದಿತ್ತು  ಕಡಲಲ್ಲ ಅವನು  , ಕೇವಲ ಯಾವುದೋ ಪ್ರವಾಹ …..

“ಯಾವುದಿ ಪ್ರವಾಹವೂ ….?
ಮನೆಮನಗಳ ಕೊಚ್ಚಿ ಕೊರೆದು ಬುಸುಗುಡುತ್ತ ಧಾವಿಸುತ್ತಿದೆ ಯಾವುದೀ ಪ್ರವಾಹವೂ…ಎದೆ ಎದೆಗಳ  ನಡುವೆ ಇರುವ ಸೇತುವೆಗಳ ಮುರಿದಿದೆ…ಭಯ, ಸಂಶಯ, ತಲ್ಲಣಗಳ ಕಂದರಗಳ ತೆರೆದಿದೆ…”

ಪ್ರವಾಹದ ಹೆಸರು ನನಗೆ ತಿಳಿದಿತ್ತು ….ಸ್ವಾರ್ಥ ….ಮತ್ತೊಂದು ಹೆಸರು ದುಡ್ಡು, ಅಹಂಕಾರ …

ಮಳೆಗೆ ಸಾತ್ ಕೊಡುವಂತೆ ಕೋಡಿಬಿದ್ದವು ಕಣ್ಣಾಲಿಗಳು  …ಒಳಗೂ, ಹೊರಗೂ, ಆಚೆಯೂ ಎಲ್ಲೆಲ್ಲೂ  ಕೇವಲ ಭೋರ್ಗರೆತ  .

ಇನ್ನೆಂದು ಸರಿಹೋಗಲಾರದಷ್ಟು ಛಿದ್ರ ಛಿದ್ರ ಮಾಡಿ ಎಸೆದಿದ್ದ  ನನ್ನ .
ವಂಚನೆಗೊಳಗಾದ ನೋವಿನ ಜೊತೆ ಅಸಹಾಯಕತೆಯ , ಅವಮಾನದ ಧಗೆ .
ಜೊತೆ ಕಳೆದದ್ದು ಕೇವಲ 11  ತಿಂಗಳು .ಅದರ ಮೇಲೇ ಉರುಳಿದ್ದು  ಶಬರಿಯಾ ಒಂದು ಭರಪೂರ ವರ್ಷ .
ಸಾಮಾಜಿಕ ಕಟ್ಟುಪಾಡುಗಳಿಗೆ ಒಳಪಡದ್ದಿದ್ದರೆ ಸುಕ್ಕುಬಿಡಿಸಿಕೊಳ್ಳುವುದು  ಸುಲಭವೇನೋ.
ದೇಹ, ಮನಸು, ಕನಸುಗಳ ಜೊತೆ ಭವಿಷ್ಯ, ಮನೆ ಮರ್ಯಾದೆ, ಮಾನ, ದುಡ್ಡು,ಏನೇನೋ ಹತ್ತುಹಲವು  ನೇಯ್ದುಕೊಂಡುಬಿಟ್ಟಿರುತ್ತದೆ  ಮದುವೆಯ ಧಾರದಲ್ಲಿ .ನಷ್ಟ ಪರಿಹಾರ ಅಸಾಧ್ಯ .

ಹತಾಶೆ ಸಿಟ್ಟಾಗಿ ಹೆಡೆ ಎತ್ತಿ ನಿಲ್ಲುತ್ತದೆ.ಈ ಓಡಿಹೋಗೋ, ತಲೆಮರಿಸಿಕೊಂಡು ಬಚ್ಚಿಟ್ಟುಕೊಳ್ಳೋ , ನನ್ನ ಕೈಲಾಗಲ್ಲ ಅನ್ನೋ, ದೊಡ್ಡವರು ಬೆಂಬಲಿಸುತ್ತಿಲ್ಲ ಅಂತ ಬೇಡವೆನ್ನೋ ಹೇಡಿಗಳನ್ನು ನೆನೆದರೆ ಮೈಯೆಲ್ಲಾ ಹೇಸಿಗೆ !!!!
 ಗಂಡಸುತನವನ್ನ ಬಂಡವಾಳ  ಮಾಡಿಕೊಂಡು, ಹೆಣ್ಣಿನ ಮಾನವನ್ನು ಅಡವಿಟ್ಟುಕೊಳ್ಳೋ ತಲೆಹಿಡುಕರು ಇವರು .ಮದುವೆಯೆಂದರೆ ತನ್ನ ಇಷ್ಟಾರ್ಥ ಸಿದ್ದಾರ್ಥ ತೆವಲು .ಹಿಟ್ಲರ್ ನ ಸರ್ವಾಧಿಕಾರಿ ಧೋರಣೆ !!!!

ನಾನ್ಯಾಕೆ ಎದೆಗುಂದಿದೆ? ಹಳ್ಳಿಗಾಡಿನ ಹೆಣ್ಣುಮಕ್ಕಳು ಅದೆಷ್ಟು ಧೈರ್ಯವಂತರಾಗಿದ್ದಾರೆ.ಅಬ್ಬಾ  ಆಕೆ  -ಗಂಡ ಮನೆ ಮಕ್ಕಳು ಮೊಮ್ಮಕ್ಕಳು ತೋಟ ಮನೆ  ಅಂತ ಮೂರುಹೊತ್ತು ಬಡಿದಾಡೋ ಅಪ್ಪಟ ಗಟ್ಟಿ  ಸಂಪ್ರದಾಯವಾದಿ ಹೆಂಗಸು ಅದೆಂತ ಕೆಚ್ಚಿನಿಂದ ಕಡ್ಡಿ ಮುರಿದಂಗೆ ಹೇಳಿದರು .
ನಿನಗೆ ಬುದ್ದಿ ಇಲ್ಲ ,ಇನ್ನೂ ಕಾಯುತ್ತಾ ಕೂರೋದ್ರಲ್ಲಿ ಯಾವುದೇ ಅರ್ಥವಿಲ್ಲ .ಏನೋ ಒಂದು ನಿರ್ಧಾರ ತೆಗೆದುಕೊಳ್ಳಬೇಕು ನೀನು  .ನಾನು ಮೂವರು ಸೊಸೆಯಂದಿರನ್ನು ಬಾಳಿಸುತ್ತಿದ್ದೇನೆ, ಆದರೆ ಹೀಗಲ್ಲ ….. ನಾವು ಒಂದು ಕಾಲಕ್ಕೆ ಸೊಸೆಯಾಗಿ ಬಂದವರೆಂದು ಮರೆಯಬಾರದು… ಇನ್ಯಾರದ್ದು ಮನೆಯ ಹೆಣ್ಣುಮಕ್ಕಳನ್ನು ತಂದು ಇಟ್ಟಾಡೋದಲ್ಲ   ದೌಲತ್ತು .ಕಡೆಬಾರಿಗೆ ಏನು ಹೇಳ್ತಾನೆ  ಅಂತ ಕೇಳಿಬಿಡು….ಬಾಳೋಣ ಅಂದರೆ ಸರಿ .ಬೇಡ ಎಂದರೆ ತಾಳಿ ಕಿತ್ತಾಕಿ ಮುಖಕ್ಕೆಸೆದು  ಬಾ… ಯಾವ ಗಂಡನನ್ನು  ನಂಬಿಕೊಂಡು ನಾವು ಹೆಣ್ಣು ಮಕ್ಕಳು ಹುಟ್ಟಿಲ್ಲ , ಅವರು ಹೊರಟುಹೋದರು ಅಂತ ಸಾಯೋದು ಇಲ್ಲ ….. ಬೇಡ ಎಂದವನ ಹತ್ತಿರ  ಹೋಗಿ ಪಡುವ  ಸುಖ ಅಷ್ಟರಲ್ಲೇ ಇದೆ .

ಯಾವ ಕಡಲಾದರೇನು  ಹರಿಯೋದಷ್ಟೇ ಮುಖ್ಯ ….. .ಆಡೋರ್ಯಾರು ಅನುಭವಿಸಿರಲಾರರು .ಇಲ್ಲಿ ಬದುಕು ಮುಖ್ಯ

ನಿಜ ನಾನು ಹೆದರಿಕೊಂಡಷ್ಟು   ಕ್ರೂರವಾಗಿರಲಿಲ್ಲ ಪ್ರಪಂಚ   .
ಗಂಡಂದಿರ ಹುಚ್ಚಾಟ , ಅತ್ತೆಯಂದಿರ ಕಿರುಕುಳಗಳ ನಡುವೆ ಬದುಕಿ ಸಾದ್ವಿ  ಎನಿಸಿಕೊಂಡವರು ಕೇಳುತ್ತಿದ್ದರು.ಎಷ್ಟು ನಿನ್ನ ಸಂಬಳ…
ಹುಬ್ಬು ಗಂಟಿಕ್ಕುತ್ತಿತ್ತು…
ಅದೆಲ್ಲಿ ಅಡಗಿರುತ್ತಿತ್ತೋ  ತಣ್ಣನೆಯ ಕ್ರೌರ್ಯಕ್ಕೆ ಹೆಪ್ಪುಗಟ್ಟಿದ ಮೌನ, ಮನದ ಮೂಲೆಯಿಂದೆದ್ದು ಮಾತಾಗಿ  ಹರಿದುಬಿಡುತ್ತಿತ್ತು  ಬಿಡುಸಾಗಿ .
ಸಹಿಸಿಕೊಳ್ಳೋದು ಬಿಟ್ಟರೆ ಬೇರೆ ದಾರಿಯಿರಲಿಲ್ಲ ನಮಗೆ . ಆ ಕಾಲದ್ದು ಎನು ಮಾಡಲಾಗದ ಅಸಹಾಯಕತೆ  ಊಟಕ್ಕೆ, ಬಟ್ಟೆಗೆ ಬೇರೆ ವಿಧಿ ಇರಲಿಲ್ಲ .ತಟ್ಟೆ ಎಸೆದರೂ , ಕೆನ್ನೆಗೆ ಹೊಡೆದರೂ , ಮದ್ಯರಾತ್ರಿ ಎದ್ದು ಮನೆಬಿಟ್ಟು ಹೋದರೂ, ಅತ್ತೆ ಮಾವ ಹೆಚ್ಚೇ ಅಂದರು ಜೋತೆಗಿದ್ದಿದ್ದು ಕಣ್ಣೀರೊಂದೆ   …ಹಲ್ಲು ಕಚ್ಚಿ ಸಹಿಸಿಕೊಂಡೆವು…ನಿನ್ನತರಹ ಇದ್ದಿದ್ದಿದರೆ ಕತೆಯೇ ಬೇರೆ ಆಗಿರುತ್ತಿತ್ತು …

ಓ ಇದು ನನ್ನೊಬ್ಬಳ ಕತೆಯಲ್ಲ!

ಆದರು ನನ್ನ ಪಾಲಿಗೆ ದುಡ್ಡು ಬೇರೆ, ನಂಬಿಕೆ ಭಾವುಕತೆ ಬೇರೆ  ….

ಅವನು ಕದಡಿದ್ದು  ನನ್ನ ನಂಬಿಕೆಯ ಕೊಳವನ್ನ , ಜೀವನ ಪ್ರೀತಿಯನ್ನ  … ಮೈಯೆಲ್ಲಾ ಕಹಿಕಹಿ ನೆನಪು.
ಹಸಿಹಸಿ ಸ್ವಾರ್ಥ , ಕ್ರೌರ್ಯದ ಭಯಾನಕ  ಮುಖ ನೋಡಿದಮೇಲೆ ಮನುಷ್ಯರನ್ನ ಕಂಡರೆ ವಿಚಿತ್ರ ದ್ವೇಷ , ಭಯ, ಜಿಗುಪ್ಸೆ, ಅಸಹ್ಯ …ಇನ್ಯಾರನ್ನು ನಾ ಮತ್ತೆ ನಂಬಲಾರೆ…ಅದರಲ್ಲೂ ಗಂಡಸರನ್ನ …

ನಮ್ಮ ತಲೆ ಎಲ್ಲೇ ಮುಟ್ಟಿದ್ದರು  , ಬೇರಿರುವುದು ಅದೇ ಕೊಳಕು ಕೆಸರಿನ ಕೊಳದಲ್ಲಿ .ಅವನ ಜೊತೆ ಬರುವ ತಲೆತಿರುಕರು(ಹಿಡುಕರು) ಅವನಂತೆ ಮಾತಾಡಿ ಹಿ ಹಿ ಹಿ ನಕ್ಕು ಗಿಂಜಿದಾಗ ಕಾಣುವ ಕರೆಗಟ್ಟಿದ ಹಲ್ಲು, ನಾಲಿಗೆಗಳು !!!! ಸೀಳು ನಾಲಿಗೆಗಳಿಂದ ಒಸರುವ  ವಿಷ !
ದ್ರೋಹದ gangrine ಗೆ ಇಂಚಿಂಚೆ ಕೊಳೆಯುತ್ತಿತ್ತು ಮನ .ಯಾವ ಸ್ಟೇಜ್ ಇರಬಹುದು ಇದು .ಪ್ರಪಂಚವೆಲ್ಲ ಮೋದಿ, ರಾಹುಲ್ ಗಾಂಧಿ, ಧೋನಿ ಅಂತೆಲ್ಲ ಸಂಭ್ರಮಿಸುತ್ತಿರುವಾಗ ನನ್ನ ಕಣ್ಣಿಗೆಲ್ಲ ಬರಿ  ಕಪ್ಪು ಬಿಳುಪು !
ಎಲ್ಲದರಿಂದ ಓಡಿಹೋಗಿ ದೂರದ  ನಿರ್ಜನ, ಶೀತಲ  ಗುಹೆ ಹೊಕ್ಕು ಕೂತುಬಿಡಬೇಕೆನಿಸುತ್ತಿತ್ತು  …ಇದು ವೈರಾಗ್ಯವೂ ಅಲ್ಲ , ವೈಧವ್ಯವೂ ಅಲ್ಲ …

ಕಳಕೊಂಡ ನೋವು .

ಮನುಷ್ಯತ್ವದ ಮೇಲೆ ನಂಬಿಕೆ ಕಳಕೊಂಡ ನೋವು

ಬೀದಿಬದಿಯಲ್ಲಿ ಕೊಳಕು ಬಟ್ಟೆ, ಅಸ್ತವ್ಯಸ್ತ ಕೂದಲಿನ ಅರೆ ಹುಚ್ಚರು , ಅನಾಥ ಬಿಕ್ಷುಕರು ಮಾಯೆಗೊಳಗಾದವರಂತೆ ಬಿರುಬಿಡನೆ ಕೂತಿರುವುದ  ಕಂಡರೆ ಎದ್ದು ಹೋಗಿ ತಬ್ಬಿ ಸಂತೈಸಬೇಕು ಎನಿಸುತ್ತಿತ್ತು .ವಂಚಿಸಿ ಈ ಸ್ಥಿತಿಗೆ  ನಿಮ್ಮನ್ನು ಬಿಟ್ಟುಹೋದವರ್ಯಾರೆಂದು  ಅತ್ತು ಕೇಳಬೇಕೆನಿಸುತ್ತಿತ್ತು.
ಅಲ್ಯಾರೋ ನಾನು  ನಿನ್ನ ಅಧಿಕಾರಿ ಅಂತ ಕೆಳಗಿನವನನ್ನು ಬೈಯುತ್ತಿದ್ದರೆ  be gentle ಅನ್ನಬೇಕಿತ್ತು
ನಗುತ್ತನಗುತ್ತ ತಾಳಿ  ಕಟ್ಟುವವರಿಗೆ handle her  with care ಹೇಳಬೇಕಿತ್ತು …

ಭರವಸೆ ಇದ್ದರೆ ಎಷ್ಟು ವರ್ಷದ ಕಾಯುವಿಕೆಯಾದರು ನಡೆದೀತು . ಶಾಕುಂತಲೆ,ಅಹಲ್ಯೆ, ಶಬರಿಯರಿಗೂ ಅದೇ  ಹಣೆಬರಹ .
ಆದರೆ ಅಯೋಗ್ಯ ಯಡವಟ್ಟು ಪುನ್ಗಂದಿರನ್ನು ನೆನೆನೆನೆದು ಬೊಕ್ಕ ಬರಲಾಗಿ ಅತ್ತಿದಷ್ಟೇ ಬಂತು …ಭಗವಂತನ ಸ್ಮರಣೆ ಮಾಡಿದ್ದಿದ್ದರೆ ಇಷ್ಟರಲ್ಲಾಗಲೇ  ಒಲಿದಿರುತ್ತಿದ್ದನೇನೋ ….
ಸಾಕಾಗಿದೆ ನನಗೂ ನರಳಿ ನರಳಿ .
ಒಂದು ಸಾಯಬೇಕು ಇಲ್ಲ ಬದುಕಬೇಕು .ಪ್ರಜ್ಞೆ ಕಳೆದುಕೊಂಡು ,ಕೋಮಾದಲ್ಲಿ ಮಲಗಿ  ನರಳುವುದ್ದಿನ್ನೆಷ್ಟು ದಿನ.ಇಚ್ಛಾ  ಮರಣವಾದರು ನಡೆದುಹೋಗಲಿ    .ಸೂತಕಕ್ಕು ಒಂದು ಸಾವುಬರಲಿ .

ಹಾಗೆ ಮೆಲ್ಲಗೆ ಮಳೆ ನಿಂತಿತು ….ಖಾಲಿಯಾದಂತೆನಿಸಿ ಕೊಂಚ ಹಗುರಾಯಿತು .

ಇಳೆವೆಣ್ಣು  ಮೈತೊಳೆದು ಮಕರಂದದರಿಷಿನದಿ ಹೂಮುಡಿದು ಮಧುಮಗಳ ಹೋಲುತ್ತಿತ್ತು …ಛಾಯ ಹಾಡುತ್ತಿದ್ದಳು ….

 

 
 
 

 

ತಲಾಕ್

ಸಧ್ಯ ನಮ್ಮ ದೇಶದ ಕಾನೂನು ಹೆಣ್ಣುಮಕ್ಕಳಿಗೆ ಸುಭದ್ರವಾಗಿದೆ …ಇಲ್ಲ ಅಂದಿದ್ದಿದ್ದರೆ ಸಾರಿಗೆ ಉಪ್ಪು ಜಾಸ್ತಿಯಾಯಿತು ಅಂತಲೋ , ಗಂಡಸೊಂದಿಗೆ  ಮಾತಾಡಿದಳು ಎಂದಲೋ ಅದೆಷ್ಟೋ  ಜನ ಗಂಡಂದಿರು ತಮ್ಮ ಹೆಂಡತಿಗೆ  ತಲಾಕ್ ತಲಾಕ್ ಹೇಳಿ ಬೀದಿಗೆ ಬಿಟ್ಟುಬಿಡುತ್ತಿದ್ದರೋ …
ಕೆಲವರು  ನಮ್ಮ ದೇಶದ ಕಾನೂನು biased ಆಗಿದೆ ಎಂದು ದೂರುವುದು ಉಂಟು ..ಆದರೆ ಈ ದೇಶದ ಸಾಮಾಜಿಕ ನೀತಿ , ವ್ಯವಸ್ತೆಗೆ ಅನುಗುಣವಾಗಿಯೇ  ಕಾನೂನಿದೆ  ಎನಿಸುತ್ತದೆ ನನಗೆ .

ತಪ್ಪು ಅವರದಲ್ಲ… ಎಷ್ಟಾದರು  ನಮ್ಮ  ದೇಶದ  ಗಂಡಸರು  ತಾಯಿಯಂದಿರ  ಮುದ್ದು ಮಕ್ಕಳು(maama ‘s  son ).  

ಆ ತಾಯಿಯಂದಿರು ತಮ್ಮ ಗಂಡ ಮತ್ತು ಅವನ  ತಾಯಿಯ ಕೈಲಿ ಅಭದ್ರತೆಯಲ್ಲಿ  ನರಳಿ , ತನ್ನ ಜೀವ, ಪ್ರಾಣ, ಸರ್ವಸ್ವವನ್ನೂ ಗಂಡು ಮಗನಲ್ಲಿ ಕಂಡವರು .ಕಡೆಗಾಲದಲ್ಲಿ ಆಶ್ರಯವಾಗಿ ಎಂದಿಗೂ ಮಗ ಬಿಟ್ಟುಹೋಗದಂತೆ ಗ್ಯಾರಂಟಿ ಮಾಡಿಕೊಳ್ಳಲು ಇನ್ನಿಲ್ಲದ ಪ್ರೀತಿ, ಕಾಳಜಿ, ಮುತುವರ್ಜಿ ಮಾಡಿ ಮಾಡಿ ಸುಪುತ್ರರನ್ನು ಸೋಮಾರಿಗಳನ್ನಾಗಿ, ಸ್ವಂತ ನಿರ್ಧಾರ ತೆಗೆದುಕೊಳ್ಳಲಾಗದ ಅಸಹಾಯಕರನ್ನಾಗಿ , ಚಡ್ಡಿ ತೆಗೆದುಕೊಳ್ಳಲು ತನ್ನನ್ನು ಕೇಳುವ parasiteಟನ್ನಾಗಿ, ಕೂತ  ಜಾಗಕ್ಕೆ ಎಲ್ಲಾ ಸರಬರಾಜು ಆಗುವ ರಾಜಕುಮಾರರನ್ನಾಗಿ, ಏನೇ ಮಾಡಿದರು ತಾನೇ ಸರಿ ಎನ್ನುವ ಉಡಾಳರನ್ನಾಗಿ , ಕೈಯಲ್ಲಿ ಕತ್ತಿ  ಹಿಡಿದುಕೊಂಡು ಕೂಗಾಡುವ ಉತ್ತರಕುಮಾರರನ್ನಾಗಿ, ಸ್ವಂತ ಬದುಕು ಬದುಕಲಾಗದ ಸೋಗಲಾಡಿಗಳನ್ನಾಗಿ   ಮಾಡಿ  , ಏನೇ ಅನೀತಿ ಮಾಡಿಕೊಂಡು ಮನೆಗೆ  ಬಂದರು  ಕಾಪಾಡುವ ದೇವರಾಗಿ ಬಿಟ್ಟಿರುತ್ತಾರೆ  …. so  that ಮಗನ ಪಾಲಿಗೆ ತನ್ನ ತಾಯಿ ಹೇಳಿದ್ದೆ    ಸರಿ, ತಾಯಿ ತನ್ನ ಒಳಿತಿಗಾಗಿ ಹಗಲಿರುಳು ದುಡಿಯುವ ಸರ್ವಸಂಗ ಪರಿತ್ಯಾಗಿ, ಕಣ್ಣಿಗೆ  ಕಾಣುವ ನಿಜ ದೈವ ಆಗಿ ಬಿಟ್ಟಿರುತ್ತಾರೆ …ಮಾನಸಿಕ ಸಾಮರ್ಥ್ಯವಿಲ್ಲದವನ ರಿಮೋಟ್ ಕಂಟ್ರೋಲ್ ತಾಯಿಯ ಕೈಲಿರುತ್ತದೆ

ಪ್ರತಿ ಮನುಷ್ಯನಿಗೂ ಒಂದು ಅಸ್ತಿತ್ವ, ಮನ್ನಣೆ , ಐಡೆಂಟಿಟಿ ಬೇಕು… ಅದರಲ್ಲೂ ಹೆಣ್ಣುಮಕ್ಕಳಿಗೆ ಬೇಕೇ ಬೇಕು..
ಆ ಕಾಲದಲ್ಲಿ ಸಾಧ್ಯತೆಗಳು ಕಡಿಮೆಯಿದ್ದಂತ ಸಂಧರ್ಭದಲ್ಲಿ ತನಗೊಂದು  ಐಡೆಂಟಿಟಿ ಕಂಡುಕೊಳ್ಳಲು ಆ ಹೆಂಗಸರು ಹೆಚ್ಚೆಚ್ಚೆ ಮನೆಗೆಲಸ , ಪೂಜೆ, ಮಡಿ ,ಅಚ್ಚುಕಟ್ಟು, ಒಪ್ಪಓರಣ ಮಾಡಲು ಶುರುಮಾಡಿದರು …ಒಂದು ದಿನ ಮನೆಯಲ್ಲಿ ಇಲ್ಲದ್ದಿದ್ದರು ಮನೆಯ ಗಂಡಸರಿಗೆ ಕೈಕಾಲು ಆಡದಂತ dependency  ಸೃಷ್ಟಿಮಾಡಿಕೊಂಡರು….ಅಡಿಗೆ ಎಂದರೆ ಬ್ರಹ್ಮ ವಿದ್ಯೆ , ಮನೆಗೆಲಸಗಳು ಎಂದರೆ ಗಂಡಸರ ಯೋಗ್ಯತೆ ಮಾಡಬಾರದಂತ ಹೀನ ಕೆಲಸಗಳು ಎನ್ನುವಂತೆ ನಡೆದುಕೊಂಡರು  …  ತಾನಿಲ್ಲದೆ ಮನೆಗೆಲಸ ನಡೆಯಲ್ಲ ಎನ್ನುವಂತೆ ಮಾಡಿಟ್ಟರು ….ಹೆಣ್ಣೆಂದರೆ ಅಮ್ಮನ ತರಹ ಇರಬೇಕು ಎನ್ನುವ ವಾತಾವರಣ ಸೃಷ್ಟಿಸಿಕೊಂಡರು …

ಇಂತಿಪ್ಪ ಗಂಡುಹೈಕಳಿಗೆ ಮದುವೆ ಅಂತ ಒಂದಾಗುತ್ತೈತೆ !!!

ಪಾಪ ಈಗಿನ ಕಾಲದವಳು ಓದಿ ಬಿಟ್ಟಿರುತ್ತಾಳೆ ….ಕೆಟ್ಟ  ಹಣೆಬರಹಕ್ಕೆ  ದುಡಿಯಲೂ   ಹೋಗುತ್ತಿರುತಾಳೆ   

ಅತ್ತೆಗೆ ತಾನೆಲ್ಲಿ  ಅವಳ ಎದುರು ಕಡಿಮೆಯಾಗಿಬಿಡುತ್ತೇನೋ ಎನ್ನುವ ಭಯ ..   ತಾನೆಷ್ಟು ಕಷ್ಟಪಟ್ಟು ಬದುಕು ಕಟ್ಟಿಕೊಂಡೆ, ಎಷ್ಟೆಲ್ಲಾ ಕಷ್ಟಪಟ್ಟು ಆಸ್ತಿ ಸಂಪಾದಿಸಿದೆ ಎಲ್ಲ ಕಣ್ಣ ಮುಂದೆ ಬಂದು ಸೊಸೆ ಏನೇನು ಅಲ್ಲ ಅಂತ ಆತ್ಮಸಮಾಧಾನ ಹೇಳುತ್ತಿರುತ್ತದೆ …ಅವಾಗವಾಗ   ತನ್ನ ಅಚ್ಚುಕಟ್ಟುತನದ ಎದುರು ಸೊಸೆ ಸೊನ್ನೆ ಎನಿಸಿ ಸುಮ್ಮಸುಮ್ಮನೆ ಪಾತ್ರೆ  ಸರಿಯಾಗಿ ತೊಳೆದಿಲ್ಲ , ಅಡಿಗೆ ರುಚಿಯಾಗಿಲ್ಲ, ಮಗನನ್ನನು ಸರಿಯಾಗಿ ನೋಡಿಕೊಳ್ಳುತಿಲ್ಲಾ ಅಂತೆಲ್ಲ ಅಸಮಾಧಾನ ಶುರುವಾಗುತ್ತಿರುತ್ತದೆ .. ಜೊತೆಜೊತೆಗೆ ದುಡಿದಿದ್ದನೆಲ್ಲ ಎಲ್ಲಿಗೆ ಸಾಗಿಸುತ್ತಿದ್ದಾಳೆ ಅನ್ನುವ ಕುತೂಹಲವೂ, ಮನೆ ಉದ್ಧಾರಕ್ಕೆ ತನ್ನಂತೆ ಯೋಚಿಸುತ್ತಿಲ್ಲ ಎನ್ನುವ ಕೋಪವೂ ಸೇರಿಕೊಳ್ಳುತ್ತದೆ …ಜೊತೆಗೆ ಮಗ ಹೆಂಡತಿ ಜೊತೆ ಹಚ್ಚೆಚ್ಚು ಆಪ್ತವಾಗುತ್ತ ಕಂಡಂತೆ, ತನ್ನನ್ನು ದೂರ ಮಾಡಿ ನಿರ್ಲಕ್ಷಿಸುತ್ತಿರುವಂತೆ ಬಾಸವಾಗತೊಡಗುತ್ತದೆ ….

ಮಗನ ಕಿವಿಯಲ್ಲಿ ದೂರುಗಳನ್ನು ರವಾನಿಸಲು ತೊಡಗುತ್ತಾಳೆ … ನಿನ್ನ ಮೇಲೆ ಪ್ರೀತಿಯಿದ್ದಿದ್ದಿದರೆ ಶುರು ಮಾಡುತ್ತಲೇ ದುಡ್ಡು ಕಾಸಿನ ಬಗ್ಗೆ ಆಸೆ., ಅಧಿಕಾರದ ಬಗ್ಗೆ ಎಚ್ಚರಿಸುತ್ತಾಳೆ     

ಅಮ್ಮ ಹೇಳಿದ್ದು ಮಗ ನಂಬುತ್ತಾನೆ ……ಅಮ್ಮ ಹೇಳುವುದೆಲ್ಲವೂ ತನ್ನ ಒಳ್ಳೆಯದಕ್ಕೆ…ಮಗ ಕೇಳುತ್ತಾನೆ …

ನಿಜವಾಗಲು ಹೆಣ್ಣನು ಕಂಡರೆ ಪ್ರೀತಿಯಿದ್ದರೆ ಬಿಟ್ಟಿರಲಾರದ ಅಗತ್ಯವಿದ್ದರೆ ಮಗ ನಿಭಾಯಿಸಿಕೊಳ್ಳುತ್ತಾನೆ ….ಆದರೆ ಅವನಿಗೇನೋ ತನ್ನ ಹೆಂಡತಿಯ ಮೇಲೆ ನಂಬಿಕೆ ಇಲ್ಲ

ಹೌದಲ್ಲವಾ ಅನಿಸುತ್ತಿರುವಾಗಲೇ ಗಂಡ ಕೆಂಡಾಮಂಡಲನಾಗಿ     ಬಿಡುತ್ತಾನೆ ….

ಜತೆಗೊಬ್ಬಳು ಒಡಹುಟ್ಟಿದ ಅಕ್ಕ/ತಂಗಿ …..  

ಸಂಸಾರಸ್ತೆ ಎಂದರೆ ತಾನೊಬ್ಬಳೆ ಅಂತ ಪೋಸು ಕೊಡುತ್ತ ಸಂಸಾರ ಮಾಡಲು ಒಂದಷ್ಟು ಟಿಪ್ಸ್ ಕೊಡುತ್ತಿರುತ್ತಾಳೆ …

ಅವನು ಬಯಸಿದ್ದು ಕೊಟ್ಟುಬಿಟ್ಟರೆ  ಹೆಂಡತಿಯನ್ನು  ಚೆನ್ನಾಗಿ  ನೋಡಿಕೊಳ್ಳುತ್ತಾನೆ  , ಗಂಡಸಾದವನಿಗೆ ಕೋಪ ಸಹಜ, ಹೆಣ್ಣಾದವಳು ಹೊಡೆಸಿಕೊಂಡರು  ಸುಮ್ಮನಿರಬೇಕು, ಒಂದು ಮೊಗು ಅಂತ ಹೊಟ್ಟೆಯಲ್ಲಿ ಬಿದ್ದು, ಹೆರುವಾಗ ನರಳಾಟ ನೋಡಿ ,  ಮಗು  ಎನ್ನುವ ಕರಳು ಸಂಬಂಧ ಬೆಳೆದುಬಿಟ್ಟರೆ ತನ್ನ ತಮ್ಮ ಹೆಂಡತಿಯನ್ನು ಪ್ರೀತಿಸುತ್ತಾನೆ ಎಂದು ಪ್ರೀತಿಗೆ ಕಾರಣವನ್ನೂ ನೀಡುತ್ತಾಳೆ ……ದುಡಿಯುವ ಹುಡುಗಿ ಹೇಗೆ ನಡೆದುಕೊಳ್ಳಬೇಕು  ಪಾಠ ಹೇಳುತ್ತಾಳೇ ..ಗಂಡನನ್ನು  ತನ್ನಂತೆ ಕೈಗೆ ಹಾಕಿಕೊಳ್ಳುವುದು ಕಲಿಯಬೇಕು ಎನ್ನುತ್ತಾಳೆ.. ತನ್ನಂತೆ ಅತ್ತೆ ಮನೆ ಹೊಡೆದು ಈಚೆ ಬರುವುದೊಂದನ್ನು ಬಿಟ್ಟು  ಮತ್ತೆಲ್ಲ  ಮಾತಾಡುತ್ತಾಳೆ ..

ಎಲ್ಲದರ ಹಿಂದಿನ ಉದ್ದೇಶ ದುಡ್ಡು, ಮನೆಗೆಲಸ, ಗಂಡಸಿನ ಕೋಪ, ಅತ್ತೆಯ ರಾಜಕೀಯ , ನಾದಿನಿಯ ಮದ್ಯಸ್ತಿಕೆಯಾಗಿರುತ್ತದೆ  
ಗ್ರಹಚಾರ ಕೆಟ್ಟ ದಿನ ದೊಡ್ಡರಗಳೆ ಆಗಿಹೋಗುತ್ತದೆ …ಎಲ್ಲರು ಸೇರಿ ಉಸಿರಾಡಲು ಸಾಧ್ಯವಿಲ್ಲದಷ್ಟು  ಹಿಂಸಿಸಿದರು ಇನ್ನು ಇವರು ಮನುಷ್ಯರಲ್ಲ ಎನಿಸಿದಾಗ ಅವಳು ಹೌಹಾರುತ್ತಾಳೆ… ಗಂಡನನ್ನು ಬಿಡುವ ಮಾತಾಡುತ್ತಾಳೆ…

ಅಲ್ಲಿಗೆ ಮುಗಿಯಿತು ….
ಗಂಡನಿಗೆ ಮರ್ಯಾದೆ  ಕೊಡದೆ ಮನೆ ಗೌರವಕಳೆದುಬಿಟ್ಟಳು ಇನ್ನು ತನಗೆ ಅವಳು ಬೇಡ– ಗಂಡನ order …
ತನ್ನ ಮಗನಿಗೆ ಮತ್ತೊಂದು ಮದುವೆ  ಮಾಡಿಸುತ್ತೇನೆ , ಅವಳಂತ ನೂರು ಜನ ಸಿಗುತ್ತಾರೆ , ಓದ್ದಿದ್ದೇನೆ ಎನ್ನುವ ದುರಹಂಕಾರ  ಅತ್ತೆಯ ಧಿಮಾಕು ..
ಏನಾಯಿತು ಕೇಳಿದ ಜನಕ್ಕೆ ಅವಳು ದುಡಿಯುತ್ತಿದ್ದ ಹೆಂಗಸು ಗಂಡಸರೊಂದಿಗೆ ಮಾತಾಡುತ್ತಿದ್ದಳು ..ಅಫೇರ್ ಇತ್ತು ..ಕತೆ ಹೇಳುತ್ತಾರೆ ..
ಜನಕ್ಕೆ ಹಬ್ಬದಂತೆ gossips ಶುರುವಾಗುತ್ತವೆ …ಹೌದ, ಎಂತೆಂತಾ ಹುಡುಗಿಯರು ಇರುತ್ತಾರಪ್ಪ ಹರಡುತ್ತದೆ ಕತೆ…

ಅಮ್ಮ ಅಕ್ಕನ blackmail ನಮಗೆ ಅವಳು  ಬೇಡ , ನಮ್ಮನ್ನು ಹಾಗೆಂದಳು   , ಹೀಗೆಂದಳು …ನಿನಗೆ ಬೇಕಾದರೆ ಬೇರೆ ಹೋಗಿ ಸಂಸಾರ ಮಾಡಿಕೊ.. ಮನೆಗೆ ಕರೆದು ತಂದರೆ ನಾವು ಪ್ರಾಣ ಕಳೆದು ಕೊಂಡುಬಿಡುತ್ತೇವೆ …. ಗೆರೆ ಎಳೆದು ಬಿಡುತ್ತಾರೆ …

ಅಮ್ಮ , ಅಕ್ಕ ನನ್ನನ್ನು ಕಾಪಾಡುವುದಕ್ಕೆ ಇರುವುದು ..ಹೆಂಡತಿ ಎಲ್ಲಾ ಹಾಳು ಮಾಡಿದಳು.. ಅಂತವಳನ್ನು ಕಟ್ಟಿಕೊಂಡು ಕಷ್ಟಪಡುವುದಕ್ಕಿಂತ ಅಮ್ಮ ಅಕ್ಕ ಹೇಳಿದಂಗೆ ಬಿಟ್ಟುಬಿಡುವುದೇ ಸರಿ… ಜವಾಬ್ದಾರಿ ತೆಗೆದುಕೊಂಡು ಅಭ್ಯಾಸವಿಲ್ಲ , ಕಷ್ಟಪಟ್ಟು ರೂಡಿ ಇಲ್ಲ, ವನವಾಸ ಯಾಕೆಪಡಬೇಕು.. ತನ್ನ ಕೋಪ ಮಿತಿಮೀರಿದ ದಿನ ಮತ್ತೆ ಅವಳು ಬಿಟ್ಟು ಹೋದರೆ ಅಮ್ಮನೂ ಇಲ್ಲ, ಹೆಂಡತಿಯೂ ಇಲ್ಲ ಹಾಳಾಗಿಬಿಡುತ್ತೇನೆ..ಸೇಫ್ ಆಗಿ ಬದುಕೋದು, ಲಾಭದಿಂದ ಬದುಕೋದು ನನ್ನ ಹಕ್ಕು …ಅಮ್ಮನ ಮಗ ನಾನು ಹುಟ್ಟುತ್ತಲೇ ಅದೃಷ್ಟ ಮಾಡಿಕೊಂಡು ಬಂದವನು…

ಅವಳ ಚಾರಿತ್ರ್ಯ ಸರಿ ಇಲ್ಲಾ ಅಂತ ಊರೆಲ್ಲ ಹೇಳಿಕೊಂಡು ಬಂದಾಗಿದೆ…ಮತ್ತೆ ಅವಳ ಜೊತೆ ಸಂಸಾರ ಮಾಡಿದರೆ…ಗತಿ ಇಲ್ಲವ ಇವನಿಗೆ ಅಂತ… ಜನ ನೋಡಿ ನಗುತ್ತಾರೆ

ಅಮ್ಮ ಹೇಗೂ ತಲೆತಪ್ಪಿಸಿ ಬಚ್ಚಿಡುತ್ತಾರೆ.. ಅವಳಿಂದ ಮುಕ್ತಿ ಪಡೆದು ಆಸ್ತಿ ಉಳಿಸಿಕೊಂಡರೆ ಮತ್ತೆ ಇನ್ನೊಂದು ಹೆಣ್ಣಿನೊಂದಿಗೆ ಮದುವೆಯಾಗಿ ಸುಖಿಸಬಹುದು …

ಒಂದಷ್ಟು ದಿನ ಓಡಿ ಹೋಗಬೇಕು ..ಕೇಸು ಕೋರ್ಟು ಎಲ್ಲ ಮುಗಿದ ಮೇಲೆ ಬಂದರೆ ಆಯಿತು…      ದುಡಿಯುವ ಹೆಣ್ಣಿಗೆ compensation  ಕೊಡುವ ಉಸಾಬರಿ ಇಲ್ಲ್ಲ ಸದ್ಯ ….

ತಲಾಕ್ ಹೇಳುವುದು ಕಾನೂನಿನಲ್ಲಿ ಸುಲಭವಿದ್ದಿದ್ದರೆ ಎಷ್ಟು ಹೆಣ್ಣುಮಕ್ಕಳು ಎಲ್ಲಾ ಕಳಕೊಂಡು ಬೀದಿಗೆ ಬಂದುಬಿಡುತ್ತಿದರೋ…ಸದ್ಯ ದೇಶದ ಕಾನೂನಿನಲ್ಲಾದರು ಹೆಣ್ಣಿನ ಮೇಲೆ ಸ್ವಲ್ಪ ಅನುಕಂಪವಿದೆ ….

perspectives

ಸರಿ ತಪ್ಪು ಅಂತ ಇರೋದೆಯಿಲ್ಲ  , ಅವೆಲ್ಲ ಕೇವಲ perspectives ಅಂತಾರೆ ಕೆಲವರು .
ನಾನು ಹಾಗೆಂದುಕೊಂಡೆ ಎಷ್ಟೊಂದು ಅರ್ಥಮಾಡಿಕೊಳ್ಳಲು ಪ್ರಯತ್ನಪಟ್ಟೆ… ಈಗಲೂ ಪಡುತ್ತಲೇ ಇದ್ದೇನೆ .
ಅವನು ಎಷ್ಟೇ  ನೀಚವಾಗಿ ಯೋಚಿಸಿದ್ದರು , ಮಾತಾಡಿದ್ದರು , ನಡೆದುಕೊಂಡಿದ್ದರು ಒಂದು ಹಂತ ಅಂತ ಸಹಿಸಿಕೊಳ್ಳುತ್ತಿದ್ದೆ… ಪ್ರೀತಿಯೋ, ಗಂಡ ಎನ್ನುವ ಅಕ್ಕರೆಯೊ, ಬಿಡಲಾರದ ಅಸಹಾಯಕತೆಯೋ …ಏನೋ ಒಂದು …ನಾಲ್ಕು ಗೋಡೆಯೊಳಗೆ ನಮ್ಮಿಬ್ಬರ ನಡುವೆ ಅವೆಲ್ಲ ನಡೆದು ತೀರಬೇಕಿತ್ತು ಅಷ್ಟೇ  ..ಮತ್ತು ಅದನ್ನು  handle ಮಾಡಿಕೊಳ್ಳಲು ನನಗೆ ಪರಿಪೂರ್ಣ ಅವಕಾಶವಿದ್ದಿರಬೇಕು   …

ಅವನಿಗೆ ಅರ್ಥವಾಗಲೇ   ಇಲ್ಲ  ..

ಎಂದು ಪ್ರಯತ್ನ ಕೂಡ ಪಡಲಿಲ್ಲ !!

ಅಷ್ಟೊಂದು mishandle ಮಾಡುತ್ತಾರೆ ಎಂದರೆ ಒಂದೋ ದುರಹಂಕಾರದ ಪರಮಾವಧಿಯಲ್ಲಿ ಮುಳುಗಿ ಹೋಗಿರಬೇಕು, ಇಲ್ಲ ಕಳೆದುಕೊಳ್ಳುವ ಭಯ ಬೇಜಾರು ಇಲ್ಲದೆ ಬೇಕಾಬಿಟ್ಟೆ ಕಡೆಗಣಿಸುವವರಾಗಿರಬೇಕು , ಇಲ್ಲ ಬೇರೇನೋ ಸಾಧಿಸಿಕೊಳ್ಳಲು ನೆಪಮಾಡಿಕೊಳ್ಳುವ ದುರುದ್ದೇಶಹೊಂದಿರಬೇಕು
ಅವರ ನಿಲುವು, ಯೋಚನೆ, ನಡವಳಿಕೆ ನೆನೆಸಿಕೊಂಡರೆ  ಅಸಹ್ಯವಾಗುತ್ತದೆ ..ಅವರ ಯೋಚನಾ ಲಹರಿಗೆ  ಎಲ್ಲರು ಬೆಚ್ಚುತ್ತಾರೆ, ವಾಕರಿಸಿಕೊಳ್ಳುತ್ತಾರೆ  …   

ನಮ್ಮಗಳ  ಹಿನ್ನಲೆಗಳಲ್ಲಿ ವ್ಯತ್ಯಾಸವಿತ್ತು ನಿಜ.
ನಮ್ಮ ಮನೆಯಲ್ಲಿ ಸರಸ್ವತಿ ಫೋಟೋ, ಸರಸ್ವತಿ ಪೂಜೆ, ಹಬ್ಬ , ಆರಾಧನೆ ಎಂದರೆ ಅವರ ಮನೆಯಲ್ಲಿ ಎಲ್ಲದಕ್ಕೂ, ಎಲ್ಲವೂ  ಲಕ್ಷ್ಮಿ…
ನಮ ಮನೆಗಳಲ್ಲಿ  ಪುಸ್ತಕಗಳನ್ನು  ಆಸ್ತಿಯೆಂದು ತೋರಿಸುತ್ತಾ ಬೆಳೆಸಿದರು ..ಬುದ್ದಿ ತಲೆಗೆಹತ್ತುವ ಸಮಯದಲ್ಲಿ ಕೈಗೆ ಬಂದಿದ್ದು ಡಿಕ್ಷನರಿ , ಪುರಂದರ, ಕನಕದಾಸರ ಕೀರ್ತನೆ, ಕುವೆಂಪು ಬೇಂದ್ರೆ  ಕಾವ್ಯ  !!!
ಆದ್ಯಾತ್ಮದ ಜೊತೆ ವೈರಾಗ್ಯ , ತತ್ವಜಿಂತನೆಗಳು … ನಾ ಕೇಳಿದ ಮೊದಲ ಕತೆ ಕೃಪುಣ  ಪುರಂದರದಾಸರು ತನ್ನೆಲ್ಲ ಆಸ್ತಿ ತೊರೆದು ವೈರಾಗ್ಯ ಸ್ವೀಕರಿಸಿದ್ದು . ಪುಣ್ಯಕೋಟಿ ಕತೆ  , ಅಂಗುಲಿಮಾಲನ ಕತೆ..

ನಾ ಮೊದಲ ಬಾರಿ ಏನೋ ಬರೆದಾಗ ಅಕ್ಕ ಅಪ್ಪನಿಗೆ ತೋರಿಸಿ ಹೊಗಳಿಕೆಗಳಿಸಿ ಕೊಟ್ಟಿದ್ದಳು  …  ಅಪ್ಪ ,ಬರೆಯುವುದ ಹೀಗೆ  ಮುಂದುವರೆಸು ಬೆನ್ನುತಟ್ಟಿದ್ದರು ..ಇಲ್ಲಿ ಅವೆಲ್ಲ ಹಾದರದ ವಿಷಯವಾಗಿ ಹೋಗಿತ್ತು ! ಸಾಕ್ಷಿಯಾಗಿ ಹೋಗಿತ್ತು …ಅರ್ಥವಾಗದ   ಜನಕ್ಕೆ ಕೆಟ್ಟ ಅರ್ಥಮಾಡಿಸಲು   ಮುಲಾಜಿಲ್ಲದೆ  ತೋರಿಸತೊಡಗಿದರು … ಮುರಿಯುವುದು, ಗೆಲ್ಲುವುದು ಅಷ್ಟೇ ಅವರ ಉದ್ದೇಶ … blackmail !!!!

ವರ್ಷಕ್ಕೆ ಒಂದು ಅಂತ ಉಗಾದಿಗೊ ಹುಟ್ಟಿದ ಹಬ್ಬಕ್ಕೋ ಬಟ್ಟೆ ಕೊಡಿಸಿದರೆ ಅದೇ ದೊಡ್ಡಸ್ತಿಕೆ ಅನ್ನೋಷ್ಟು ಖುಷಿ ….ನಾವು ಅನುಕೂಲಸ್ತರು   ಎನ್ನುವ ಭ್ರಮೆ .
ವಸ್ತುಗಳ ಮೇಲೆ ಆಸೆ ನಿಜ, ಆದರೆ ಅದೇ ಬದುಕಲ್ಲ ಉಪದೇಶ… ಕೊಡಿಸು ಎಂದು ಪೀಡಿಸದೇ ನೀನು ಸಂಪಾದಿಸಿ ಆನಂದಿಸಬೇಕು ನೀತಿಪಾಠ  
ಏನೊಂದು  ಆಗದೆ ಕೇವಲ ಹುಟ್ಟಿ, ಬದುಕಿ ಸಾಯೋದು ಅಪ್ಪನಿಗೆ  ಇಷ್ಟವಿರಲಿಲ್ಲ .. ಸಾಧನೆ ಮಾಡಬೇಕು, ಜ್ಞಾನವೇ ಸಂಪಾದನೆ, resource ಆಗಿ ಬಾಳಬೇಕು,  ಜನಗುರುತಿಸುವಂತ   contribution ನೀಡುವಂತಾಗಬೇಕು ,ಅಂತವರಿಗೆ ಎಲ್ಲಿಯೋದರು ಘನತೆ   ಅಂತೆಲ್ಲ ನಂಬಿದ್ದರು , ನಮ್ಮನ್ನು ಹಾಗೆ  ನಂಬಿಸುತ್ತಿದ್ದರು …

ಅಲ್ಲಿ ವಸ್ತುಗಳನ್ನೇ , ಅವುಗಳು ಸೃಷ್ಟಿಮಾಡೋ ಶ್ರೀಮಂತಿಕೆ ಭ್ರಮೆಯನ್ನು ಆಸ್ತಿಯೆನ್ನುತ್ತ ಬೆಳೆಸಿದ್ದರು …ಬದುಕಲ್ಲಿ ಉಳಿಯಬೇಕು ಎಂದರೆ , ಹೋರಾಡಬೇಕು,ಗೆಲ್ಲಬೇಕು , ಬೇರೆಯವರನ್ನು ಹದ್ದುಬಸ್ತಲ್ಲಿ ಬಂದಿಸುತ್ತಾ ಉಪಯೋಗಿಸುವುದ , ಆಳುವುದ, ಕಲಿಯಬೇಕು ಬದುಕೆಂದರೆ ಹೋರಾಟ ಪಾಠ ಕಲಿಸಿದ್ದರು… ಇನ್ಯಾರಿಂದಲೋ ತೊಂದರೆ ಅನುಭವಿಸದೆ ಸೇಫ್ ಆಗಿ ಬದುಕಲು ಏನು ಬೇಕಾದರೂ ಮಾಡು ಹೇಳಿದ್ದರು ..  

ಹೆಣ್ಣುಮಕ್ಕಳಿಗೆ ಅಡಿಗೆ, ಗಂಡನನ್ನು ಒಲಿಸಿಕೊಳ್ಳೋ  ಕಲೆ, ಸಹಿಸಿಕೊಳ್ಳೋ ಬುದ್ಧಿ ಕಲಿಸಿ ಒಳ್ಳೆ ಶ್ರೀಮಂತನ ಮನೆಗೆ ಸೇರಿಸಿಬಿಟ್ಟರೆ ಅಲ್ಲಿ ಸುಖವಾಗಿದ್ದು ಬಿಡುತ್ತಾರೆ   –ಇಂತ ಸಾಮಾನ್ಯ ಕಲ್ಪನೆಗಳು ತಂದೆ, ತಾಯಿ ಇಬ್ಬರಲ್ಲೂ ಇರಲಿಲ್ಲ … ನೀ ಚೆನ್ನಾಗಿ ಓದಿದರೆ ಓದಿದವರನ್ನು ಮದುವೆಯಾಗಿ intelectuallythink ಮಾಡುತ್ತಾ ಕ್ವಾಲಿಟಿ ಲೈಫ್ ಬಾಳಬಹುದು ಎನ್ನುವುದ ಬಿಟ್ಟರೆ ಮದುವೆ  ಬಗೆಗೆ ಹೆಚ್ಚೇನೂ ಅವರ ಯೋಚನೆ ಇರಲಿಲ್ಲ
ಆದರೆ ಮದುವೆ ನನ್ನ ಪಾಲಿಗೆ ಭಾವನಾತ್ಮಕ ಹಂತ ! ನಾನು ಭಾವುಕಳು… ಟೆಕ್ನಾಲಜಿ ಗಿಂತ ಮಮತೆ , ಪ್ರೀತಿಯನ್ನು  ಹೆಚ್ಚು appreciate ಮಾಡುವವಳು ..ಘನತೆಯುತ ಖಾಸಗಿತನ ಬಯಸುವವಳು .
 
ಸದಾ tuition , classes , exam ಅಂತೆಲ್ಲ ಒತ್ತಡದಲ್ಲಿರುತ್ತಿರುವಾಗ ನಮ್ಮಂತ ಹುಡುಗೀರು ಬೇಸತ್ತು  ಮಾತಾಡಿಕೊಳ್ಳುತ್ತಿದದ್ದು ಇತ್ತು …ಅಮ್ಮ ನೋಡು ಎಷ್ಟು ಹಾಯಾಗಿ ಮನೆಯಲ್ಲಿ ಅಡಿಗೆ ಮಾಡಿಕೊಂಡು ಇರುತ್ತಾರೆ ..ಕಾದಂಬರಿ ಓದೋಕೆ, tv ನೋಡೋಕೆ , ನಿದ್ದೆ ಮಾಡೋಕೆ ಎಷ್ಟೆಲ್ಲಾ ಸಮಯ ಸಿಗುತ್ತದೆ… ನಮಗೂ ಹಾಗೆ ಬದುಕು ಸಾದ್ಯವಾದರೆ …?
ಮುಂದಿನ ಕ್ಷಣವೇ ಅನಿಸುತ್ತಿತ್ತು ಇಲ್ಲ, ಅದೆಲ್ಲವನ್ನು ಮೀರಿ ಬೇರೆನಾದರು ಗುರುತಿಸಿಕೊಳ್ಳಬೇಕು, ಸಾಧಿಸಿ ತೋರಿಸಬೇಕು …
.. ನೌಕರಿ, ಟೆಕ್ನಾಲಜಿ , ಉದ್ಯೋಗ, ಸ್ಥಾನ, ಮನ್ನಣೆ, onsitu ಏನೇನೋ ಕನಸಿತ್ತು …
ನಿಜ ತಂದೆ ತಾಯಿ ಎಷ್ಟೆಲ್ಲಾ ಕನಸು ಕಾಣುತ್ತಾರೆ … ಈಗಲೂ ನೆನಪಿದೆ ನನಗೆ, ಮೊದಲ ಬಾರಿ  ಪ್ರಾರ್ಥನೆ ಹೇಳಿಕೊಟ್ಟಿದ್ದು   “ಒಳ್ಳೆ ವಿದ್ಯೆ , ಒಳ್ಳೆ ಬುಧ್ಹಿ , ಆಯುರಾರೋಗ್ಯ ಕೊಡಪ್ಪ ತಂದೆ  ‘ .

ಮೈಕ್ರೋಬಯಾಲಜಿ ಬೂಮ್ ಇದೆ ಎಂದು ಕೇಳಿ ದೊಡ್ದಕನನ್ನು ಸೇರಿಸಿದ್ದು , ನಾವು ಓದುವಾಗ ಇಂಜಿನಿಯರಿಂಗ್ ಬೂಮ್ ಇದೆ ಅಂತ ಅದರ ಕಡೆ ನಮ್ಮ ಗುರಿ ಸೃಷ್ಟಿಸಿದ್ದು ಅಪ್ಪ  …
ತಲೆಚಿಟ್ಟು ಹಿಡಿಯುವಷ್ಟು  ಓದೋಷ್ಟು ಗುಡ್ಡೆಹಾಕಿಕೊಂಡು  ಕೂತಾಗ , ನಿದ್ದೆ ಊಟ ಬಿಟ್ಟು , tv  ಬಿಟ್ಟು, ಎಲ್ಲಾ ಪ್ರಲೋಭನೆ ಬಿಟ್ಟು ಓದುವಾಗ ಅಮ್ಮ ನೊಂದು ನುಡಿದುಬಿಡುತ್ತಿದ್ದರು , ಯಾಕೆ ಮಕ್ಕಳು ಇಷ್ಟು ಕಷ್ಟಪಡಬೇಕು… ಏನೋ ಒಂದು ಆದರೆ ಆಯಿತಲ್ಲ….
ಹಾಗೆಲ್ಲ ದಿಕ್ಕು ತಪ್ಪಿಸಬೇಡ  ಬಯ್ದುಬಿಡುತ್ತಿದ್ದರು ಅಪ್ಪ….!!!!!
ಓದದೆ ಬಿಸಿನೆಸ್ ಮಾಡಿ ದುಡಿಯುವವರು ಎಲ್ಲರಿಗಿಂತ ಹೆಚ್ಚು ಸಂಪಾದನೆ ಮಾಡುತ್ತಾರೆ ಎನ್ನುವುದು  ನನ್ನ ಜಿಜ್ಞಾಸೆ ಆಗಿಬಿಡುತಿತ್ತು ಕೆಲವೊಮ್ಮೆ …
ಆದರೆ ಓದು, ಕೆಲಸ ಎಂದರೆ ಕೇವಲ ದುಡ್ಡು, ಸಂಬಳ ಅಲ್ಲ !!! ಅದೊಂದು ಸಾದನೆ, ಗೌರವ !!! ಎಲ್ಲರು ದುಡ್ಡು ಸಂಪಾದಿಸಬಹುದು , ಯಾರ್ಯಾರೋ ಹೇಗೇಗೋ  ಶ್ರೀಮಂತರಾಗಬಹುದು , ಇನ್ಯಾರೋ ಹಣ ಲಪಟಾಯಿಸಬಹುದು…ಆದರೆ ಅದ್ಯಾವುದು ಜ್ಞಾನಕ್ಕೆ, ವಿದ್ಯೆಗೆ ಸಮನಲ್ಲ ಅನ್ನ್ನೊದು ಅವರ ದೃಡ ನಂಬಿಕೆ

ನಾನು ಹೊಕ್ಕ ಹೊಸ ಜಗತ್ತಿನ perspective ಬೇರೆಯೇ !!
ಅವರ ಇತಿಮಿತಿಯಲ್ಲಿ ಅವರ  ಬದುಕು ಅವರನ್ನು ಹಾಗೆ ನಡೆಸಿಕೊಂಡಿತ್ತು ಅದು ನನಗೆ ಅರ್ಥಾವೂ ಆಗುತ್ತಿತ್ತು … ….ಅಲ್ಲೂ ಅದೇ ವರ್ಷಕ್ಕೊಂದು  ಬಟ್ಟೆ …ಆದರೆ ಗುರಿಮಾತ್ರ secure  ಲೈಫ್ .. ಸುಖಿಸುತ್ತಾ, ಗಳಿಸುತ್ತಾ  ಕೇವಲ ಹಾಯಾಗಿ  ಬದುಕುವುದು ..ಬದುಕುವ ಸಂತೋಷಕ್ಕೆ ಬದುಕುವುದು …ಅದನ್ನು ಗಳಿಸುತ್ತಿದ್ದಂತೆ ತಲೆ ಹತ್ತಿಕೂತ  ಅಹಂಕಾರ , achieve ಮಾಡಿದ  ಹೆಮ್ಮೆ ….. ಇನ್ನಷ್ಟು ಬದುಕಬೇಕು  ಎನ್ನುವ ಜೀವನ ಪ್ರೀತಿ..ಕಳಕೊಂಡಿದ್ದನ್ನು ತುಂಬಲು, ಇನ್ಯಾವತ್ತು ಕಳೆದುಕೊಳ್ಳದಿರಲು ಇನ್ನಿಲ್ಲದ ಮುದ್ದು   ..ಕೇವಲ ಸಂತೋಷ, ಸುಖ, ದರ್ಪ, ಅಹಂ ಅಷ್ಟೇ  ಬದುಕು..ಗಂಡುಮಕ್ಕಳು, ಹೊಟ್ಟೆಯಲ್ಲಿ ಹುಟ್ಟಿದ ಹೆಣ್ಣುಮಕ್ಕಳು ಹಾಯಾಗಿರಬೇಕು, ಮೆರೆಯಬೇಕು ಕಣ್ಣಿಗೆ ಕುಕ್ಕುವ ಸ್ವಾರ್ಥ !!!!

ನನ್ನ perspective ಅಲುಗಾಡುವ   ಹಂತಕ್ಕೆ ತಲುಪಿಬಿಟ್ಟಿತು …. ಅಯೋಮಯ…ಕಲಸು ಮೇಲೋಗರ ..
ಎಷ್ಟು ಸುಲಭ ಬದುಕೋದು.. ಹಾಗಿದ್ದರೆ ಕಷ್ಟ ಯಾಕೆ ಪಡಬೇಕು.. ಪ್ರತಿದಿನ ಅಷ್ಟೆಲ್ಲಾ ಯಾಕೆ ಹೋರಾಟಮಾಡಬೇಕು .
ಜೀವನ ಎಷ್ಟು ಸುಲಭ ಅಂದರೆ….. ಇಷ್ಟು ಲೈಟ್ ಆಗಿ ತೆಗೆದುಕೊಂಡು   ಆರಾಮಾಗಿ , ಆನಂದವಾಗಿ ಬದುಕಬಹುದು ಎಂದರೆ… ಹಾಗೆ ಸುಮ್ಮನೆ ಹಕ್ಕು, ಅಧಿಕಾರ ಚಲಾಯಿಸಬಹುದು ಎಂದರೆ !!!!
ಯಾರಿಗೆ ಹಾಯಾಗಿ ಇದ್ದುಬಿಡಲು ಇಷ್ಟವಾಗುವುದಿಲ್ಲ …ಎಷ್ಟು  ಮಾಡಿದರು ಮುಗಿಯದ ದೂರುಗಳು ಸಿಗದ ನೆಮ್ಮದಿ ..ಶ್ರಮವನ್ನು ಯಾರು ಗುರುತಿಸುವುದಿಲ್ಲ ಕಡೆಗೆ ಬೈಗುಳವೂ ತಪ್ಪೊಲ್ಲ …

ಪೋಷಕರು ಎಷ್ಟು ಮುತುವರ್ಜಿಯಲ್ಲಿ ಸ್ಕೂಲು, ಕಾಲೇಜು ಹುಡುಕಿ ಸೇರಿಸಿ, ಕ್ಯೂ ನಿಂತು ಅಡ್ಮಿಶನ್ ಮಾಡಿರುತ್ತಾರೆ , ಸಾಲ ಮಾಡಿ ಫೀಸ್ ಕಟ್ಟಿರುತ್ತಾರೆ .ಎಂತೆಂತ ಶ್ರೀಮಂತರೂ, ಕೋಟ್ಯಾಧೀಶ್ವರರು, ರಾಜಕಾರಣಿಗಳು ಹೇಗಾದರೂ  ತಮ್ಮ ಮಕ್ಕಳು ಕೇವಲ ಇಂಜಿನಿಯರ್ ಅನಿಸಿಕೊಳ್ಳಲಿ ಎಂದು ಎಷ್ಟೆಲ್ಲಾ ಲಕ್ಷ ಖರ್ಚುಮಾಡಿ ಸೀಟುಕೊಡಿಸಿರುತ್ತಾರೆ …ಡಾಕ್ಟರ  , ಆಫೀಸೆರ್ಗಳು  ಸ್ವಂತ  ಸಮಯಕ್ಕೆ  ಬೆಲೆಕೊಡದೆ  , ಕತ್ತೆಯಂತೆ  ದುಡಿಯುತ್ತಿರುತ್ತಾರೆ    …
ನಮ್ಮಂತ ಸಾಫ್ಟ್ವೇರ್ ಇಂಜಿನಿಯರ್ ಗೆ laptop ಕೊಟ್ಟಿರುತ್ತಾರೆ , ಇಲ್ಲಿಂದ ಮತ್ಯಾವುದೋ ದೇಶದವರೊಂದಿಗೆ ಸಂಪರ್ಕಿಸಲು ಸಕಲ ಸವಲತ್ತು ಮಾಡಿಕೊಡುತ್ತಾರೆ, ಕಾರು facilities  ನೀಡುತ್ತಾರೆ ..ಆದರೆ ನಾವು 24 *7  ಲಭ್ಯವಿದ್ದು ಪರಿಪೂರ್ಣ ಕೆಲಸದಲ್ಲಿ ತೊಡಗುವಂತಿರಬೇಕು   ಅಷ್ಟೇ ….ಸದಾ ಸಂಪರ್ಕದಲ್ಲಿರಬೇಕು  ..ಮದ್ಯ ರಾತ್ರಿ issue  ಬಂದರು ಎದ್ದು ಬಗೆಹರಿಸಲು  ಸನ್ನದ್ದರಿರಬೆಕು ..ಕೊಟ್ಟ deadline ಒಳಗೆ ಕೆಲಸ ಮುಗಿಸಬೇಕು …. ಜ್ಞಾನಕ್ಕೆ ಸಂಬಳ !!!!!

ಇಲ್ಲಿನ ಪದ್ದತಿಗಳು :ಕೆಲಸ ಮಾಡುವವರ ಜೊತೆ ಮಾತಾಡುವುದೋ ಬೇಡವೋ ಇವರು ನಿರ್ಧಾರ ಮಾಡುತ್ತಾರೆ … affair  ಅನ್ನೋ ನೀಚಕಳಂಕ ಕಟ್ಟಿ ಹಿಂಸಿಸುತ್ತಾರೆ… ಮನೆ ಖಾಲಿ ಮಾಡಿದ್ದಕ್ಕೆ, comapany  ಬದಲಾಯಿಸಿದ್ದಕ್ಕೆ ರಹಸ್ಯ ಕಂಡು ಹಿಡಿಯುತ್ತಾರೆ ….ಯಾವ perspective ಗಳಲ್ಲಿ ಅರ್ಥಮಾಡಿಕೊಳ್ಳೋದು  ಇವುಗಳನ್ನ  ?
ಜೀವನದ ಕುರಿತ perspectiveಗಳಲ್ಲಿ ಏನೇ ವ್ಯತ್ಯಾಸಗಳಿದ್ದರು , ಹೆಂಡತಿಯನ್ನು ಪ್ರೀತಿಸುವುದಕ್ಕೆ , ನಡೆಸಿಕೊಳ್ಳುವುದಕ್ಕೆ ಮನುಷ್ಯತ್ವ, ಭಾವನಾತ್ಮಕತೆಬೇಕು ….ಅಮಾನವೀಯವಾಗಿ, ಆಘಾತಕಾರಿಯಾಗಿ, ಅವಮಾನಕಾರಿಯಾಗಿ, ಆಕ್ರಮಣಕಾರಿಯಾಗಿ  ನಡೆಸಿಕೊಂಡು ಅದನ್ನೇ ನಾವು ಬದುಕುವ ರೀತಿ, ಹೆಣ್ಣು ಬಾಳಬೇಕೆಂದರೆ ಸಹಿಸಿಕೊಳ್ಳಬೇಕಷ್ಟೇ ಎಂದು ನಿರ್ಭಂದಿಸುವುದು ಎಷ್ಟು ಸರಿ !!!!!
ಏನೋ ಪಡೆಯಲು mindgames ಜಲಾಯಿಸುವುದು ಪ್ರೀತಿಯ ನಿಷ್ಠೆಗೆ ವಿರುದ್ದ …

ನನ್ನ ತಾಯಿಗೆ ಹೇಳುತ್ತಿದ್ದೆ …. ಹೆಣ್ಣು ಮಕ್ಕಳು ಯಾಕೆ ಓದಬೇಕು … ಹೋದಮನೆಯಲ್ಲಿ ಕೆಲಸ ಮಾಡಲು encouragement  ಸಿಗುವುದೋ ಇಲ್ಲವೋ ಖಾತ್ರಿ ಇಲ್ಲದಾಗ …
ಘನತೆಯಿಲ್ಲದೇ   ಅವೆಲ್ಲಾ ಹಾದರವಾಗುವಾಗ.. ಎಷ್ಟು ಆರಾಮಾಗಿ ಕಾಲತಳ್ಳುತ್ತ, ಶೋಕಿ ಮಾಡಿಕೊಂಡು  , ದರ್ಪ ತೋರಿಸಿಕೊಂಡು, ಚಾಡಿಹೇಳಿಕೊಂಡು ಗಂಡು  ಹೈಕಲು ಕೆಲಸವಿಲ್ಲದೆ  ಆನಂದದಲ್ಲಿ ತಿರುಗುತ್ತಾರೆ ….ಒಂದಷ್ಟು ಮನೆಕೆಲಸ, makeup , ನಗುನಗುತ್ತ ಓಡಾಡಿಕೊಂಡು , ನಾಟಕ ಮಾಡಿಕೊಂಡು ಬಾಳಬಹುದಲ್ಲ?
….. 20  ಸಾವಿರ ದುಡ್ಡಿಗೆ ಅಷ್ಟೆಲ್ಲ ದಣಿಸಿಕೊಳ್ಳುವ ಬದಲು ಆರಾಮಾಗಿ ಏನು ಮಾಡದೆ ಬಡ್ಡಿ ಎಣಿಸಬಹುದು,   ಬದುಕುವ ಸುಲಭ ವಿಧಾನವಲ್ಲವ ಅದು ?ದುಡಿಯುವುದು ಅಷ್ಟು ಸುಲಭ … ಓದ್ದಿದ್ದೆ ಮುಳುವಾಯಿತಲ್ಲ ನನ್ನ ಪಾಲಿಗೆ ….ನಾನೇನು ತಪ್ಪು ಮಾಡಿದೆ… ನನ್ನ ಬದುಕನ್ನೇ ಬಲಿಹಾಕಿದರು ..ಮಾನಕಳೆದರು … ನೆಮ್ಮದಿ ಅಳಿಸಿದರು..ಹಿಂಸೆ ಮಾಡಿದರು..ಕೇವಲ ನಾಲ್ಕು ಕಾಸಿನ ಅಧಿಕಾರಕ್ಕೆ !!!  

 ಒಂದೇ ಮಾತಿನಲ್ಲಿ ಹೇಳಿದರು  ಏನು ಮಾಡದೆ ಬದುಕುವುದು ಒಂದು ಬದುಕಾ? ನಮಗೆ ನಮ್ಮ ನಂಬಿಕೆಗಳೇ ಇರಲಿ… ದುಡಿದೆ ತಿನ್ನೋಣ ….
… ಆಕೆ ಹಳೆಕಾಲದವಳು… ಆದರು ಎಷ್ಟು ದೃಡವಾಗಿ ಹೇಳುತ್ತಾಳೆ ……ನಾವ್ಯಾರು ಕಾಣದ, ಕೇಳದ ವಿಧಾನ ಅವರದು …

ನಿಜ ಎಷ್ಟೇ ದುಡ್ಡು ಕೊಪ್ಪರಿಗೆಯಲ್ಲಿ ಬಿದ್ದಿದ್ದರು , ಏನೆಲ್ಲಾ ಸವಲತ್ತುಗಳು ಇದ್ದರು ಮನುಷ್ಯನಿಗೆ ಮನೋಸಹಾಜ ಸ್ವಾಂತಂತ್ರ್ಯವಿಲ್ಲದಾಗ, ಘನತೆ ಇಲ್ಲದಾಗ , ಗೌರವ , ಬೆಲೆ ಇಲ್ಲದಾಗ , ಸದಾ ಬೈಗುಳಗಳಿಗೆ, ಇನ್ಯಾರದ್ದೋ ಕಟ್ಟಪ್ಪಣೆಗಳಿಗೆ ಹೆದರಿ  ನಡುಗಬೇಕೆಂದರೆ ಅದು ನೆಮ್ಮದಿ ಇಲ್ಲದ ದಾಸ್ಯದ ಜೀವನ …ಚಿನ್ನದ ಪಂಜರ .. ಕಿರುಕುಳ

ಅವರ perspective  ಬೇರೆ…
ಹೆಣ್ಣುಮಕ್ಕಳು ಗಂಡನ ಮನೆಯಲ್ಲಿದ್ದು ಸಾಮಾಜಿಕವಾಗಿ ಮರ್ಯಾದೆ ಉಳಿಸಿಕೊಳ್ಳಬೇಕೆಂದರೆ ಎಲ್ಲದಕ್ಕೂ ತಲೆತಗ್ಗಬೇಕು  ….
ತಾಳೆ ಕಟ್ಟಿದ ತಕ್ಷಣ ಅಸಹಾಯಕರಾಗಿ ಬಿಡುತ್ತಾರೆ … ಅಸಹಾಯಕತೆಯನ್ನು ಅಂಕೆ ಮಾಡಿಕೊಂಡು ಹೇಗೆ ಬೇಕಾದರೂ ಗಂಡಿನ ಕಡೆಯವರು ಆಡಿಸಬಹುದು …ಅವರ ಮನಸಿನ ಇಚ್ಛೆಯಂತೆ ಪ್ರತಿಯೊಂದು ನಡೆಯಬೇಕು ಅಷ್ಟೇ ..
ಇನ್ನು ಕೆಲವರ perspectiveಗಳಿವೆ , ಕೊಡುವುದೆಲ್ಲವ, ಇರುವುದೆಲ್ಲವ, ಮುಂದಕ್ಕೆ ಬರಬೇಕಾಗಿರುವುದನೆಲ್ಲ ಈಗಲೇ  ಕೊಟ್ಟುಬಿಟ್ಟರೆ , ಅದನ್ನು ನೋಡಿದ ನಂತರ ಅವರಿಗೆ ಅವಳು ಮನೆ ತುಂಬಲು ಬಂದವಳು ಎಂದು ಗ್ಯಾರಂಟಿ ಸಿಗುತ್ತದೆ… ನಿಮ್ಮ ಮಗಳಿಗೆ ಅಲ್ಲವ ಸೇರುವುದು , ಅವಳು ಸುಖವಾಗಿರಲಿ, ಎನ್ನುತ್ತಿರುತ್ತಾರೆ … ಸರಿಯೋ ತಪ್ಪೋ ಹೇಳಲಾಗದ perspective …

ಇನ್ನು ಗಂಡಸರದ್ದು … ಅವರ ಮನಸಲ್ಲಿಯಿರುವ  ಸಿದ್ದ templateನಂತೆ ವರ್ತಿಸಬೇಕು… ಹಾಗೆ ಮಾತಾಡಬೇಕು, ಹಾಗೆ ಕೂರಬೇಕು, ಹಾಗೆ ನಡೆದುಕೊಳ್ಳಬೇಕು …
ಸಾಧ್ಯವ, ಸರಿಯ, comfortable  ಇದ್ದಾಳ ಅವೆಲ್ಲ ಯೋಚನೆಯೇ ಇಲ್ಲ … ಸ್ವತ್ತು ಎನ್ನುವಂತೆ ಉಪಯೋಗಿಸಲು ಶುರು ..
ಕೂತರು ನಿಂತರು ತಪ್ಪು ಹುಡುಕುವುದು ಸುಲಭ ..ದೂರುವುದು ಮತ್ತೂ ಸುಲಭ … ಏನು ಸಿಕ್ಕಲಿಲ್ಲ ಎಂದರೆ ಮಾನಕಳೆಯುವುದು, ಚಾರಿತ್ರ್ಯೇವಧೆಯಂತ ಹೇಯ ಕೃತ್ಯವಿದ್ದೆವಿರುತ್ತದೆ ….  ಮನೆಯಿಂದ ಓಡಿಸಿ ಸರೀಯಿರಲಿಲ್ಲ ಬೇಡ ಎಂದರೆ ಮುಗಿಯಿತು …ಮುಗಿಸಿದಂಗೆ
 ಹೆಣ್ಣು ಮಗಳನ್ನು ಸಂಸಾರದಲ್ಲಿ ಮುಂದುವರೆಯುವಂತೆ ಮಾಡಲು ಏನೇ ಆದರು ಹೆದರಿ,ಎಲ್ಲದಕ್ಕೂ ಪ್ರತೊಯೋಬ್ಬರು  ಬಗ್ಗಬೇಕು..ಗಂಡಿನ ಬೆಲೆಯಿರುವುದೆ ಅಲ್ಲಿ … … ಅವರ perspective …

ಜನರಿಗೆ ಅರ್ಥವಾಗುತ್ತದೆ .. ಗಂಡಿನಕಡೆಯವರದ್ದು  ಏನೇ ತಪ್ಪಿದ್ದರೂ ಅದನ್ನು ತಪ್ಪು ಅಂತ ಎತ್ತಿ ತೋರಿಸಲು ಆಗುವುದಿಲ್ಲ …ಅವರ ಅಹಂಗೆ ನೋವಾಗುತ್ತದೆ ..ನಾವು ತಪ್ಪು ಮಾಡಿದ್ದೇವೆ ಅಂತ ಅವರು ಒಪ್ಪಿಕೊಳ್ಳೋಲ್ಲ… ಹುಡುಗಿಯ ಜೀವನ ಹಾಳಾಗಬಾರದು ಎಂದರೆ ಹಲ್ಲುಕಚ್ಚಬೇಕು…ಅವರು ಪ್ರತಿಪಾದಿಸುವುದನ್ನೇ ಸರಿ ಎನ್ನಬೇಕು, ಹುಡುಗಿಗೆ ಬುದ್ಧಿ ಹೇಳಬೇಕು , ಅವಳನ್ನೇ ಬಲೀ ಕಾ ಬಕ್ರ ಮಾಡಬೇಕು …..ಆಗಲಷ್ಟೆ ಅವಳ ಜೀವನ ಉಳಿಯುತ್ತದೆ …
ಜನರ ಅನುಭವ ದೊಡ್ಡದು , ಯಾರು ಮೂರ್ಖರಲ್ಲ  
ಒಳಗೆ ಅದನ್ನೇ ಮಾಡಿದವರು ಈಚೆ  ಬಂದಾಗ ಮಾತು ತೆರೆದರು…   
ಹರೆಯದ ಹುಡುಗ ಸಣ್ಣಸಣ್ಣ ವಿಷಯಕ್ಕೆ ಹೆಂಡತಿಯನ್ನು ಪೀಡಿಸಿ, ಕಾಡಿಸುತ್ತಾನೆ ಎಂದರೆ ಉದ್ದೇಶ ಸ್ಪಷ್ಟ …ಕಾರಣಗಳು ಅರ್ಥವಾಗಿವೆ …ಹೆಂಡತಿಯನ್ನು ಕಳೆದುಕೊಳ್ಳುವುದು ಹೊಸದಾಗಿ ಮದುವೆಯಾದವರಿಗೆ  ಅಷ್ಟು ಸುಲಭವಲ್ಲ  ..ಅಗತ್ಯದ ಅಭಾವ ಇದ್ದರು ಇರಬಹುದು .ಅವರಿಗೆ ಬೇಕ್ಕಿದ್ದಿದ್ದು ಪಡೆದುಕೊಳ್ಳಲು ಇವೆಲ್ಲಾ ನಾಟಕ ..ಬುದ್ಧಿವಂತರ  ನಾಟಕ ..ಗುದ್ದಾಡಿ  ಆಡುವಂತದಲ್ಲ ಇವು
ಇಡೀ ಜನಾಂಗ ವಿಷಮಯವಾಗಿದೆ … ನಮ್ಮಂತ ಜನ ಇವರಲ್ಲ, ಮಾನ ಮರ್ಯಾದೆ, ಧರ್ಮ, ಕರ್ಮ, ಮನುಷ್ಯತ್ವ,ಪ್ರೀತಿ  ಎಲ್ಲಾ ಬಿಟ್ಟಾಗಿದೆ …. ಎಲ್ಲಾ ಮಟ್ಟಕ್ಕೂ ಇಳಿಯಲು , ಒಬ್ಬರನ್ನೊಬ್ಬರು ಕಾಪಾಡಲು ಅವರು ಸಿದ್ದ , ಇನ್ನೊಬ್ಬರನ್ನು ಮುಗಿಸಲು ಎಲ್ಲ ವಿಧದಲ್ಲೋ ಅವರು ಸಿದ್ದ ..
ಗುದ್ದಾಟ ಕಷ್ಟ , ನಮ್ಮ ಮೈಗೆ ರಾಚುತ್ತದೆ
ಈ ತರದ ಜನರಿಗೆ ಕಾಲವೇ ಮುಳುವಾಗುತ್ತದೆ..ಅನೀತಿ, ಅನ್ಯಾಯಗಳು ಅವರ ಮನೆಯನ್ನೇ ಹೊಡೆಯುತ್ತವೆ …
ನಿನ್ನ ಹಣೆಬರಹ ಸರಿ ಇಲ್ಲ …ತುಂಬಾ ಕಷ್ಟ ಅಂತ ಜಾಗದಲ್ಲಿ ಬದುಕೋದು  
Perspective ಬದಲಾಗಿತ್ತು ಜನರದ್ದು  ..

 ಅವಳೆಂದಳು ಹೆಂಡತಿಯೆನ್ನುವ   ಚೂರೇ ಚೂರು ಸೆಂಟಿಮೆಂಟ್ , ಅಟ್ಯಾಚ್ಮೆಂಟ್ , emotion ಇದ್ದಿದ್ದರೆ ಅವನು ಹಾಗೆಲ್ಲ ಕೀಳಾಗಿ, ಕೊಳಕುಕೊಳಕಾಗಿ   ನಡೆದುಕೊಳ್ಳುತ್ತಿರಲಿಲ್ಲ   .. ಹೀನವಾಗಿ ನಡೆಸಿಕೊಳ್ಳುತ್ತಿರಲಿಲ್ಲ…
ಗೌರವ , ಘನತೆ, ನೆಮ್ಮದಿ , ಆತ್ಮವಿಶ್ವಾಸವಿಲ್ಲದ ಜಾಗದಲ್ಲಿ ಮನುಷ್ಯ ಆರೋಗ್ಯಕರವಾಗಿ ಬದುಕಲು ಸಾದ್ಯವಿಲ್ಲ … ಬದಲಾಯಿಸಲು ಸಾದ್ಯವಿಲ್ಲದ ಉದ್ಧಟ ಜನ …
ಅದೆಲ್ಲಾ ಕೆಟ್ಟಕನಸು ಎಂದು ಮರೆತುಬಿಡು …ನೆನಪು ತೊಳೆದುಕೊಂಡುಬಿಡು  …ಅವಳ perspective

ನಿಜ… .
ಅವನಿಗೆ ನನ್ನ ಮೇಲೆ ಯಾವ emotions ,attachment , ಫೀಲಿಂಗ್ಸ್ ಇಲ್ಲದಿರಬಹುದು…ಅದಕ್ಕಾಗೆ ಹಾಗೆಲ್ಲ ನಡೆದುಕೊಂಡ … ನನ್ನ ಅವನು ಪ್ರೀತಿಸಲಿಲ್ಲ ನಿಜ …. ಆದರೆ ನಾನು ಅವನ್ನನ್ನು ಪ್ರೀತಿಸಿದ್ದು ಸುಳ್ಳಲ್ಲವಲ್ಲ ….ನನ್ನ ಭಾವನೆಗೆ ಕಲ್ಮಶವಿಲ್ಲವಲ್ಲ …ನನ್ನ  innocence ಹಾಳಾಗೋದು  ನನಗೆ  ಬೇಡ ,ನನ್ನ ಭಾವುಕತೆಗೆ ಅಘಾತವಾಗೋದು ನನಗೆ ಬೇಡ  …ಅದಕ್ಕೆ  ನಾನು  ಅವನನ್ನು  ಈಗಲು ಪ್ರೀತಿಸುತ್ತೇನೆ  ..
ಪ್ರತಿ ಮನುಷ್ಯನಲ್ಲೂ ಮನುಷ್ಯತ್ವವಿರಲೇಬೇಕು…. ಅದಿಲ್ಲಾ  ಎಂದರು ಕಡೆಪಕ್ಷ ಅಗತ್ಯಗಳು ಇದ್ದೇ ಇರುತ್ತವೆ . ..ಯಾವ ಮನುಷ್ಯನು ಧೀರ್ಘವಾಗಿ ಒಂಟಿತನ, ಏಕಾಂಗಿತನ ಹೇರಿಕೊಂಡು ಬದುಕಲು ಸಾದ್ಯವಿಲ್ಲಾ…. ..
ಯಾಕೆ ಮನುಷ್ಯ ನೆಮ್ಮದಿಯನ್ನು ಹೊಂದುವ,ನೆಮ್ಮದಿಯನ್ನು ನೀಡುವ ಬಗ್ಗೆ ಪ್ರಯತ್ನ ಪಡುವುದಿಲ್ಲ …ದುಡ್ಡೇ ಯಾಕೆ ಮುಖ್ಯವಾಗಿಬಿಡುತ್ತದೆ ..ರಾಗ, ದ್ವೇಷ, ಸೇಡು ಕಾಡುತ್ತದೆ… ಸಾಂಸಾರಿಕ ಜೀವನದ ಉದ್ದೇಶ ಪ್ರೀತಿ ಮತ್ತು ಗೌರವವಾಗಿರದೇ ಏನೇನೋ ಮದ್ಯೆ ಯಾಕೆ  ಬರುತ್ತವೆ ..ಜನರಿಗೆ ತಮ್ಮ ಜವಾಬ್ದಾರಿ, ಕರ್ತವ್ಯ ಯಾಕೆ ಅರ್ತವಾಗೊಲ್ಲಾ ..ಗೆದ್ದು ಏನು ಸಾದಿಸುತ್ತಾರೆ ..ಸೋಲಿಸಿ ಏನು ಪಡೆಯುತ್ತಾರೆ …ಖಾಸಿಗಿತನ ಯಾಕೆ ದೋಚುತ್ತಾರೆ …ಮರ್ಯಾದೆ, ಮಾನ ಕಳೆಯುವ ಹೇಯ ಮಟ್ಟಕ್ಕೆ ಯಾಕೆ ಇಳಿಯುತ್ತಾರೆ ..
ಬದುಕಲು ಬೇಕಿರುವುದು ನೆಮ್ಮದಿ, ಗೌರವ, ಪ್ರೀತಿ , ವಿಶ್ವಾಸ , ನಂಬಿಕೆ ಮತ್ತು ಕೇವಲ ಮೂರು ಕಾಸು
ಇದು ನನ್ನ perspective ಯಾರಿಗೂ ಅರ್ಥವಾಗದ್ದು
 
   

 

 

confuse ಮಾಡೋ concept ಗಳು

ನನ್ನನ್ನು ವಿಪರೀತ  ಜಿಜ್ಞಾಸೆ, ಚಿಂತೆ , ಚಿಂತನೆ ಮತ್ತು confusion ಗೆ ಒಳಪಡಿಸಿದ್ದು ಅಂದರೆ the  concept  of ಗಂಡಸುತನ and  ಸಂಸಾರಸ್ತೆ……

ಮದುವೆಯಾಗಿ ಹನ್ನೊಂದು ತಿಂಗಳು  ಸಂಸಾರ ಮಾಡಿದ ನಾನು ಗಂಡಸುತನವೆಂದರೇನು ಅಂತ ಪ್ರಶ್ನೆ ಮುಂದಿಟ್ಟುಕೊಂಡು ಕುಳಿತರೆ ಜನ ನಗುತ್ತಾರೇನೋ……ನನಗೂ ನಾಚಿಕೆಯಾಗುತ್ತದೆ …

ಆದರೆ ಬಹಿರಂಗವಾಗಿ ಆ ವಿಷಯವನ್ನು ಚರ್ಚಿಸಿ ಚರ್ಚಿಸಿಯೇ ಅವರು ಅದನ್ನು ಉದ್ದೀಪನಗೊಳಿಸಿದ್ದರು…
ಮೊದಲು  ಸಂಸಾರಸ್ತೆ ವಿಷಯ :
ಅವರುಗಳ ಪ್ರಕಾರ ಸಂಸಾರಸ್ತೆ ಎಂದರೆ, ಒಂದು ದಿನವೂ ತಪ್ಪಿಸದೇ ಅಡಿಗೆ ಮಾಡುವವಳು, ಪೂಜೆ ಮಾಡುವವಳು, ಮತ್ತು ಮನೆ ಕ್ಲೀನು ಮಾಡುವವಳು …. ಗಂಡನನ್ನು ಬಿಟ್ಟುಕೊಡದೆ ಲಾಭಮಾಡುತ್ತ, ಸಹಿಸಿಕೊಳ್ಳುವವಳು…ನಗುನಗುತ್ತಾ ಮಕ್ಕಳನ್ನು ಹಡೆಯುವವಳು….

ಗಂಡಸಾದ ಅಪ್ಪ, ಹೆಂಗಸಾದ ಅಮ್ಮ ಅಡಿಗೆ ಮನೆಗೆ ನನ್ನನ್ನೆಂದು ಕಟ್ಟಿ ಹಾಕುತ್ತಿರಲಿಲ್ಲ
ಆದರು ನನಗೆ  ಎಷ್ಟೊಂದು cuisines ಬರುತ್ತಿತ್ತು … tv ಯಲ್ಲಿ ತೋರಿಸುತ್ತಿದ್ದ ಅಡಿಗೆ ಕಾರ್ಯಕ್ರಮ, ಬ್ಲಾಗ್ ಗಳಲ್ಲಿನ ರೆಸಿಪಿ ನೋಡಿ  ಅಡಿಗೆ ಬಗ್ಗೆ ಒಳ್ಳೆ   ಅಭಿರುಚಿ ಬೆಳೆಸಿಕೊಂಡಿದ್ದೆ… ಎನಾಕಿದರೆ ಏನಾಗಬಹುದು logic ತಿಳಿಯಿತು .  ನೀನು ಸುಮ್ಮನೆ ಕೈ ಆಡಿಸಿ ಬಿಡು ಟೇಸ್ಟ್ ಬದಲಾಗುತ್ತದೆ , ಅವಳ ಕೈ ಅಡುಗೆ ತಿಂದು  ತಿಂದು ಬೋರ್ ಆಗಿದೆ ಅಂತ ಪೂಸಿ ಹೊಡೆದು ಭಾನುವಾರಗಳಂದು ಚಿಕನ್ ಐಟೆಮ್ಸ ಮಾಡಿಸುತ್ತಿದ್ದರು ಅಪ್ಪ ..  ಆಲ್ಮೋಸ್ಟ್ ಎಲ್ಲ ವರೈಟಿಗಳ  ಚಿಕೆನ್ ಅಡಿಗೆ ಟ್ರೈ ಮಾಡಿದ್ದೇನೆ… ಹಳೆ ಕಾಲದವರಿಗೆ ಬರದ ಹೊಸ ಅಡಿಗೆಗಳಾದ ನಾರ್ತ್ ಇಂಡಿಯನ್  ಗ್ರೇವಿಗಳು, sandwich ,ಪಾನಿಪುರಿ , ಗೋಬಿ ಮಂಚೂರಿ , ಪನ್ನೀರ್ ಟಿಕ್ಕ, ಅಲೂ ಕಬಾಬ್ ಅಂತೆಲ್ಲ ಪ್ರಯೋಗ  ಮಾಡುತ್ತಿರುತ್ತೇನೆ … ಸಲಾಡ್ , shake , ಸೂಪ್ ಗಳನ್ನೂ ಮನೆಗೆ ಪರಿಚಯಿಸಿದ್ದು ನಾನೇ …. ಬದುಕೋಕೆ ಬೇಕಿರೋಷ್ಟು  ಅಡಿಗೆ ಜ್ಞಾನವಿದೆ … ಮನೆ ಕ್ಲೀನುಬರುತ್ತದೆ …
ಉನ್ನತ ಸ್ಥಾನದ್ದಲಿರುವ  ಹೆಣ್ಣು ಮಂತ್ರಿ, ಡಾಕ್ಟರ್ , ಲಾಯೆರ್ ,ಅಧಿಕಾರಿಗಳು ಬಿಡುವಿಲ್ಲದೆ ಅವನೆಲ್ಲ ಮಾಡಲ್ಲ ಎಂದರೆ ಅವರೆಲ್ಲ ಸಂಸಾರಸ್ತೆಯರೇ ಅಲ್ಲವ ಅಂತ ?

ಇನ್ನು ಪೂಜೆ … ಮದುವೆ ಆಗುವವರೆಗೂ ಪ್ರತಿ ಶನಿವಾರ ತಪ್ಪಿಸದೇ ಶನಿಮಹಾತ್ಮ, ಆಗಾಗ ನಾಗರ  ಪೂಜೆ ಮಾಡುತ್ತಿದ್ದೆ … ಪೂಜೆ ಮಾಡಿ ಓದಲು ಕೂತರೆ ಜಾಸ್ತಿ ಮನಸಿಗೆ ಇಳಿಯುತ್ತದೆ ಅಂತ ಅಪ್ಪ  ಹೇಳಿದ ಮೇಲೆ ಸ್ಕೂಲ್ ಕಾಲೇಜ್ ಗಳಲ್ಲಿ ದಿನಾ ಮನೆ ಹತ್ತಿರದ ಗುಡಿಗೆ ತಪ್ಪಿಸದೇ ಹೋಗಿ ಬಂದೋ ಇಲ್ಲ ಮನೆಯಲ್ಲೇ ಪೂಜೆ ಮಾಡೋ ಓದಲು ಕೂರುತ್ತಿದ್ದೆ .. ಅಪ್ಪನ ಹುಷಾರು ತಪ್ಪಿದಾಗ, ಅವರಿಗೋಸ್ಕರ ಹರಕೆ ಹೊತ್ತು ದಿನಾ ದೇವಸ್ಥಾನಕ್ಕೆ ಹೋಗಿ ಬರುತ್ತಿದ್ದೆ … ಸೈನ್ಸ್ ಸ್ಟುಡೆಂಟ್ ಆದರು ಹರಕೆ ಅಂತೆಲ್ಲ exam  ಟೈಮ್ ನಲ್ಲಿ  , ಮನೆಗೆ ಕಷ್ಟ ಬಂದಾಗ, ಯಾರಾದರು ಹುಷಾರು ತಪ್ಪಿದಾಗ, ಇಂಟರ್ವ್ಯೂ ಬಂದಾಗ ಹೊತ್ತು ತೀರಿಸುತ್ತಿದ್ದೆ …ಮದುವೆ ಸೆಟ್ ಆದರೆ ಮದುವೆಗೆ ಮುಂಚೆಯೇ ಮನೆದೇವರಿಗೆ ಹೋಗಿ ಬರುತ್ತೇನೆ ಅಂತ ಹರಕೆ ಹೊತ್ತುಕೊಂಡಿದ್ದನ್ನು ಅವನ ಜೊತೆ ಹೋಗಿ ತೀರಿಸಿದ್ದೆ …
ಆದ್ಯಾತ್ಮವೆಂದರೆ ಬರಿ ಪೂಜೆ ಪುನಸ್ಕಾರ ಅಲ್ಲ, ಸಂಕಟ ಬಂದಾಗ ವೆಂಕಟ ರಮಣ ಅನ್ನಬಾರದು , ಧ್ಯಾನ, ಮೆಡಿಟೇಶನ್ ಕೂಡ ಅಧ್ಯಾತ್ಮವೇ ಅಂತೆಲ್ಲ ತಿದ್ದುತಿದ್ದವರು ಅಪ್ಪ ಮತ್ತು ದೊಡ್ಡಕ್ಕ ….
 ಓದುತ್ತ ಓದುತ್ತ ದ್ವೈತ , ಅದ್ವೈತ , ರೂಮಿ, ಓಶೋ , ರಜನೀಶ್ ,ಅಕ್ಕ ಮಹಾದೇವಿ, ಬಸವಣ್ಣಾ , ವಿವೇಕಾನಂದ , ರಮಣಮಹರ್ಷಿ, ಸ್ಥಾವರ  ಪೂಜೆ, ಜಂಗಮ ಪೂಜೆ , ಶಬರಿ ಭಕ್ತಿ , ಕೃಷ್ಣನಿಗೆ ವಿಧುರ ಮಾಡಿದ ತುಳಸಿ ಪೂಜೆ, ಶಿವನಿಗೆ ಬೇಡ ಮಾಡಿದ  ಬಿಲ್ವ ಪೂಜೆ ಏನೇನೋ different concept ಗಳ ಬಗ್ಗೆ ತಿಳಿಯುತ್ತಿದ್ದೆ….
ಪ್ರಾರ್ಥನೆಯ ಪ್ರಭಾವಗಳ ಬಗ್ಗೆ ತಿಳಿದಿದ್ದೆ …
ಗಾಯತ್ರಿ ಮಂತ್ರ, ಅನುಮಾನ ಚಾಲಿಸ, ಕಾಮಿದ್ದಾರ್ತ   ಪ್ರಧಾಯಿನಿ , ನೀಲಾಂಜನ ಸಮಾಭಾಸ, ಕೌಸಲ್ಯ ಸುಪ್ರಜಾ  ಚೆನ್ನಾಗೆ ಬರುತ್ತಿದ್ದವು …
ನನಗೆ ತೀರ ಕಾಡುವುದು ಅಕ್ಕ ಮಹಾದೇವಿ, ಬಸವಣ್ಣ ಮತ್ತು ಸರ್ವಜ್ಞರು ..
ಪತಿವ್ರತೆಯರಾದ ಅಹಲ್ಯೆಯಾ ಕತೆ, ಮಂಡೋದರಿ , ತಾರ, ಅಶ್ವಿನಿ , ಕುಂತಿಯರ ಕತೆ ಕೂಡ ಗೊತ್ತಿತ್ತು ..ರಾಧೇ  ಕತೆ,ಮೀರಾ ಮಾಧವನ ಬೊಂಬೆಯನ್ನೇ ಪೂಜಿಸಿದ ಕತೆ , ಅಕ್ಕ ಮಹಾದೇವಿ ಸಂಸಾರ ತೊರೆದು ಚೆನ್ನ ಮಲ್ಲಿಕಾರ್ಜುನನನ್ನು ಗಂಡನೆಂದು ಪೂಜಿಸಿದ ಕತೆ …ಇನ್ನು ಅವೆಷ್ಟೋ ಅಂತವು  ಗೊತ್ತಿತ್ತು ..  

ವಾರ ಅಂತ ಕಡ್ಡಿ ಹಚ್ಚಿ , ಹೂ ಮುಡಿಸೋದು ಮಾತ್ರ ಪೂಜೆಯ ?ಮಾಡೋದೆಲ್ಲಾ ಅನಾಚಾರ  ಮನೆಮುಂದೆ ಮಾತ್ರ ಬೃಂದಾವನ ಅಂತ ಏನೋ ಒಂದು ಗಾದೆ ಇದೆ ಹಾಗಾಗ ಬಾರದು ಬದುಕು  ಅಷ್ಟೇ !!!  ದೇವರೇ ಇಲ್ಲಾ ಅಂತ ಅನಿಸುತ್ತಿರುವುದು ಇತ್ತೇಚೆಗೆ ಯಾಕೋ …

ಇನ್ನು ಮಕ್ಕಳನ್ನು ಹೆರುವ ವಿಷಯ …ಅದು ಒಬ್ಬಳ ಮೇಲೆ ನಿಲ್ಲುವಂತದ್ದಲ್ಲ….

software ಇಂಜಿನಿಯರ್ ಆಗಿ ,ಮೆಟ್ರೋ ಹುಡುಗಿಯಾಗಿ , 21 ನೆ ಶತಮಾನದ ಹುಡುಗಿಯಾಗಿ ಗಂಡ ಎಂದರೆ ಡಿಪ್ರೆಶನ್ ಗೆ ಒಳಗಾಗುವಷ್ಟು  ಹೆದರುತ್ತಿದ್ದರು,  ಗಂಡ  ಎಂದರೆ ಭಯ ಭಕ್ತಿ ಇಲ್ಲ ಅಂತ ಸಂಸಾರಸ್ತೆ ಸ್ಥಾನದಿಂದ disqualify ಮಾಡಿದ್ದರು … ಆ ಹೆಂಗಸರ ಪ್ರಕಾರ ಇನ್ನೂ ಹೆದರೋದು ಎಂದರೆ ಹೇಗೆ ?
 ತುಂಬಾ humerous  , witty  ಅಂತ ಕೆಲವರು ನನ್ನ ಬ್ರಾಂಡ್ ಮಾಡಿದ್ದರು ..  ನೀನಿದ್ದರೆ ಮನೇಲೆಲ್ಲಾ ನಗು ಅಂತ ಅಪ್ಪ ಅನ್ನುತಿದ್ದರು… ಒಂದು ದಿನ ನೀನಿಲ್ಲ ಅಂದರು ಮಿಸ್ ಮಾಡಿಕೊಳ್ಳುತ್ತೀವಿ   ಎನ್ನುತಿದ್ದರು ಮನೆಯವರು .. ಅವಳ ತರಹ ನಗುನಗುತ್ತ ಓಡಾಡಿಕೊಂಡಿರು ಅಂತ ನನ್ನ ತೋರಿಸಿ ಬೇರೆಯವರಿಗೆ ಹೇಳುತ್ತಿದ್ದರು  

ನನ್ನ ಜ್ಞಾನಕ್ಕೆ ನಿಲುಕಿದಂತೆ ನಾನು ಜಗಳ ಶುರು ಯಾವತ್ತು ಮಾಡಿರಲಿಲ್ಲ …. ನೆಮ್ಮದಿಯನ್ನು ತೀರಾ desparate ಆಗಿ ಹುಡುಕುತ್ತಿದ್ದೆ ..

ಇನ್ನು ಇವರುಗಳು ಹೇಳುವ ಗಂಡಸು ಎಂದರೇನು ?

ನನಗೆ ಗೊತ್ತಿದ್ದ  ಅಪ್ಪಟ ಗಂಡಸು ಎಂದರೆ ಅಪ್ಪ !!!!!! ಮತ್ತು ಅದಕ್ಕೆ ತಾತ್ಪರ್ಯವೆಂದರೆ ಜವಾಬ್ದಾರಿ….
ಹೆಂಡತಿ ಮಕ್ಕಳು ಅಣ್ಣ ತಮ್ಮ ಅಪ್ಪ ಅಮ್ಮ ತಂಗಿ ಎಲ್ಲರನ್ನು ಒಬ್ಬನೇ ಸಾಕಿ ಒಂದು ಹಂತಕ್ಕೆ ತಂದು ನಿಲ್ಲಿಸಿ ಬದುಕು ರೂಪಿಸಿದವರು…. ಕಡೆವರೆಗೂ ಫ್ಯಾಮಿಲಿಗಾಗಿ ಬಡಿದಾಡಿದವರು….. ನಮ್ಮದು ಪುರುಷ ಪ್ರಧಾನ ಹಿನ್ನಲೆಯ ಫ್ಯಾಮಿಲಿ …ಅಮ್ಮ ಎಂದರೆ ಮನೆಗೆಲಸ, ಅಡಿಗೆ, ಮಕ್ಕಳ ಲಾಲನೆ ಪಾಲನೆ…background  process  ಅಷ್ಟೇ…. ಸಂಪಾದನೆ, ದುಡ್ಡು, ಯಜಮಾನಿಕೆ, ಆಸ್ತಿ , ನಿರ್ಧಾರ ಎಲ್ಲಾದಕ್ಕೂ ಎಲ್ಲವು ಅಪ್ಪಾನೆ … ಆದರು ಗಂಡಸು ಎನ್ನುವ ಧಿಮಾಕಿನಲ್ಲಿ ಅಮ್ಮನನ್ನು ಹಿಡಿದು ಚಚ್ಚಿದ್ದು ನನಗೆ ಜ್ಞಾಪಕ ಇಲ್ಲ …
 … ತೀರ ಕೋಪ ನೆತ್ತಿಗೆ ಹತ್ತಿದರೆ ಹೆಣ್ಣು ಅಂತ ಬಿಡುತ್ತಿದ್ದೇನೆ , ಇಲ್ಲ ಅಂದಿದ್ರೆ ಅವಳನ್ನಾ ಅಂತ ಅಂದಿದ್ದು ನೆನಪು … ಇನ್ನು ನಾವು ಹೆಣ್ಣು ಮಕ್ಕಳು ಎನ್ನುವ ಉದಾಸೀನದಲ್ಲಿ ಹಗುರವಾಗಿ ಮಾತಾಡಿದ್ದಿಲ್ಲ …
ಒಂದು ಫೇಸ್ಬುಕ್ ಸ್ಟೇಟಸ್ ನೋಡಿದೆ “ನಾವು ನಮ್ಮ ಗಂಡ/ಪ್ರಿಯಕರನಿಂದ ಯಾಕೆ ಅಷ್ಟೊಂದು expect  ಮಾಡುತ್ತೇವೆ   ಎಂದರೆ ನನ್ನ ತಂದೆ ಒಬ್ಬ ಪುರುಷನಿಂದ ಬಯಸುವ ಗೌರವವನ್ನು ಆ ಮಟ್ಟಿಗೆ ಏರಿಸಿದ್ದಾರೆ ” ಅಂತ .  
ಹಾಗಂತ ನನ್ನ ಅಪ್ಪ ಏನು ಪುಕ್ಕಲು ಮನೆ ಬೆಕ್ಕಲ್ಲ !!! ಥೇಟ್ ಫಿಲಂಗಳಲ್ಲಿ ತೋರಿಸುವಂತೆ ಊರೆಲ್ಲ ಹೆದರುತ್ತಿದ್ದ ಅದ್ಯಾರೋ ದೊಡ್ಡ ಕುಲದ ಕೆಟ್ಟ ಬ್ರಾಹ್ಮಣನನ್ನು ಎದುರುಹಾಕಿಕೊಂಡು ಊರು ಬಿಡುವ ಹಾಗೆ ಮಾಡಿದ್ದರು…. ಊರ ಪಂಚಾಯ್ತಿ, ರಾಮಾಯಣಗಳನೆಲ್ಲ ಹೆಗಲ ಮೇಲೆ ಹಾಕಿಕೊಂಡು ಬರ್ರೋ ಯಾರು ಬರ್ತಿರೋ, ಎಲ್ಲಿಗೆ ಬರಬೇಕು ಹೇಳ್ರೋ ಅಂತೆಲ್ಲಾ ವಯಸಾದ ಮೇಲೂ ಹಾರಾಡುತ್ತಿದ್ದರು… ಕಾನೂನು , ಅರ್ಜಿ ಅಂತೆಲ್ಲ ದೊಡ್ಡ ದೊಡ್ಡ ಅಧಿಕಾರಿ, ಪುಡಾರಿಗಳನೆಲ್ಲ ಬಾಯಿ ಮುಚ್ಚಿಸಿದ್ದರು ..ಸಮಾಜ ಸೇವೆ, ರಾಜಕೀಯ ಅಂತೆಲ್ಲ ಓಡಾಡಿಕೊಂಡು  ಯಜಮಾನಿಕೆಗಳಿಸಿದ್ದರು ….  
ಹಾಗೆ ನೋಡಿದರೆ ನಾವೇ ಸಪ್ಪೆ …. ಸಾಂಸ್ಕೃತಿಕವಾಗಿ ಎಷ್ಟು ಸಂಪಧ್ಭರಿತರಾಗಿದ್ದರು ಎಂದರೆ ರವಿಂದ್ರ ಕಲಾಕ್ಷೇತ್ರಗಳಲ್ಲಿ ನಟನೆ, ನಾಟಕ ಅಂತ ಅಭಿಮಾನಿಗಳನ್ನು ಗಳಿಸಿದ್ದರು !! ಪುರಂದರ ದಾಸರು, ಶಿಶುನಾಳ  ಶರೀಫರ , ಕನಕ ದಾಸರ, ವಿದ್ಯಾಭೂಷಣ ಸ್ವಾಮಿಗಳ  ಹಾಡುಗಳನ್ನು ಎಷ್ಟು ಭಾವಪೂರ್ಣವಾಗಿ , ಸುಶ್ರಾವ್ಯವಾಗಿ ಹಾಡುತ್ತಿದ್ದರು ಎಂದರೆ ನೆರೆಮನೆಯ ಹೆಂಗಸರು ಕೇಳಿಸಿಕೊಂಡು ಹೊಗಳುತ್ತಿದ್ದರು …… ಕಾದಂಬರಿ, ಕಾವ್ಯ, ಕವನಗಳಲ್ಲಿ ಆಸಕ್ತಿ ಹೊರಳುವಂತೆ ಮಾಡಿದ್ದು ಅವರು  … ಕುವೆಂಪು ಎಂದರೆ ನಮ್ಮ ಗುರುವೆಂದು  ಪರಿಚಯಿಸಿದವರು ಅವರು … ಸಿ ಅಶ್ವಥ್ , ಶಿವಮೊಗ್ಗ ಸುಬ್ಬಣ್ಣ, ಹಿರಣ್ಯಯ್ಯ ನವರ ಬಗ್ಗೆ ಮಾತಾಡಿ ಬೇರೆ ವಲಯಗಳ ಪರಿಚಯಿಸಿದ್ದು ಅವರು ….
ಅವರ handwriting ನಷ್ಟೇ ಅವರು ಬರೆಯುತ್ತಿದ್ದ ಸಾಹಿತ್ಯವೂ  ಚೆಂದವಿರುತ್ತಿತ್ತು….. ಇಲ್ಲದ ಕಲೆಗಳನ್ನು ತಲೆಗೆ ಧಾಟಿಸಿದ್ದರು ..
ತೋಟಗಾರಿಕೆ , ರಿಯಲ್ ಎಸ್ಟೇಟು,   ಕುಡಿತ , ಬೀಡಿ, ಚಳುವಳಿ ಏನಾದರೊಂದು ಗುಂಗು ಇದ್ದೆ ಇರುತ್ತಿತ್ತು …..

ಯಾವುದೋ ಒಂದು ದಿನ ತುಂಬಾ ಪ್ರೀತಿಸುವ ಗಂಡಂದಿರು ಹೆಂಡತಿಗೆ ಮನೆಗೆಲಸದಲ್ಲಿ ಸಹಾಯ ಮಾಡುತ್ತಾರೆ ಎಂದಿದ್ದನ್ನು , ಅರಚಾಡುತ್ತಾ ನಾನೇನು ಷಂಡನಲ್ಲ  ಸೀರೆಯುಟ್ಟು,ಬಳೆತೊಟ್ಟು  ಮನೆಗೆಲಸ ಮಾಡೋದಕ್ಕೆ ಅಂದಿದ್ದ ಅವನು …
ಹಾಗಾದರೆ ಗಂಡಸು, ಗಂಡಸುತನವೆಂದರೆ ಏನು ?

ಮೊನ್ನೆ ಯಾರೋ ವಯಸಾದ ಆಂಟಿ ನನ್ನ ಗಂಡನ ಬಗ್ಗೆ ವಿಚಾರಿಸುತ್ತಾ ಒಂದು ವರ್ಷವಾದರೂ ಅವನು ಬರಲಿಲ್ಲವ ಅಂತ ಕೇಳಿ, ಏನೋ ಅನುಮಾನಗೊಂಡವರಂತೆ  ‘ಲವ್’  ವಿಷಯದಲ್ಲಿ ಅವನು ಹೇಗಿದ್ದಾ ?ದಿನಾ ರಾತ್ರಿ  ತಪ್ಪಿಸದೇ ನಿನ್ನ ಚೆನ್ನಾಗಿ ಲವ್ ಮಾಡುತ್ತಿದ್ದನ ಅಂತ ಕೇಳಿಬಿಟ್ಟರು … ಇತ್ತೀಚಿಗೆ ಹಲಾವಾರು ಜನ ಕೇಳುತ್ತಿರುವ ಪ್ರಶ್ನೆ ಅದೇ ….

   ಇತ್ತೀಚಿಗೆ ಒಂದಷ್ಟು ಹೆಂಡತಿಯರು ಮಾತಿಗೆ ಕೂತಿದ್ದರು …ಮದುವೆಯಾದವರಿಗೆ ಮಾತ್ರ ಸೀಮಿತವಾದ ‘ಆ'(ಆಂಟಿ ಪ್ರಕಾರ ಲವ್ ) ವಿಷಯದ  ಕಡೆ ಮಾತು ಹರಿದಿತ್ತು …
ಒಬ್ಬಳು ಹೇಳಿದಳು ಎಷ್ಟೇ ಜಗಳವಾಗಿರಲಿ, ನನಗೆ ಏನೇ ಹುಷಾರು ತಪ್ಪಿರಲಿ,ಜಾಸ್ತಿದಿನ ನನ್ನ ಬಿಟ್ಟಿರಲು  ನನ್ನ ಗಂಡನಿಗೆ ಸಾಧ್ಯವಿಲ್ಲ … ಮಗುವಾಗಿ ತವರಲ್ಲಿ ಬಾಣಂತನ ಮಾಡಿಸಿಕೊಳ್ಳುತಿದ್ದವಳನ್ನು ಯಾರ ಮಾತುಕೇಳದೆ ಮೂರು ತಿಂಗಳಾದ ತಕ್ಷಣ ಕರೆದುಕೊಂಡು ಬಂದು ಬಿಟ್ಟರು….
ಇನ್ನೊಬ್ಬಳು ಸೇರಿಸಿದಳು ಪ್ಲಾನಿಂಗ್ ಅಂತ ಎಷ್ಟು precaution  ತೆಗೆದುಕೊಳ್ಳುತ್ತಿದ್ದರು  ಒಮ್ಮೆ ಗೊತ್ತೇ ಆಗದಂತೆ  ಆತುರದಲ್ಲಿ  ನಡೆದುಹೋಗಿ ಮಗ ಹುಟ್ಟಿಬಿಟ್ಟ .. ಒಂದೇ ಬಾರಿಗೆ ಏನು ಆಗಲ್ಲ ಅಂದುಕೊಂಡೆವು   ಆದರೆ ನಮ್ಮ ಲೆಕ್ಕಾ ತಪ್ಪಾಗಿಹೋಯಿತು …
ಮತ್ತೊಬ್ಬಳು ಸೇರಿಸಿದಳು ನಮ್ಮ ಮನೆ ಗಂಡಸರದ್ದು ನಾಚಿಕೆ ಇಲ್ಲದ romance … ದೊಡ್ಡವರು, ಚಿಕ್ಕವರು, ನೆಂಟರು  ಯಾರೇ ಇದ್ದರು ಎಳೆದಾಡಿ ಬಿಡುತ್ತಾರೆ , ಎಲ್ಲರೆದುರು ಮುಟ್ಟಿ ತಟ್ಟಿ ಮಾತಾಡಿಸಿಬಿಡುತ್ತಾರೆ.. ಯಾರೇನು ಅಂದುಕೊಳ್ಳುತ್ತಾರೋ ಎಂದು ನಮಗೆ ನಾಚಿಕೆಯಾಗುತ್ತೆ…. ಮನೆಕೆಲಸ ಅಂತ ಕಷ್ಟಪಡುವಾಗ ಬೇರೆಯವರಿಗೆ ಅದನ್ನು ವಹಿಸಿ ನಮ್ಮನ್ನು ಪೂಸಿ ಹೊಡೆಯುತ್ತಾರೆ ….
ಅದೆಲ್ಲದಕ್ಕಿಂತಲೂ ಭಿನ್ನವಾದ ಸ್ಟೋರಿಯನ್ನ ಆಂಟಿ ಒಬ್ಬರು ಹೇಳಿದರು … ಅವರೂರಲ್ಲಿ most of  the  ಗಂಡಸರು  ಕುಡುಕರಂತೆ… ಮತ್ತು ವಯಸಾದ ಅತ್ತೆಯಂದಿರು ಸೊಸೆ ಊಟ ಇಕ್ಕಲಿಲ್ಲ , ಬಟ್ಟೆ ಒಗೆದು ಕೊಡಲಿಲ್ಲ ಅಂತ ಗೋಳಾಡುತ್ತ ಶಾಪ ಹಾಕುತ್ತಿರುತ್ತಾರಂತೆ… ನಾನು ಕೇಳಿದೆ –  ಅಮ್ಮನ ಪರ ನಿಂತು ಹೆಂಡತಿಯರನ್ನು ಗಂಡಂದಿರು ದಂಡಿಸೋಲ್ವಾ ಅಂತ… ಅದಕ್ಕವರು ನಮ್ಮ ಊರಲ್ಲಿ  ಅತ್ತೆ ಸೊಸೆ ಜಟಾಪಟಿ ತುಂಬಾ  ಮಾಮುಲೂ , ಗಂಡಸರು ತಲೆಯನ್ನೇ ಕೆಡಿಸಿಕೊಳ್ಳೋಲ್ಲ , ತಾಯಿಯನ್ನು ಬೇಕಾದರೂ  ದೂರಮಾಡಿಕೊಳ್ಳುತ್ತಾರೆ , ಹೆಂಡತಿಯನ್ನು ಬಿಡರು… ಕುಡಿದ ಮತ್ತಿನಲ್ಲಿ ಎಳೆದುಕೊಂಡು ಹೋದಾದರು ಲವ್ ಮಾಡಿಬಿಡುತ್ತಾರೆ …ಅಂದರು  
ಎಲಾ ಗಂಡಸರೇ ಅಂದು ಕೊಂಡೆ !!!
ಇನ್ಯಾರೋ ಅಂದರು ನಿನ್ನ ಮೇಲೆ ಲವ್ ಇದ್ದಿದ್ದರೆ ಹುಡುಕಿಕೊಂಡಾದರು ಬಂದಿರುತ್ತಿದ್ದ ಅವನು !!!!!
ಒಂದಷ್ಟು ಅಣ್ಣಂದಿರು ಅಂದಿದ್ದರು , ನಮಗೆ ಆಶ್ಚರ್ಯವಾಗುತ್ತೆ , ಹೆಂಡತಿ ಬೇಕು ಅಂತ ಅವನಿಗೆ ಅನಿಸೋದೇ ಇಲ್ಲವ ಅಂತ… ಇನ್ಯಾರೋ ದೊಡ್ಡವರು glass  ಕುಟ್ಟಿ ಅಂದರು , ನೀನಲ್ಲ ಅಂದರೆ ಬೇರೆ ಹೆಂಡತಿಯಾದ್ರು  ಬೇಕು ಅನ್ನಿಸಿ ಏನಾದರು ವ್ಯವಸ್ತೆ ಮಾಡಿಕೊಳ್ಳಬೇಕಿತ್ತು ಅವನು …..    

ಮಗನ ರಸಿಕತೆಯನ್ನು ಮೆಚ್ಚಿ ತುದಿ ಮೀಸೆಯಲ್ಲೇ ಮೆಚ್ಚುವ ಅಪ್ಪಂದಿರನ್ನು ನೋಡಿದ್ದೇ … ಊರಿಗೊಂದು ಅಕೌಂಟ್ ಇಟ್ಟಿದ್ದವರ ಬಗ್ಗೆಯೂ ಕೇಳಿದ್ದೆ,ಕೈಗೂಸು ಇದ್ದಾಗಲೇ ಮತ್ತೆ ಹೆಂಡತಿಯನ್ನು ತಾಯಿ ಮಾಡಿದ ಪುನ್ಯಾತ್ಮರನ್ನೂ ನೋಡಿದ್ದೇ , ನಾನು ಚಿಕ್ಕವಳಿದ್ದಾಗ ಯಾರೋ ನೆಂಟರ ಮನೆಯಲ್ಲಿ ನಮ್ಮ ಎದುರೆ ಹೆಂಡತಿಯನ್ನು ಹಾಸಿಗೆಗೆ ನೂಕಿ ಮುತ್ತಿಕ್ಕಿದವನನ್ನು ನೋಡಿದ್ದೇ, ವಯಸಾದರು ಒಂದು ದಿನವೂ ಹೆಂಡತಿಯನ್ನು ಬಿಟ್ಟಿರಲಾರದ ಹಳೆ ಹುಣಸೆಮರವನ್ನು ಕಂಡಿದ್ದೆ , ಮದುವೆಯಾದ ಹೊಸದರಲ್ಲಿ ಹಗಲೆಲ್ಲ ಅಕ್ಕ ಭಾವ ರೂಮು  ಜಡಿದುಕೊಂಡು ಯಾಕೆ ಅಷ್ಟು ಬ್ಯುಸಿ ಇರುತ್ತಾರೆ ಅಂತ ಕೋಪಮಾಡಿಕೊಳ್ಳುತ್ತಿದ್ದೆ   ….

ಬಟ್ ಮೇನ್ ವಿಷಯದಲ್ಲಿ ತುಂಬಾ ಜ್ಞಾನವಿಲ್ಲದ ಅಪ್ರಬುದ್ಧಳು  ನಾನು …   ಏನೇನೋ ಸಣ್ಣ ಕಾರಣಗಳಿಗೆ ಹೆಚ್ಚು ಕಡಿಮೆ ದಿನಾ ಮುನಿಸಿಕೊಂಡು ತಿರುಗಿ ಮಲಗುತ್ತಾನೆ  ಎಂದರೆ ಏನು ?
ಯಾರೋ ಆಂಟಿ ಅಂದರು  ಆ ನನ್ನ ಮಗನಿಗೆ divorce  ಕೊಡಬೇಡ , ಹಾಗೆ ದಿನಾ ದಿನಾ ಸಾಯಲಿ …..ನಿಜವಾಗಲೂನ?

ಒಮ್ಮೆ ಅವನಮ್ಮ ಅಂದಿದ್ದರು ಇವಳೇ ಬೇಕು ಅಂತ  ಮೆಚ್ಚಿ ಮದುವೆಯಾದೆ ಏನೋ , ಕೇಳಿದ್ದಿದ್ದರೆ ಗಂಟೆ ಗಂಟೆಗೆ  ಒಬ್ಬೊಬ್ಬಳನ್ನು ತಂದು ನಿಲ್ಲಿಸುತ್ತಿದ್ದೆನಲ್ಲೋ … ಅವರ ಬಗ್ಗೆ ಓವರ್ confidenso ಅಥವ  ಮಗನ ಮೇಲೆ ಅಷ್ಟೊಂದು  ಓವರ್ confidenso  ಗೊತ್ತಾಗುತ್ತಿಲ್ಲ .. ಹಾಗಿದ್ದರೆ ಅದಕ್ಕೆ  ಆಯಮ್ಮ , ಅವನಕ್ಕ ಏನಾದರು ವ್ಯವಸ್ತೆ ಮಾಡಿಟ್ಟಿದ್ದಾರ ಈಗ ?

‘ಷೂ’ ನ ಒಂದು ಸರ್ತಿ ಬೇಡಾ ಅಂತ ಬಿಸಾಕಿದರೆ ಎಷ್ಟೇ costly ಆದರು ಮತ್ತೆ ಹಾಕಲ್ಲ ಅಂದಿದ್ದ ಪೋಲಿಸಿನವರ ಎದುರು  … !!!  ಕೋಪ ಬಂದಾಗ ಹೆಂಗೆಂದರೆ ಹಂಗೆ ಅವನಾಡುವ ಹುಚ್ಚು ಮಾತುಗಳ ಬಗ್ಗೆ ಆಗಲೇ ನನಗೆ ಅನುಭವವಾಗಿತ್ತು……. ಹೆಚ್ಚೇನೂ ಕೋಪ ಬರಲಿಲ್ಲ..ನನಗೆ ಹರ್ಟ್ ಮಾಡಬೇಕು, ಅವಮಾನ ಮಾಡಬೇಕು ಎನ್ನುವ ಕಾರಣಕ್ಕೆ ಅಸಂಭದ್ದವಾಗಿ, ಅತಿರೇಖದಲ್ಲಿ ಆಡಿದ ಮಾತನ್ನು ಗಂಡ ಎನ್ನುವ ಮಮತೆಯಲ್ಲಿ ಕ್ಷಮಿಸಿಬಿಟ್ಟೆ  ..ಅವನ ಜೊತೆ ಬಂದಿದ್ದ ಸ್ನೇಹಿತರು ಮುಖ ಕಳೆದುಕೊಂಡು ‘ಏನೇ ಆಗಿದ್ದರು  ,ಹಾಗೆಲ್ಲ ಅವನು ಹೇಳಿದ್ದು ತಪ್ಪು’ ಅಂತ ತಲೆತಗ್ಗಿಸಿ ಹೇಳಿದರೆ, ಅವನು ಹೋದ ನಂತರ ಪೊಲೀಸರು ಎಷ್ಟು ಕೋಟಿಗೆ ಬಾಳುತ್ತಾನೋ ಸೂ.. ಮಗ ಎಂದರು . ಕೆಲವು ಗಂಡಸರು ಅವನ ಓವರ್ confidence ಕೇಳಿ ದಂಗಾಗಿಹೋದರು .. ಯಾರೋ ಒಬ್ಬರು ಎಷ್ಟು ಜೊತೆ ಷೂ  ಮಡಗಿರಬಹುದೋ ಅವನು ಎಂದು ಕುಹಕವಾಡಿದರು.
ಆದರೆ ಈಗ ನೆನೆಸಿ ಕೊಂಡರೆ ನಗು ಬರುತ್ತದೆ ನನಗೆ  …..
costly  ಶೂನ ಬೇಡ ಅಂತ ಬಿಸಾಕಿದ ಎಂದರೆ ಹಾಕಿಕೊಳ್ಳುವ ಜರೂರತ್ತೆ ಅವನಿಗಿಲ್ಲ  ಅಂತಿರಬೇಕು ಇಲ್ಲವೇ ಬರಿಗಾಲಲ್ಲಿ ನಡೆದಾಡುತ್ತಾ  ನೋಯಿಸಿಕೊಳ್ಳಬೇಕು ….!!!!!!

ಪಂಚರಂಗಿ ಸಿನಿಮಾದಲ್ಲಿ ಅನಂತನಾಗ್ ನಿರ್ವಹಿಸಿರುವ ಪಾತ್ರ ಹೇಳುತ್ತದೆ ಗಂಡು ಮುಂಡೆಮಕ್ಳು, ಮಾತಾಡೋದೆಲ್ಲ ಉಲ್ಟಾನೆ… ನಿನ್ನ ತುಂಬಾ ಪ್ರೀತಿಸುತ್ತಾನೆ ಆದರೆ ಇಲ್ಲ ಅಂತ ಉಲ್ಟಾ ಮಾತಾಡ್ತಾನೆ … ನನ್ನ  ಹೆಂಡತಿಯು ನನ್ನ  ತುಂಬಾ  ಪ್ರೀತಿಸುತ್ತಿದ್ದಳು . ಆದರೆ ಪ್ರೀತಿಗಿಂತ ಬೇರೆಲ್ಲಾ ದೊಡ್ಡದಾಗಿ ಕಾಣಿಸಿಬಿಡುತಿತ್ತು ನನಗೆ , ಯಾವುದೋ ಸಣ್ಣ ಜಗಳಕ್ಕೆ ಮನೆ ಬಿಟ್ಟು ಹೊರಟುಬಂದೆ .. ಹಿಮಾಲಯ ಅಲೆದೆ …ಅಷ್ಟು ವರ್ಷಗಳು ಆಧ್ಯಾತ್ಮ, ದೇವರು ಅಂತೆಲ್ಲಾ ಸುತ್ತಾಡಿದೆ … ಮತ್ತ ಪ್ರೀತಿಬೇಕು ಅನಿಸಿತು …   ಹೆಂಡತಿ, ಮಕ್ಕಳನ್ನು ಹುಡುಕಿ ಬಂದೆ… ನೋಡಿದರೆ  ಅವರು ಹಾಯಾಗೆ ಇದ್ದರು  !!!!

ಸಿನಿಮಾದಲ್ಲಿ ಹೀರೋಗಳು ಗುಂಪು ಗುಂಪಲ್ಲಿ villain ಗಳನ್ನು  ಬಗ್ಗು ಬಡಿದು ಬಿಸಾಕುತ್ತಾರಲ್ಲ, ಕನ್ನಡ ಸಿನಿಮಾ ನಿರ್ದೇಶಕರ   ಪ್ರಕಾರ  ಅದು ಗಂಡಸುತನವಿರಬೇಕು ….  

ನಮ್ಮೂರ ಕಡೆ ಕತೆ ಹೇಳುತ್ತಿದ್ದರು ನಿಮ್ಮ ತಾತ, ಇನ್ನೊಂದಿಬ್ಬರು ಊಟಕ್ಕೆ ಕೂತರೆ ಒಂದು ಕುರಿಯನ್ನು ಮುಗಿಸಿಬಿಡುತ್ತಿದ್ದರು… ಅದೆಷ್ಟೋ ಮುದ್ದೆ ತಿನ್ನುತಿದ್ದರು …

ಮತ್ತೊಂದು ಕತೆ ಅವನ್ಯಾರೋ  ಎಂತಹ  ಮರವನ್ನು ಬೇಕಾದರೂ ತಾಕತ್ತಿನಲ್ಲಿ  ಕಡೆದು ಹಾಕಬಲ್ಲವನಾಗಿದ್ದನಂತೆ  

ಒಬ್ಬ ಲಾಯೆರ್ ಹೇಳಿದರು , ಗಂಡಸಿನ ಅಹಂ ಬಾರಿ ಕಷ್ಟ , ಹುಚ್ಚುನನ್ನ ಮಕ್ಕಳು, ಮನೆ ಹೆಂಗಸರು ಇದ್ದಿದ್ದು ಹಾಳು ಮಾಡುತ್ತಾರೆ ….
 
ಸೀತೆ ಮೇಲೆ ಅನುಮಾನ ಪಟ್ಟ ರಾಮನು ಒಬ್ಬ ಗಂಡಸು , ಎಷ್ಟೋ ಗೋಪಿಕಾಸ್ತ್ರೀಯರ ಗಂಡ ಕೃಷ್ಣನು ಗಂಡಸು .. ಕಡೆಗೆ ಹೆಂಡತಿಗೆ ಅರ್ಧ ದೇಹವನ್ನೇ ಬಿಟ್ಟುಕೊಟ್ಟು  ಅರ್ಧನಾರೀಶ್ವರನಾದ  ಈಶ್ವರನೂ ಲೋಕಮಾನ್ಯತೆ ಪಡೆದ  ಗಂಡಸು  … ಹಾಗಿದ್ದರೆ ಗಂಡಸುತನವೆಂದರೆ ಏನು ?
ನನ್ನ ಕೇಳಿದರೆ ಹೆಣ್ಣನ್ನು handle ಮಾಡುವ successfull ಕಲೆ ಗೊತ್ತಿರುವವನೆ ನಿಜವಾದ ಗಂಡಸು … ಅದು ಯಾವ ರೂಪದ ಹೆಣ್ಣಾದರು ಅಷ್ಟೇ ….

ಆದರೆ ಹೆಣ್ಣೇ ಅಲ್ಲ ಅಂತ ನನ್ನ disqualify ಮಾಡಿದ ಅವನ ಗಂಡಸುತನ , ನಾನು ಸಂಸಾರಸ್ತೆ ಅಲ್ಲ ಅನಿಸಿದ ಅವರ ಜ್ಞಾನ …. ಎನ್ಹೇಳ  ಬೇಕೋ ಗೊತ್ತಿಲ್ಲ
 ….